ಕಿದ್ವಾಯಿ ಆಸ್ಪತ್ರೆಯಲ್ಲಿ ಮತಾಂತರ? ಹಿಂದೂ ಸಂಘಟನೆಗಳ ಆರೋಪ; ಸಿಬ್ಬಂದಿ ವರ್ಗಾವಣೆ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಬೇಕು ಎನ್ನುವ ಬಗ್ಗೆ ಸರಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿರುವುದರ ನಡುವೆಯೇ, ನಗರದ ಪ್ರತಿಷ್ಠಿತ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಸಿಬ್ಬಂದಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದಿದೆ. ವಿಷಯ ತಿಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಇದನ್ನು ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು, ಮತಾಂತರಕ್ಕೆ ಉತ್ತೇಜನ ನೀಡುತ್ತಿದ್ದ ಎನ್ನಲಾದ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಆಡಳಿತ ಮಂಡಳಿ ಈ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಿ, ಮತಾಂತರಕ್ಕೆ ಯತ್ನಿಸುತ್ತಿದ್ದ ಎನ್ನಲಾದ ಮಂಜುನಾಥ್‌ ಎಂಬ ಸಿಬ್ಬಂದಿಯನ್ನು ತಕ್ಷಣಕ್ಕೆ ಕಲಬುರಗಿಗೆ ವರ್ಗಾವಣೆ ಮಾಡಿದೆ. ಮಂಜುನಾಥ್‌ ಆಸ್ಪತ್ರೆಗೆ ಬರುತ್ತಿದ್ದ ಬಡ ರೋಗಿಗಳನ್ನು ಗುರಿಯಾಗಿಟ್ಟುಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಆತ ಕೂಡ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಏಸುವಿನ ಪುಸ್ತಕ ನೀಡಿ, ಜಗತ್ತಿನಲ್ಲಿ ಏಸು ಒಬ್ಬನೇ ಸರ್ವಶಕ್ತ. ನಿಮ್ಮ ಎಲ್ಲಾ ಕಷ್ಟಗಳಿಂದಲೂ ದೂರ ಮಾಡಲು ಅವನಿಗೆ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವ ಮೂಲಕ ನೀವು ಕಷ್ಟದಿಂದ ಹೊರಬಹುದು’ ಎಂದು ಹೇಳುತ್ತಿದ್ದ ಎನ್ನುತ್ತಾರೆ ರೋಗಿಯ ಸಂಬಂಧಿಕರು. ಈ ರೀತಿಯ ಆರೋಪ ಕೇಳಿ ಬಂದ ತಕ್ಷಣವೇ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಮೇಲ್ನೋಟಕ್ಕೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಅಂತಹ ಯಾವುದೇ ಘಟನೆಗೂ ಅವಕಾಶ ನೀಡಲಾಗುವುದಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆಯೇ ಒಂದು ದೇಗುಲ. ಇಲ್ಲಿಗೆ ಬರುವ ರೋಗಿಗಳನ್ನು ಚಿಕಿತ್ಸೆಗೆ ಬಿಟ್ಟು ಬೇರೆ ಯಾವುದಕ್ಕೂ ಬಳಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಅಂತಹ ಘಟನೆ ಬೆಳಕಿಗೆ ಬಂದರೆ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. - ಡಾ. ಸಿ. ರಾಮಚಂದ್ರ, ನಿರ್ದೇಶಕರು, , ಇತ್ತೀಚೆಗೆ ಮತಾಂತರ ನಡೆಯುತ್ತಿದೆ ಎನ್ನುವ ಆರೋಪ ರಾಜ್ಯದ ಬೇರೆ ಬೇರೆ ಕಡೆ ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದು ಹಿಂದೂ ಸಂಘಟನೆಗಳು ದಾಳಿ ಇಡುತ್ತಿವೆ. ಕೆಲ ವಾರಗಳ ಹಿಂದೆ ಕಾರ್ಕಳದಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ಆರೋಪದಡಿ ಕ್ರೈಸ್ತರ ಭವನವೊಂದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿದ್ದರು.


from India & World News in Kannada | VK Polls https://ift.tt/3Bmedgg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...