ದುಬೈ: ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ 150 ರನ್ ಅತ್ಯುತ್ತಮ ಮೊತ್ತ. ಆದರೆ, ನಾವು ಡೆತ್ ಓವರ್ಗಳಲ್ಲಿ ಬ್ಯಾಟಿಂಗ್ ವೇಗ ಹೆಚ್ಚಿಸುವಲ್ಲಿ ವಿಫಲರಾಗಿದ್ದೇವೆ. ಈ ಕಾರಣದಿಂದ ನಿರೀಕ್ಷಿತ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹೇಳಿದ್ದಾರೆ. ಸೋಮವಾರ ರಾತ್ರಿ ನಡೆದಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಅವರ ಅರ್ಧಶತಕದ ನೆರವಿನಿಂದ ಸಿಎಸ್ಕೆ ತನ್ನ ಪಾಲಿನೆ 20 ಓವರ್ಗಳಿಗೆ 136 ರನ್ ಕಲೆಹಾಕಿತ್ತು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಎಂಸ್ ಧೋನಿ, "ನಾವು 150 ರನ್ ಗಳಿಸಲು ಎದುರು ನೋಡುತ್ತಿದ್ದೆವು. ಆದರೆ, ಕೆಲ ಪ್ರಮುಖ ವಿಕೆಟ್ಗಳನ್ನು ನಿರ್ಣಾಯಕ ಹಂತದಲ್ಲಿ ಕಳೆದುಕೊಂಡಿದ್ದೇವೆ. ಇದರ ಹೊರತಾಗಿಯೂ 15 ಹಾಗೂ 16ನೇ ಓವರ್ನಲ್ಲಿ ಸ್ಪೋಟಕ ಬ್ಯಾಟಿಂಗ್ಗೆ ಅತ್ಯುತ್ತಮ ವೇದಿಕೆ ನಿರ್ಮಾಣವಾಗಿತ್ತು. ಆದರೆ, ನಾವು ಇನಿಂಗ್ಸ್ನ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾಗಿದ್ದೇವೆ," ಎಂದು ಹೇಳಿದ್ದಾರೆ. "ಇಲ್ಲಿನ ಪಿಚ್ ಎರಡೂ ಕಡೆ ಕಠಿಣವಾಗಿತ್ತು. ಆದರೆ, 150 ಆಸು-ಪಾಸಿನಲ್ಲಿ ನಾವು ರನ್ ಗಳಿಸಿದ್ದರೆ, ಇದು ಇಲ್ಲಿನ ಪಿಚ್ಗೆ ಉತ್ತಮ ಮೊತ್ತವಾಗಿರುತ್ತಿತ್ತು. ಅಂದಹಾಗೆ ಇಲ್ಲಿನ ವಿಕೆಟ್ ನಿಧಾನಗತಿಯಿಂದ ಕೂಡಿರುವುದರ ಜೊತೆಗೆ ನಿಮ್ಮ ಶಾಟ್ಸ್ ಆಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇದೇ ಸವಾಲು ಎದುರಾಗಿತ್ತು," ಎಂದು ಪೋಸ್ಟ್ ಮ್ಯಾಚ್ ಸಂದರ್ಶನದಲ್ಲಿ ಧೋನಿ ಪಿಚ್ ಬಗ್ಗೆ ವಿವರಿಸಿದರು. ಈ ಪಂದ್ಯದಲ್ಲಿ ಎಂಎಸ್ ಧೋನಿ 27 ಎಸೆತಗಳಲ್ಲಿ 18 ರನ್ಗಳಿಗೆ ಸೀಮಿತರಾಗಿದ್ದರು. ಇದರಲ್ಲಿ ಅವರು ಒಂದೇ ಒಂದು ಸಿಕ್ಸರ್ ಅಥವಾ ಬೌಂಡರಿ ಸಿಡಿಸದೇ ಇದ್ದದ್ದು ಬೇಸರ ಮೂಡಿಸಿದೆ. ಅಷ್ಟೇ ಅಲ್ಲದೆ, ಫಾರ್ಮ್ನಲ್ಲಿರುವ ರವೀಂದ್ರ ಜಡೇಜಾ ಆಡಿದ್ದು ಕೇವಲ ಎರಡೇ ಎರಡು ಎಸೆತ ಮಾತ್ರ. ಇನ್ನು ಡ್ವೇನ್ ಬ್ರಾವೊ, ಶಾರ್ದುಲ್ ಠಾಕೂರ್ ಹಾಗೂ ದೀಪಕ್ ಚಹರ್ಗೆ ಬ್ಯಾಟಿಂಗ್ ಸಿಕ್ಕಿರಲಿಲ್ಲ. ಬೌಲರ್ಗಳನ್ನು ಶ್ಲಾಘಿಸಿದ ಧೋನಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಅತ್ಯಂತ ದುಬಾರಿಯಾಗಿದ್ದ ಚನ್ನೈ ಬೌಲರ್ಗಳು ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸುಧಾರಣೆ ಕಂಡಿದ್ದರು. ಸಾಧಾರಣ ಗುರಿ ನೀಡಿದ್ದರೂ, ಎದುರಾಳಿ ತಂಡದ ಮೇಲೆ ಕೊನೆಯ ಎಸೆತದವರೆಗೂ ಸಿಎಸ್ಕೆ ಬೌಲರ್ಗಳು ನಿಯಂತ್ರಣ ಸಾಧಿಸಿದ್ದರು. ಕಡಿಮೆ ಮೊತ್ತದ ಪಂದ್ಯದಲ್ಲಿ ಅದ್ಭುತ ಬೌಲ್ ಮಾಡಿದ ಬೌಲರ್ಗಳನ್ನು ಎಂಎಸ್ ಧೋನಿ ಇದೇ ವೇಳೆ ಶ್ಲಾಘಿಸಿದರು. "ಬೌಲರ್ಳಗಳಿಂದ ಇದು ನಿಜಕ್ಕೂ ಅತ್ಯುತ್ತಮ ಪ್ರಯತ್ನ. ಪವರ್ಪ್ಲೇನಲ್ಲಿ ಒಂದು ಓವರ್ ಹೊರತು ಪಡಿಸಿ ಇನ್ನುಳಿದ ಓವರ್ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡದೆ ಇರುವುದು ಇಲ್ಲಿ ತುಂಬಾ ಮುಖ್ಯವಾಯಿತು. ಆದರೆ, ಗುಣಮಟ್ಟದ ಬ್ಯಾಟ್ಸ್ಮನ್ಗಳಿದ್ದಾಗ ಕೆಲವೊಮ್ಮೆ ಇಂತಹ ಸಂಗತಿಗಳು ನಡೆಯುತ್ತವೆ," ಎಂದು ಧವನ್ಗೆ 21 ರನ್ ಬಿಟ್ಟುಕೊಟ್ಟ ದೀಪಕ್ ಚಹರ್ ಅವರನ್ನು ಧೋನಿ ಸಮರ್ಥಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೂರು ವಿಕೆಟ್ ಸೋಲು ಅನುಭವಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ನಂ.1 ಪಟ್ಟವನ್ನು ಕಳೆದುಕೊಂಡಿತು. ಗುರುವಾರ ಇದೇ ಅಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uHR3PP