ಕ್ರೈಸ್ಟ್ಚರ್ಚ್: ಪ್ರವಾಸಿ ಭಾರತ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಗೆಲುವು ಬಾರಿಸಿರುವ ನ್ಯೂಜಿಲೆಂಡ್, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೊದಲು ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲೂ ಕೇನ್ ವಿಲಿಯಮ್ಸನ್ ಪಡೆ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಇದೇ ಮೊದಲ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲುಗಳಿಗೆ ಶರಣಾಗಿದೆ. ತದಾ ನಂತರ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಕಪ್ತಾನ , ತಾವು ಅಂದುಕೊಂಡಂತೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಯಶಸ್ವಿಯಾಗಲಿಲ್ಲ ಎಂದು ಸರಣಿ ಸೋಲನ್ನು ಒಪ್ಪಿಕೊಂಡಿದ್ದಾರೆ. "ಮೊದಲ ಟೆಸ್ಟ್ ಪಂದ್ಯದಲ್ಲಿ ಬೇಕಾದಷ್ಟು ಬದ್ಧತೆಯನ್ನು ತೋರಲಿಲ್ಲ. ದ್ವಿತೀಯ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಆಡಿದರೂ ಸಣ್ಣ ಅಂತರದಿಂದ ಹಿನ್ನೆಡೆ ಅನುಭವಿಸಿದೆವು. ನೀವು ಕುಳಿತುಕೊಂಡು ಸರಣಿಯನ್ನು ಅವಲೋಕಿಸಿದಾಗ, ನ್ಯೂಜಿಲೆಂಡ್ ಬೌಲರ್ಗಳು ಬೌಲಿಂಗ್ ಮಾಡಿದ ರೀತಿಗೆ ಶ್ರೇಯಸ್ಸು ಸಲ್ಲಬೇಕು. ದೀರ್ಘಾವಧಿಯ ವರೆಗೆ ನಿಖರವಾಗಿ ದಾಳಿ ಮಾಡಿದರು. ರನ್ ಗಳಿಸಲು ಅತಿಯಾದ ಹೊಡೆತಗಳನ್ನು ಆಡಬೇಕಿತ್ತು. ನಾವು ನಮ್ಮ ಯೋಜನೆಗಳನ್ನು ಕಾರ್ಯನಿರ್ವಹಿಸುವಲ್ಲಿ ವಿಫಲರಾದೆವು. ಇನ್ನೊಂದೆಡೆ ತಮ್ಮದೇ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್ ಉತ್ತಮವಾದ ಕ್ರಿಕೆಟ್ ಆಡಿದೆ" ಎಂದರು. "ನ್ಯೂಜಿಲೆಂಡ್ ಬೌಲರ್ಗಳು ಸ್ಥಿರತೆಯ ಬೌಲಿಂಗ್ ಸಂಘಟಿಸಿದರು. ನಮ್ಮ ಬ್ಯಾಟ್ಸ್ಮನ್ಗಳು ತಪ್ಪುಗಳನ್ನು ಮಾಡುವಂತೆ ಒತ್ತಡವನ್ನು ಹೇರಿದರು. ಸಾಮಾನ್ಯವಾಗಿ ಬ್ಯಾಟಿಂಗ್ ವಿಭಾಗ ಹೋರಾಟ ಮನೋಭಾವವನ್ನು ತೋರಿ ರನ್ ಗಳಿಸುತ್ತಾರೆ. ಆದರೆ ಹಾಗಾಗಲಿಲ್ಲ. ಬೌಲರ್ಗಳಿಗೆ ಪ್ರಯತ್ನಗಳಿಗೆ ಬೇಕಾದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ" ಎಂದರು. "ನಮ್ಮ ಬೌಲಿಂಗ್ ಅತ್ಯುತ್ತಮವಾಗಿತ್ತು. ಮೊದಲ ಟೆಸ್ಟ್ನಲ್ಲೂ ಉತ್ತಮ ದಾಳಿ ಸಂಘಟಿಸಿದೆವು. ಆದರೆ ನಮ್ಮ ಬೌಲರ್ಗಳ ಪ್ರಯತ್ನಗಳನ್ನು ಬ್ಯಾಟ್ಸ್ಮನ್ಗಳು ಬೆಂಬಲಿಸಿಲ್ಲ. ಒಂದು ತಂಡವಾಗಿ ಈ ಪ್ರದರ್ಶನ ಬೇಸರವನ್ನುಂಟು ಮಾಡಿದೆ. ಹಿಂದೆಯೂ ಈ ತಪ್ಪುಗಳು ಘಟಿಸಿದ್ದವು. ದಕ್ಷಿಣ ಆಫ್ರಿಕಾದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದೆವು. ಆದರೆ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು. ವಿದೇಶದಲ್ಲಿ ಸರಣಿ ಗೆಲ್ಲಬೇಕಾದರೆ ಬ್ಯಾಟ್ ಹಾಗೂ ಚೆಂಡಿನಿಂದ ಸಮತೋಲಿತ ಪ್ರದರ್ಶನ ಅಗತ್ಯ. ಆದರೆ ನಮ್ಮ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿತು. ಇದು ಬೇಸರ ತರಿಸಿದೆ. ಇದೀಗ ಹಿಂತಿರುಗಿ ನೋಡಿ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ" ಎಂದರು. "ಸೋಲಿಗೆ ಯಾವುದೇ ನೆಪ ಹೇಳಲು ಬಯಸುವುದಿಲ್ಲ. ಎರಡು ಪಂದ್ಯಗಳಲ್ಲೂ ಟಾಸ್ ಸೋತಿರುವುದು ಸೋಲಿಗೆ ಕಾರಣ ಎಂದು ನೀವು ಹೇಳಬಹುದು. ಇದರಿಂದ ಒಂದೆರಡು ತಾಸುಗಳ ಹೆಚ್ಚಿನ ಅನುಕೂಲ ಲಭಿಸಿರಬಹುದು. ಆದರೆ ಅಂತಾರಾಷ್ಟ್ರೀಯ ತಂಡವಾಗಿ ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ವಿದೇಶ ನೆಲದಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿರುವುದರಿಂದ ಪರಿಸ್ಥಿತಿಯನ್ನು ಅರಿತು ಅಲ್ಲಿಗೆ ಹೊಂದಿಕೊಂಡು ಆಡಬೇಕಿತ್ತು. ಆದರೆ ನಾವದನ್ನು ಮಾಡಲು ಯಶಸ್ವಿಯಾಗಲಿಲ್ಲ. ಈ ಸೋಲಿಗೆ ನೆಪ ಹೇಳಿ ದೂರ ಸರಿಯಲು ಬಯಸುವುದಿಲ್ಲ. ಇದರ ಬದಲು ಸೋಲನ್ನು ಒಪ್ಪಿಕೊಂಡು ತಪ್ಪನ್ನು ತಿದ್ದಿಕೊಳ್ಳಲು ಬಯಸುತ್ತೇವೆ. ಸೋಲಿಗೆ ಯಾವುದೇ ಕಾರಣ ನೀಡುವುದಿಲ್ಲ. ತಪ್ಪುಗಳಿಂದ ಪಾಠಗಳನ್ನು ಕಲಿತುಕೊಂಡು ಸರಿಪಡಿಸಬೇಕಿದೆ" ಎಂದು ವಿವರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3abGLMu