ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ದಿಟ್ಟ ಕ್ರಮವನ್ನು ಬಿಜೆಪಿ ನಾಯಕ ಸ್ವಾಗತಿಸಿದ್ದು, ದೇಶದ ಏಕೀಕರಣದಲ್ಲಿ ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಪ್ರತ್ಯೇಕ ಸ್ಥಾನಮಾನದಿಂದ ಪ್ರತ್ಯೇಕತೆಯ ಕೂಗು ಆರಂಭವಾಯಿತು. ಅದರಿಂದ ಹುಟ್ಟಿಕೊಂಡ ಭಯೋತ್ಪಾದನೆ, ದೇಶದ್ರೋಹದ ಕೃತ್ಯಗಳಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು. ಇದೀಗ ಜಮ್ಮು-ಕಾಶ್ಮೀರ ಭಾರತದೊಂದಿಗೆ ಸಂಪೂರ್ಣ ವಿಲೀನವಾಗಿದೆ ಎಂದು ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, 'ಐತಿಹಾಸಿಕ ಪ್ರಮಾದವೊಂದನ್ನು ಇಂದು ಸರಿಪಡಿಸಲಾಗಿದೆ. ಸಂವಿಧಾಣದ 368ನೇ ವಿಧಿ ಅನುಸಾರ ಸಂಸದೀಯ ಪ್ರಕ್ರಿಯೆಗಳನ್ನು ಪಾಲಿಸದೆ 35ಎ ವಿಧಿಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸಲಾಗಿತ್ತು. ಅದರ ಮೂಲಕವಾಗಿ 370ನೇ ವಿಧಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸುವ ಸಂಚು ಹೂಡಲಾಗಿತ್ತು. ಇಂದು ಅದು ರದ್ದಾಗುತ್ತಿದೆ' ಎಂದು ಜೇಟ್ಲಿ ಶ್ಲಾಘಿಸಿದ್ದಾರೆ.
'ಸರಕಾರದ ಈ ದಿಟ್ಟ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಜನತೆಗೆ ಅನುಕೂಲವಾಗುತ್ತದೆ. ಹೆಚ್ಚಿನ ಬಂಡವಾಳ ಹೂಡಿಕೆ, ಔದ್ಯಮೀಕರಣ, ಹೆಚ್ಚು ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು, ಹೆಚ್ಚಿನ ಉದ್ಯೋಗಾವಕಾಶ ಮತ್ತು ಹೆಚ್ಚಿನ ಆದಾಯ ರಾಜ್ಯಕ್ಕೆ ದೊರಕಲಿದೆ' ಎಂದು ಜೇಟ್ಲಿ ಹೇಳಿದ್ದಾರೆ. ಕಾಶ್ಮೀರದ ಪ್ರಾದೇಶಿಕ ನಾಯಕರು ತಮ್ಮ ಭಾವನಾತ್ಮಕ ಆಟಗಳ ಮೂಲಕ ಜನತೆಯ ದಾರಿ ತಪ್ಪಿಸಲು ಇನ್ನು ಸಾಧ್ಯವಿಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ.
from India & World News in Kannada | VK Polls https://ift.tt/2GHw9Zt