ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಜನರು ಭೀತಿಗೊಳಗಾಗಿದ್ದಾರೆ. ಈ ನಡುವೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಕೆ ಪಾಟೀಲ್ ನೀಡಿರುವ ಅಂಕಿಸಂಖ್ಯೆಗಳು ಜನರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಚ್ಕೆ ಪಾಟೀಲ್ ಇಟಲಿ ಸೇರಿದಂತೆ ಹೊರದೇಶಗಳಿಂದ ಕಳೆದ ಎರಡು ದಿನಗಳಿಂದ 22,000 ಜನರು ಬರುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಭಾನುವಾರ ಟ್ವೀಟ್ ಮಾಡಿದ ಅವರು “ ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೋಟೆಲಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ. ಕ್ರಮ ಕೈಗೊಳ್ಳಿ” ಎಂದಿದ್ದರು. ಆದರೆ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ಇದನ್ನು ನಿರಾಕರಿಸಿದ್ದಾರೆ. "ಹಿರಿಯ ನಾಯಕರಿಗೆ ಮಾಹಿತಿಯ ಕೊರತೆ ಇದ್ದಂತಿದೆ . ಎಲ್ಲಾ ದೇಶಗಳಿಂದ ಬೆಂಗಳೂರಿಗೆ ಬರುತ್ತಿರುವವರು 2000 ಜನರಿಗಿಂತ ಹೆಚ್ಚಿಲ್ಲ" ಎಂದಿದ್ದಾರೆ. ಅಲ್ಲದೆ, ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಇಂದಿನಿಂದ ಸ್ಥಗಿತಗೊಳಿಸಲಾಗಿದೆ. ದಯವಿಟ್ಟು ಸಹಕರಿಸಿ ವದಂತಿಗಳಿಗೆ ಇದು ಸಮಯ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈಗಾಗಲೇ ದುಬೈನಿಂದ ಬಂದಿರುವ 195 ಪ್ರಯಾಣಿಕರ ಪೈಕಿ ಆರು ಜನರಲ್ಲಿ ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದಿದ್ದು ಅವರನ್ನು ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಿದೆ. ಅಲ್ಲದೆ ಉಳಿದ ಪ್ರಯಾಣಿಕರಿಗೆ ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ವಾರ್ಡಿನಲ್ಲಿ ನಿಗಾದಲ್ಲಿ ಇಡಲಾಗಿದೆ. ಎಚ್.ಕೆ ಪಾಟೀಲ್ ಅವರ ಪ್ರಕಾರ ಬೆಂಗಳೂರಿಗೆ ಇಟಲಿ ಸೇರಿದಂತೆ ಹೊರದೇಶಗಳಿಂದ 22,000 ಪ್ರಯಾಣಿಕರು ಆಗಮಿಸಿದರೆ ಅವರನ್ನು ತಪಾಸಣೆಗೆ ಒಳಪಡಿಸುವುದು ಹಾಗೂ ನಿಗಾದಲ್ಲಿ ಇಡುವುದು ಸುಲಭದ ಮಾತಲ್ಲ. ಆದರೆ ಮಾಜಿ ಸಚಿವರು ನೀಡಿರುವ ಮಾಹಿತಿ ನಿಖರವಾಗಿದೆಯೇ ಅಥವಾ ತಪ್ಪಾಗಿ ನಮೂದಿತವಾಗಿದೆಯೇ ಎಂಬುವುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ.
from India & World News in Kannada | VK Polls https://ift.tt/2QBfUC6