ಹೊಸದಿಲ್ಲಿ: ಸೋಂಕು ವಿಪರೀತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಟೀಮ್ ಇಂಡಿಯಾ ಕ್ರಿಕೆಟಿಗರು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಆದರೆ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಈ ಸಮಯವನ್ನು ಸುಮ್ಮನೆ ಪೋಲು ಮಾಡಲು ಬಯಸಿಲ್ಲ. ಇದರ ಬದಲು ಕ್ರಿಕೆಟೇತರ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನು ಜಾದೂ ಎಂದು ಕರೆಯಬೇಕೋ ಅಥವಾ ಟಿಕ್ ಎಂದು ಸಂಭೋಧಿಸಬೇಕೋ ಎಂಬುದನ್ನು ನೀವೇ ನಿರ್ಧರಿಸಬೇಕು. ಒಟ್ಟಿನಲ್ಲಿ ತಮ್ಮ ಸೋದರಿಯನ್ನು ಚಮಕ್ ಮಾಡುವಲ್ಲಿ ಮಾತ್ರ ಶ್ರೇಯಸ್ ಅಯ್ಯರ್ ಯಶಸ್ವಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು () ತನ್ನ ಅಧಿಕೃತ ಪುಟದಲ್ಲಿ ಈ ಬಗ್ಗೆ ವಿಡಿಯೋವನ್ನು ಹಂಚಿದೆ. ಅಷ್ಟೇ ಯಾಕೆ ಜಾದೂಗಾರ ಎಂದು ಸಂಬೋಧಿಸಿದ್ದು, ಈ ಕಠಿಣ ಸಮಯದ ನಡುವೆಯೂ ಸಂತಸವನ್ನು ಹರಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ. ಹಾಗೆಯೇ ಎಲ್ಲರೂ ಮನೆಯಲ್ಲಿರುವ ಈ ಸಂದರ್ಭದಲ್ಲಿ ಮತ್ತಷ್ಟು ಮನರಂಜನೆಯನ್ನು ನೀಡುವಂತೆ ತಿಳಿಸಿದೆ. ಕೋವಿಡ್ 19 ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಪ್ರದೇಶಗಳಲ್ಲಿ ಭಾಗಿಯಾಗದಂತೆ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟಿಗರೆಲ್ಲರೂ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಡೀ ದೇಶವೇ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದೆ. ಸಮಾಜದಿಂದ ಆದಷ್ಟು ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಈ ನಡುವೆ ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಕಾರ್ಡ್ನಲ್ಲಿ ಟ್ರಿಕ್ ಮೆರೆದಿದ್ದಾರೆ. ಈ ಮೊದಲು ಸ್ವತ: ಶ್ರೇಯಸ್ ಅಯ್ಯರ್ ಕೂಡಾ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಸುರಕ್ಷಿತವಾಗಿರುವಂತೆಯೇ ವಿನಂತಿ ಮಾಡಿಕೊಂಡಿದ್ದರು. ಕೋವಿಡ್ 10 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dghJOt