ಮುಂಬೈ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ದೇಶವನ್ನು 21 ದಿನಗಳ ಕಾಲ ಲಾಕದ್ಡೌನ್ ಸ್ಥಿತಿಯಲ್ಲಿ ಇಡಲಾಗಿದೆ. ಯಾರೂ ಕೂಡ ಮನೆಯಿಂದ ಹೊರಬರದಂತೆ ಹಾಗೂ ಎಲ್ಲಿಯೂ ಪ್ರಯಾಣ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೇ ಲಾಕ್ಡೌನ್ ಆದೇಶವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳೂ ಬಿಗಿ ಬಂದೋಬಸ್ತ್ ಏರ್ಪಡಿಸಿವೆ. ಆದರೆ ಲಾಕ್ಡೌನ್ ಆದೇಶದಿಂದ ಒಂದು ನಿರ್ದಿಷ್ಟ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಅನ್ಯ ರಾಜ್ಯಗಳ ಜನ ಅದರಲ್ಲೂ ವಲಸೆ ಕಾರ್ಮಿಕ ವರ್ಗ ತುಸು ಸಂಕಷ್ಟಕ್ಕೀಡಾಗಿದೆ. ಏಕಾಏಕಿ ಲಾಕ್ಡೌನ್ ಆಗಿರುವುದರಿಂದ ತಮ್ಮ ಮಾತೃ ರಾಜ್ಯಗಳಿಗೆ ತೆರಳದೇ ಕಾರ್ಮಿಕರು ಪರದಾಡುತ್ತಿದ್ದಾರೆ. ಈಗಾಗಲೇ ಕೆಲವು ತಮ್ಮ ಕುಟುಂಬ ಸಮೇತರಾಗಿ ನಡೆದುಕೊಂಡೇ ತಮ್ಮ ತಮ್ಮ ಮನೆಗಳನ್ನು ಸೇರುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ತೆಲಂಗಾಣದಿಂದ ರಾಜಸ್ಥಾನಕ್ಕೆ ಸರ್ಕಾರದ ಆದೇಶದಂತೆ ಅಗತ್ಯ ವಸ್ತುಗಳನ್ನು ಹೊತ್ತು ತೆರಳುತ್ತಿದ್ದ ಟ್ರಕ್ಗಳಲ್ಲಿ 300 ಅಧಿಕ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದವಲಸೆ ಕಾರ್ಮಿಕರು, ತಮ್ಮ ತಮ್ಮ ಮನೆಗಳಿಗೆ ತೆರಳಲು ಅನ್ಯ ಮಾರ್ಗವಿಲ್ಲದೇ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ನಲ್ಲೇ ಪ್ರಯಾಣ ಬೆಳೆಸಿದ್ದರು. ತೆಲಂಗಾಣದಿಂದ ರಾಜಸ್ಥಾನಕ್ಕೆ ತರಳುತ್ತಿದ್ದ ಈ ಎರಡು ಟ್ರಕ್ಗಳನ್ನು ತಡೆದ ಮುಂಬೈ ಪೊಲೀಸರು, ವಿಚಾರಣೆ ವೇಳೆ ಅನುಮಾನಗೊಂಡು ಕಂಟೇನರ್ ಬಾಗಿಲು ತೆರೆದಾಗ ಒಳಗಡೆ 300 ಕ್ಕೂ ಅಧಿಕ ವಲಸೆ ಕಾರ್ಮಿಕರು ಇರುವುದನ್ನು ಕಂಡು ದಂಗಾಗಿದ್ದಾರೆ. ಸದ್ಯ ಡ್ರೈವರ್ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 300ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಕ್ಕೆ ಕಳುಹಿಸುವುದು ಹೇಗೆ ಎಂದು ಚಿಂತಿಸುತ್ತಿದ್ದಾರೆ.
from India & World News in Kannada | VK Polls https://ift.tt/2UjywJ8