ಕೊರೊನಾಗಾಗಿ ಲಾಕ್‌ಡೌನ್, ಪೌರಕಾರ್ಮಿಕರ ಗೋಳು ಕೇಳುವವರು ಯಾರು?

ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಜನರು ತುರ್ತು ಸಂದರ್ಭ ಹೊರತು ಪಡಿಸಿ ಯಾವುದೇ ಕಾರಣಕ್ಕಾಗಿ ಬೀದಿಗೆ ಇಳಿಯುವ ಹಾಗಿಲ್ಲ. ಐಟಿ-ಬಿಟಿ ಕಂಪನಿಗಳು, ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು ಎಲ್ಲವೂ ಸ್ಥಗಿತಗೊಂಡಿದೆ. ಕೆಲಸಗಾರರಿಗೆ ರಜೆ ಅಥವಾ ವರ್ಕ್ ಫ್ರಂಮ್ ಹೋಂ ನೀಡಲಾಗಿದೆ. ಆದರೆ ವೈದ್ಯರು, ಪೊಲೀಸರಂತೆ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವವರು ಪೌರಕಾರ್ಮಿಕರು. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಸ ಸಂಗ್ರಹ ಹಾಗೂ ಸ್ವಚ್ಛತೆ ಕಾಪಾಡಲು ಬೀದಿಯಲ್ಲಿದ್ದಾರೆ. ಆದರೆ ಇವರಿಗೆ ಸುರಕ್ಷತೆಯ ಜೊತೆಗೆ ಕನಿಷ್ಠ ಸಾರಿಗೆ ಸೌಲಭ್ಯವನ್ನು ಸರ್ಕಾರ ನೀಡಲಿಲ್ಲ.ಇದರಿಂದಾಗಿ ನಡೆದುಕೊಂಡೇ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇವರದ್ದಾಗಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಪೌರಕಾರ್ಮಿಕರು ಕಸಸಂಗ್ರಹ, ಬೀದಿ ಸ್ವಚ್ಛತೆ ಹಾಗೂ ಮ್ಯಾನ್‌ ಹೋಲ್‌ಗಳ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಲ್ಲರೂ ಮನೆಯಲ್ಲಿರುವಂತೆ ಸೂಚನೆಯನ್ನು ಸರ್ಕಾರ ನೀಡಿದೆ. ಜನರ ಆರೋಗ್ಯಕ್ಕೆ ಆದ್ಯತೆಯನ್ನು ಘೋಷಣೆ ಮಾಡಿದೆ. ಆದರೆ ಪೌರಕಾರ್ಮಿಕರ ಸುರಕ್ಷತೆಗೆ ಸರ್ಕಾರ ಕೈಗೊಂಡ ಕ್ರಮಗಳು ಏನು ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. “ಎಲ್ಲರೂ ಮನೆಯಲ್ಲಿದ್ದಾರೆ, ನಾವು ಕೆಲಸ ಮಾಡಬೇಕಿದೆ. ಆದರೆ ಕನಿಷ್ಠ ವಾಹನದ ಸೌಕರ್ಯವನ್ನು ನಮಗೆ ನೀಡಿಲ್ಲ. ಇದರಿಂದ ದೂರದ ಪ್ರದೇಶಗಳಿಗೆ ನಡೆದುಕೊಂಡೇ ಹೋಗಬೇಕಿದೆ. ಕೊರೊನಾದಿಂದ ರಕ್ಷಣೆಗಾಗಿ ಕೆಲವರಿಗೆ ಮಾಸ್ಕ್ ನೀಡಲಾಗಿದೆ. ಆದರೆ ಹಲವರಿಗೆ ಮಾಸ್ಕ್‌ ಕೂಡಾ ಇಲ್ಲ” ಎಂದು ನೋವು ತೋಡಿಕೊಂಡರು ಪೌರಕಾರ್ಮಿಕರೊಬ್ಬರು. “ಎಲ್ಲರೂ ಕೊರೊನಾ ಭೀತಿಯಿಂದ ಮನೆಯಲ್ಲಿದ್ದರೂ ಪೌರಕಾರ್ಮಿಕರು ಕೆಲಸಕ್ಕೆ ಹೋಗಬೇಕಾದದ್ದು ಅನಿವಾರ್ಯ. ಆದರೆ ಅವರಿಗೆ ಸೂಕ್ತ ಸುರಕ್ಷತಾ ಸೌಲಭ್ಯಗಳನ್ನು ನೀಡಬೇಕಾಗಿದೆ. ಗ್ಲೌಸ್, ಮಾಸ್ಕ್‌ಗಳ ಪೂರೈಕೆಯನ್ನು ಸರ್ಕಾರ ಮಾಡಿಲ್ಲ. ಜನರು ಮನೆಯಲ್ಲಿ ಇರುವುದರಿಂದ ಕಸದ ಉತ್ಪಾದನೆ ಜಾಸ್ತಿಯಾಗುತ್ತದೆ. ಇವೆಲ್ಲವನ್ನು ಸಂಗ್ರಹ ಮಾಡಬೇಕಾದವರು ಪೌರಕಾರ್ಮಿಕರು. ಈ ನಿಟ್ಟಿನಲ್ಲಿ ಸರ್ಕಾರ ಅವರ ಸುರಕ್ಷತೆಗೆ ಗಮನ ಹರಿಸಬೇಕು ಹಾಗೂ ಹೆಚ್ಚುವರಿ ಭತ್ಯೆಗಳನ್ನು ನೀಡಬೇಕು” ಎನ್ನುತ್ತಾರೆ ಪೌರ ಕಾರ್ಮಿಕರ ಸಂಘಟನೆಗಳ ರಾಜ್ಯ ಉಪಾಧ್ಯಕ್ಷ ಧರ್ಮೇಶ್ ಹಾಸನ್ . ನಗರ ಗ್ರಾಮಗಳನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು ಸ್ವಚ್ಛವಾಗಿರಲು ಸರ್ಕಾರ ಸ್ನಾನಗೃಹಗಳನ್ನು ಸ್ಥಾಪಿಸಿದೆ. ಆದರೆ ಅವುಗಳು ಇದ್ದೂ ಇಲ್ಲದಂತಾಗಿವೆ. ನೀರು ಪೂರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳು ಅಲ್ಲಿಲ್ಲ. ಇದರಿಂದ ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಊರನ್ನೆಲ್ಲಾ ಸ್ವಚ್ಛ ಮಾಡಿ ತಾವು ಮಾತ್ರ ಅಶುದ್ಧಿಯಾಗಿ ತಮ್ಮ ಕಾಲೊನಿಗಳಿಗೆ ಹೋಗಬೇಕಾಗ ಪರಿಸ್ಥಿತಿ ಇವರದ್ದು. ಇದು ಸೋಂಕು ಹರಡಲು ಕಾರಣವೂ ಆಗಬಹುದು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸವೂ ನಡೆಯಬೇಲಿದೆ. “ಕೊರೊನಾ ಭಯದ ನಡುವೆಯೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬ ತರಬೇತಿ ಇಲ್ಲ. ಇದೀಗ ಔಷಧಿ ಸಿಂಪಡಿಸಲು ಇವರನ್ನು ಬಳಕೆ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನೆಗಳನ್ನು ಸರ್ಕಾರ ನೀಡಿದ್ದು, ಹಲವು ಜಿಲ್ಲೆಗಳ ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯವನ್ನು ನೀಡಿಲ್ಲ. ಕರ್ನಾಟಕ ಲಾಕ್‌ಡೌನ್ ಇರುವುದರಿಂದ ಕೆಲಸ ಮಾಡುವ ಸಂದರ್ಭದಲ್ಲಿ ಊಟ ತಿಂಡಿಗೂ, ಕುಡಿಯಲು ನೀರಿಗೂ ಪರದಾಡುತ್ತಿದ್ದಾರೆ. ಅವರ ಸ್ವಚ್ಛತೆಯ ಕುರಿತಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಯಾವುದೇ ಗಮನವನ್ನು ಹರಿಸುತ್ತಿಲ್ಲ. ಇದು ಸರ್ಕಾರದ ಬೇಜಾವಾಬ್ದಾರಿಯುತ ನಡೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಜ್ಯ ಮುನ್ಸಿಪಲ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್. ರಾಜ್ಯದಲ್ಲಿ ಮ್ಯಾನ್ ಹೋಲ್ ಸ್ವಚ್ಛತೆ, ಬೀದಿ ಕಸ ಗುಡಿಸುವವರು ಹಾಗೂ ಮನೆಗಳಿಂದ ಕಸ ಸಂಗ್ರಹ ಮಾಡುವ ಒಟ್ಟು ಪೌರಕಾರ್ಮಿಕರ ಸಂಖ್ಯೆ 60,000 ಇದೆ. ಸದ್ಯ ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ನಗರ, ಜಿಲ್ಲೆ, ಗ್ರಾಮಗಳನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರ ಸುರಕ್ಷತೆಯ ಕುರಿತಾಗಿ ಸರ್ಕಾರ ಗಮನಹರಿಸಬೇಕಾಗಿದೆ. ಅಲ್ಲದೆ ಹೆಚ್ಚುವರಿ ಭತ್ಯೆಯನ್ನು ನೀಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕಿದೆ.


from India & World News in Kannada | VK Polls https://ift.tt/2UywJyN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...