ಇಂದು ವಿಶ್ವ ಪ್ರಾಣಿ ಕಲ್ಯಾಣ ದಿನ: ಮೂಕ ಪ್ರಾಣಿಗಳಿಗೂ ಬೇಕಿದೆ ಕಾಯಕಲ್ಪ!

ನಾಗರಾಜು ಅಶ್ವತ್ಥ್ ಬೆಂಗಳೂರು ಗ್ರಾ. ರಾಜ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆಂದು ವಿಶೇಷ ಯೋಜನೆಗಳು, ತಾಣಗಳನ್ನು ಗುರುತಿಸುತ್ತಿರುವ ಸರಕಾರಗಳು ಮೂಕ ಪ್ರಾಣಿಗಳಿಗೂ ವಿಶೇಷ ಕಾಯಕಲ್ಪ ಒದಗಿಸಬೇಕಿದೆ. ಪ್ರಾಣಿ, ಪಕ್ಷಿಗಳ ಆರೈಕೆಗೆ ಜಿಲ್ಲಾಮಟ್ಟದಲ್ಲಿ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯ ಸ್ಥಿತಿಯಿದೆ. ಪ್ರಸ್ತುತ, ರಾಜ್ಯದಲ್ಲಿ ಪಶು ಆಸ್ಪತ್ರೆಗಳಿದ್ದರೂ, ವನ್ಯ ಜೀವಿಗಳಿಗೆ ಗಾಯಗಳಾದರೆ ಸಿಗಬೇಕಾದ ಯಾವುದೇ ವೈದ್ಯಕೀಯ ಸೌಕರ್ಯ ಸಿಗುತ್ತಿಲ್ಲ. ಹೀಗಾಗಿ, ಬಹುತೇಕ ಸಂದರ್ಭಗಳಲ್ಲಿಅಪರೂಪದ ಪಕ್ಷಿಗಳು ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೂ ವೈದ್ಯಕೀಯ ಸೌಕರ್ಯ, ಆಹಾರ ವ್ಯವಸ್ಥೆ, ವಾಸಿಸಲು ಸೂಕ್ತ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ 1931ರ ಬಳಿಕ ಪ್ರತಿ ವರ್ಷದ ಅ.4ರಂದು ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಆದರೆ, 90 ವರ್ಷ ಕಳೆದರೂ ಮೂಕ ಪ್ರಾಣಿಗಳಿಗೆ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಒದಗಿಸಲಾಗದ ಸ್ಥಿತಿ ಮುಂದುವರೆದಿದ್ದು, ಇನ್ನಾದರೂ ಪಶು ಆಸ್ಪತ್ರೆಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ಲಭಿಸುವಂತಾಗಬೇಕಿದೆ. ಜತೆಗೆ, ಅರಣ್ಯ ನಾಶದಂತಹ ಕೃತ್ಯಗಳಿಗೆ ಕಡಿವಾಣ ಬಿದ್ದು ವನ್ಯಜೀವಿಗಳು ನಗರಗಳತ್ತ ಹೆಜ್ಜೆಯಿಡುವ ಘಟನೆಗಳು ಕಡಿಮೆಯಾಗಬೇಕಿದೆ. ನೈಲಾನ್‌ ಮೃತ್ಯುಪಾಶ ರಾಜ್ಯದಲ್ಲಿ ಪ್ರತಿ ವರ್ಷ ವಿದೇಶಿ ವಲಸೆ ಹಕ್ಕಿಗಳು, ಅಪರೂಪದ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ನಾನಾ ಕಾರಣಗಳಿಗೆ ವನ್ಯಜೀವಿಗಳು ತೊಂದರೆಗೀಡಾಗುತ್ತಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯೇ ಅಡ್ಡಿಯಾಗುತ್ತಿದೆ. ಕಾಯ್ದೆಯ ಅನ್ವಯ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮಕ್ಷಮ ಹೊರತುಪಡಿಸಿ, ಉಳಿದ ಸಂದರ್ಭಗಳಲ್ಲಿ ರಕ್ಷಿಸುವಂತಿಲ್ಲ. ಹೀಗಾಗಿ, ಅನೇಕ ಪಕ್ಷಿಗಳು ಸಾವನ್ನಪ್ಪುತ್ತಿವೆ. ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮರಗಳಲ್ಲಿದ್ದ ನೈಲಾನ್‌ ದಾರ ವಿದೇಶಿ ಪಕ್ಷಿಗಳ ಕಾಲುಗಳಿಗೆ ಸುರುಳಿ ಸಿಕ್ಕು, ಪಕ್ಷಿಗಳು ನರಳಿ ಸಾಯುವ ಸ್ಥಿತಿಗೆ ತಲುಪಿದ್ದವು. ಪರಿಸರಾಸಕ್ತರು ರಕ್ಷಣೆಗೆ ಮುಂದಾದರೂ ಸೂಕ್ತ ಸಮಯಕ್ಕೆ ಪಶು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದವು. ವನ್ಯಜೀವಿಗಳ ದಾಳಿಯಿಂದಾಗಿ ಹಸು, ಎತ್ತು, ಎಮ್ಮೆ, ಕೋಣ ಸಾವನ್ನಪ್ಪಿದರೆ ಕಳೆದ ವರ್ಷದವರೆಗೆ 10 ಸಾವಿರಕ್ಕಿದ್ದ ಪರಿಹಾರದ ಮೊತ್ತವನ್ನು 20ರಿಂದ 75ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಜತಗೆ, ಕುರಿ, ಮೇಕೆ, ಆಡು ಸಾವನ್ನಪ್ಪಿದರೆ 5 ಸಾವಿರವಿದ್ದ ಪರಿಹಾರ ಮೊತ್ತವನ್ನು 10 ಸಾವಿರಕ್ಕೇರಿಸಲಾಗಿದೆ. ಆದರೆ, ಜನರ ನಿರ್ಲಕ್ಷ್ಯದಿಂದ ವನ್ಯಜೀವಗಳು ಸಾವನ್ನಪ್ಪುತ್ತಿದ್ದು, ಜಿಲ್ಲಾಮಟ್ಟದಲ್ಲಿ ಕನಿಷ್ಟ ಚಿಕಿತ್ಸೆ ಸೌಕರ್ಯವೂ ಇಲ್ಲದಂತಾಗಿರುವುದು ದುರಂತ.


from India & World News in Kannada | VK Polls https://ift.tt/2YmhWx4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...