ಆರೆಸ್ಸೆಸ್‌ ಟೀಕೆ ಹಿಂದೆ ಎಚ್‌ಡಿಕೆ ಸ್ಕೆಚ್‌; ಕಿಂಗ್‌ ಮೇಕರ್‌ ಕನಸಿಗೆ ಮುಸ್ಲಿಂ ಮತ ಸೆಳೆಯುವ ಪ್ಲ್ಯಾನ್‌!

ಶಶಿಧರ ಹೆಗಡೆ ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇದ್ದಕ್ಕಿದ್ದಂತೆ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಈ ನಡೆಯ ಹಿಂದೆ ರಾಜಕೀಯ ತಂತ್ರಗಾರಿಕೆಯ ಛಾಯೆ ಕಾಣಿಸಿದೆ. ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಕಾರ್ಯಾಗಾರ ನಡೆಸಿದ ಕುಮಾರಸ್ವಾಮಿ ಅದರ ಪೆಂಡಾಲ್‌ ತೆಗೆಯುವ ಮೊದಲೇ ಇಂಥದೊಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಇದರ ಮರ್ಮ ಅರ್ಥ ಮಾಡಿಕೊಳ್ಳುವುದು ಕ್ಲಿಷ್ಟಕರ ಸಂಗತಿ ಅಲ್ಲವೇ ಅಲ್ಲ! ಜೆಡಿಎಸ್‌ ಪುನರ್‌ ಸಂಘಟನೆ ಸಂಬಂಧ ಕುಮಾರಸ್ವಾಮಿ ಅವರು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ, ಯುವ, ಅಲ್ಪಸಂಖ್ಯಾತ ಇನ್ನಿತರ ಘಟಕಗಳ ಕಾರ್ಯಾಗಾರ ನಡೆಸಿದ್ದಾರೆ. ವಾಸ್ತವದಲ್ಲಿ ಜೆಡಿಎಸ್‌ನ ಈ ಪ್ರಯತ್ನದ ಬಗ್ಗೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಆರ್‌ಎಸ್‌ಎಸ್‌ ಕುರಿತು ಕುಮಾರಸ್ವಾಮಿ ಮಾಡಿರುವ ಟೀಕೆಯೇ ಬಿಸಿಯೇರಿಸುತ್ತಿದೆ. ಹಾಗಿದ್ದರೆ ಸಂಘಟನೆ ಸಂಬಂಧ ಅಷ್ಟೊಂದು ಪರಿಶ್ರಮ ವಹಿಸಿ ಸತತ ಸಭೆ ನಡೆಸಿದ ಕುಮಾರಸ್ವಾಮಿ ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲವಾ? ತಮ್ಮ ಹೇಳಿಕೆಯ ಪರಿಣಾಮದ ಬಗ್ಗೆ ಯೋಚಿಸಿರಲಿಲ್ಲವಾ? ಖಂಡಿತವಾಗಿಯೂ ಇದರ ಪ್ಲಸ್‌, ಮೈನಸ್‌ ಬಗ್ಗೆ ಅರಿವಿದ್ದೇ ಮಾತನಾಡಿರುತ್ತಾರೆ. ಅದರಲ್ಲಿಯೇ ಜೆಡಿಎಸ್‌ನ ರಾಜಕೀಯ ಲೆಕ್ಕಾಚಾರದ ಮಜಕೂರಿಯಿದೆ. ಜೆಡಿಎಸ್‌ ಈ ಹಿಂದೆ ಎರಡು ಬಾಡಿ ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸಿತ್ತು. ಒಮ್ಮೆ ಬಿಜೆಪಿಯೊಂದಿಗೂ ಮೈತ್ರಿ ಮಾಡಿಕೊಂಡಿತ್ತು. ಅಷ್ಟಕ್ಕೂ 20:20 ಸರಕಾರದ ಪ್ರಯೋಗದ ಮೂಲಕ ಎಚ್‌.ಡಿ.ಕುಮಾರಸ್ವಾಮಿ ರೂಪದಲ್ಲಿ ರಾಜ್ಯಕ್ಕೆ ಜನಪ್ರಿಯ ಮುಖ್ಯಮಂತ್ರಿಯನ್ನು ಕೊಟ್ಟ ಶ್ರೇಯಸ್ಸು ಬಿಜೆಪಿಗೇ ಸಲ್ಲಬೇಕು. ಸಂದರ್ಭಾನುಸಾರ ಕಾಂಗ್ರೆಸ್‌, ಬಿಜೆಪಿಯೊಂದಿಗೆ ಸ್ನೇಹ ಬೆಳಸಿದ್ದ ಜೆಡಿಎಸ್‌ ಇತಿಹಾಸದ ಬಗ್ಗೆ ವಿವರಿಸಿ ಹೇಳುವ ಅಗತ್ಯ ಕಾಣಿಸುವುದಿಲ್ಲ. ಇದರ ಹೊರತಾಗಿ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಿಡಿಯಾಗಿ ಎಚ್‌ಡಿಕೆ ನೀಡಿದ ಹೇಳಿಕೆಯ ಒಳಮರ್ಮ ಅರ್ಥ ಮಾಡಿಕೊಳ್ಳಲು ಅಗೆದು ಬಗೆದು ನೋಡಬೇಕಾಗಿಲ್ಲ. ಜೆಡಿಎಸ್‌ಗೆ ಮುಂದಿನ ಚುನಾವಣೆಯಲ್ಲಿ 'ತ್ರಿಕೋನ ಸರಣಿ' ಆಡುವಾಸೆ. ಅದರಿಂದಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಲಿದೆ. ಇದು ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾದ ಚರ್ವಿತ ಚರ್ವಣ ಸೂತ್ರವಾದರೂ ಜೆಡಿಎಸ್‌ ಅಸ್ತಿತ್ವ ಮಾತ್ರ ಇದರಲ್ಲೇ ಇದೆ. ಮುಂದಿನ ಬಾರಿಯೂ ಕಿಂಗ್‌ ಮೇಕರ್‌ ಪಾತ್ರ ವಹಿಸಬೇಕಾದರೆ ಜೆಡಿಎಸ್‌ಗೆ ತನ್ನ ಸಾಂಪ್ರದಾಯಿಕ ವೋಟ್‌ ಬ್ಯಾಂಕ್‌ ಜತೆಗೆ ಮುಸ್ಲಿಂ ಬಾಂಧವರ ವಿಶ್ವಾಸವೂ ಬೇಕಾಗುತ್ತದೆ. ಜಮೀರ್‌ ಅಹ್ಮದ್‌, ಇಕ್ಬಾಲ್‌ ಅನ್ಸಾರಿ ಮತ್ತಿತರ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್‌ನತ್ತ ಹೊರಟ ನಂತರ ಈ ವಿಭಾಗದಲ್ಲಿ ಜೆಡಿಎಸ್‌ ಸೊರಗಿದೆ. ಅದಕ್ಕಾಗಿ ಸಿ.ಎಂ.ಇಬ್ರಾಹಿಂ ಅವರನ್ನು ವಾಪಸ್‌ ಕರೆತರುವ ಕಸರತ್ತು ಚಾಲ್ತಿಯಲ್ಲಿದೆ. ಇದರ ನಡುವೆ ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ತೆರೆ ಬೀಳುತ್ತಿದ್ದಂತೆ ಬಿಜೆಪಿಯ ಅಂಗಸಂಸ್ಥೆ ಆರ್‌ಎಸ್‌ಎಸ್‌ ವಿರುದ್ಧ ಎಚ್‌ಡಿಕೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಅವರು ನಿರೀಕ್ಷಿಸಿದಂತೆಯೇ ಬಿಜೆಪಿ ಕಡೆಯಿಂದ ಪ್ರತಿಕ್ರಿಯೆ ಬಂದಿದೆ. ಅಲ್ಲಿಗೆ ಕುಮಾರಸ್ವಾಮಿ ಹೂಡಿದ ಬಾಣ ಗುರಿ ತಲುಪಿದೆ ಎಂದೇ ಅರ್ಥ. ಚುನಾವಣೆಗೆ ಸೀಮಿತಅಲ್ಪಸಂಖ್ಯಾತರನ್ನು ಪಕ್ಷದ ವೇದಿಕೆಗೆ ಕರೆತರಲು ಕುಮಾರಸ್ವಾಮಿಯವರು ಈ ಬಾರಿ ಪ್ರಯಾಸ ಪಡುತ್ತಿದ್ದಾರೆ. ಬಿಡದಿ ತೋಟದ ಕಾರ್ಯಾಗಾರದ ಪರಿಕಲ್ಪನೆ ಸಿದ್ಧಪಡಿಸುವುದರಲ್ಲಿ ರಾಜಕೀಯ ತಜ್ಞರ ಪಾತ್ರವೂ ಇದ್ದಂತಿದೆ. ಈ ಮೂಲಕ ಚುನಾವಣಾ ರಾಜಕಾರಣದ ರಣತಂತ್ರಗಾರರನ್ನು ಎಚ್‌ಡಿಕೆ ಹತ್ತಿರ ಬಿಟ್ಟುಕೊಂಡಂತಾಗಿದೆ. ಆರ್‌ಎಸ್‌ಎಸ್‌ ಸಂಬಂಧದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಬಿಡು ಬೀಸು ವಾಗ್ದಾಳಿಯ ಹಿಂದೆ ಇಂತಹ ಪಂಡಿತೋತ್ತಮರ ಸಲಹೆ ಇರುವುದನ್ನು ತಳ್ಳಿ ಹಾಕಲಾಗದು. ಅದೇನೇ ಇದ್ದರೂ ಜೆಡಿಎಸ್‌ನ ಈ ನಿಲುವು ಚುನಾವಣಾ ಹೋರಾಟಕ್ಕೆ ಸೀಮಿತವಾಗಬಹುದು. ಇಷ್ಟೆಲ್ಲ ಕಟು ಟೀಕೆಯ ಬಳಿಕ ಭವಿಷ್ಯದಲ್ಲಿ ಮೈತ್ರಿ ಸರಕಾರ ರಚಿಸುವ ಸನ್ನಿವೇಶ ಎದುರಾದರೆ ಬಿಜೆಪಿಯೊಂದಿಗೆ ಜೆಡಿಎಸ್‌ ಹೋಗುವುದಿಲ್ಲ ಎನ್ನಲಾಗದು. ಕುಮಾರಸ್ವಾಮಿ ಅವರನ್ನು ನಿಂದಿಸಿದ ಬಿಜೆಪಿಗರಿಗೂ ಅದೆಲ್ಲ ಮರೆತು ಹೋಗಿರುತ್ತದೆ. ಅಧಿಕಾರ ಸಿಗುತ್ತದೆ ಎನ್ನುವಾಗ ಅದನ್ನು ಅನುಭವಿಸಲು ಯಾವ ಅಡ್ಡಿ ಆತಂಕವೂ ಬರಬಾರದು ಎನ್ನುವುದು ಮತ್ತೊಂದು ಅತಿ ವಿಶಿಷ್ಟ ಸೂತ್ರ. ಈ ಸೂತ್ರ ಕಣ್ಣಮುಂದೆ ಬಂದಾಗ ಜೆಡಿಎಸ್‌ಗೆ ಬಿಜೆಪಿಯೆಂದರೆ ನ್ಯಾಚುರಲ್‌ ಪಾರ್ಟ್ನರ್‌. ಬಿಜೆಪಿಯವರಿಗೆ ಕುಮಾರಣ್ಣ ಕುಮಾರಣ್ಣ... ಎಂಬ ಪ್ರೀತಿ ಉಕ್ಕಿ ಹರಿಯುತ್ತದೆ. ಹಾಗಾಗಿ ಆರ್‌ಎಸ್‌ಎಸ್‌ ಜನ್ಮ ಜಾಲಾಡಲು ಕುಮಾರಸ್ವಾಮಿ ಮುಂದಾದದ್ದರಲ್ಲಿ ಚುನಾವಣಾ ರಾಜಕಾರಣವಷ್ಟೇ ಇದೆ. ಈ ವಿಚಾರದಲ್ಲಿ ಅವರು ಮುಂದೆ ಹೋಗಿ ಸಂಶೋಧನಾ ಪ್ರಬಂಧ ಮಂಡಿಸುತ್ತಾರೆಂದು ನಿರೀಕ್ಷೆ ಇರಿಸಿಕೊಳ್ಳಬೇಕಾಗಿಲ್ಲ. ಟೊಪಗಿ ಹಾಕಿಕೊಂಡ ಎಚ್‌ಡಿಕೆ ಫೋಟೊ ಟ್ರೋಲ್‌ ಮಾಡುವ ಬಿಜೆಪಿಗರ ಉತ್ಸಾಹವೂ ಸಂದರ್ಭೋಚಿತವಷ್ಟೇ. ಮತ್ತೆ ಮೈತ್ರಿ ಸರಕಾರ ರಚಿಸುವ ಸಂದರ್ಭ ಬಂದರೆ ಈ ಭಾಜಪಾದವರು 'ಬದಲಾವಣೆ ಜಗದ ನಿಯಮ'ವೆಂದು ಮುಂದೆ ಹೊರಟು ಬಿಡಬಹುದು. ಹಾಗಾಗಿ ಸದ್ಯಕ್ಕಂತೂ ಅಲ್ಪಸಂಖ್ಯಾತರ ಓಲೈಗೆ ಎಚ್‌ಡಿಕೆ ಅವರ ಫೋಕಸ್‌. ಆರ್‌ಎಸ್‌ಎಸ್‌ ವಿರುದ್ಧ ಯಾರಾದರೂ ಮುಗಿಬಿದ್ದಾಗ ಅದನ್ನು ಖಂಡಿಸುವುದು ಬಿಜೆಪಿಯ ಧರ್ಮ. ಅದರಂತೆ ಹಳೆಯ ಸ್ಕ್ರಿಪ್ಟ್‌ನ ಆಧಾರದಲ್ಲೇ ಮತ್ತೊಮ್ಮೆ ಪರದೆ ಮೇಲೆ ಈ ರಾಜಕೀಯ ಜಟಾಪಟಿ ಬಿತ್ತರವಾಗುತ್ತಿದೆ ಎಂದು ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.


from India & World News in Kannada | VK Polls https://ift.tt/3BjjZjv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...