ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ತಂಡ ತನ್ನ ಸ್ಟಾರ್ ಬ್ಯಾಟ್ಸ್ಮನ್ ಅವರನ್ನು ಕೈಬಿಟ್ಟಿತ್ತು. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್, ಕಳಪೆ ಫಾರ್ಮ್ನಲ್ಲಿರುವ ರೈನಾ ಕಥೆ ಇಲ್ಲಿಗೇ ಮುಗಿದಿಲ್ಲ. ಖಂಡಿತಾ ಮುಂದಿನ ದಿನಗಳಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸ ಹೊರಹಾಕಿದ್ದಾರೆ. ಕ್ರಿಕ್ಬಝ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಕಲ್ ವಾನ್, ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ಸ್ಗೆ ಅರ್ಹತೆ ಪಡೆದಾಗಿದೆ. ಹೀಗಾಗಿ ಅವಕಾಶಕ್ಕಾಗಿ ಕಾಯುತ್ತಿದ್ದ ಅನುಭವಿ ರಾಬಿನ್ ಉತ್ತಪ್ಪ ಅವರಿಗೆ ಒಂದು ಅವಕಾಶ ಕೊಡುವ ಉದ್ದೇಶದಿಂದ ಮಾತ್ರ ರೈನಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಸಿಎಸ್ಕೆ ತಂಡ ತನ್ನ ಪ್ರಮುಖ ಆಟಗಾರರನ್ನು ಯಾವುದೇ ಕಾರಣಕ್ಕೆ ಬದಲಾಯಿಸುವುದಿಲ್ಲ. ಆಟಗಾರರಲ್ಲಿ ಸ್ಥಿರತೆ ಬರುವವರೆಗೂ ಮುಂದುವರಿಸುತ್ತದೆ. ಆಟಗಾರರಿಗೆ ಅಗತ್ಯದ ಬೆಂಬಲ ನೀಡುವುದರಲ್ಲಿ ಸಿಎಸ್ಕೆ ವಿಶ್ವಾಸ ಇಟ್ಟಿದೆ. ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್ ಈಗಾಗಲೇ ಪ್ಲೇ ಆಫ್ಸ್ ತಲುಪಿರುವುದರಿಂದ ರಾಬಿನ್ ಉತ್ತಪ್ಪಗೆ ಒಂದು ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದಾರೆ. ಹೀಗಾಗಿ ಸುರೇಶ್ ರೈನಾ ಕಥೆ ಇಲ್ಲಿಗೇ ಖಂಡಿತಾ ಮುಗಿದಿಲ್ಲ. ಸಿಎಸ್ಕೆ ಖಂಡಿತಾ ಅವರನ್ನು ಬಳಸಿಕೊಳ್ಳಲಿದೆ," ಎಂದು ವಾನ್ ಹೇಳಿದ್ದಾರೆ. ಮೂರು ಬಾರಿಯ ಚಾಂಪಿಯನ್ಸ್ ದಿಲ್ಲಿ ವಿರುದ್ಧದ ಕದನಕ್ಕೆ ಮೂರು ಬದಲಾವಣೆ ತಂದುಕೊಂಡಿತ್ತು. ಸುರೇಶ್ ರೈನಾ ಸ್ಥಾನದಲ್ಲಿ ರಾಬಿನ್ ಉತ್ತಪ್ಪ ಅವರನ್ನು ಆಡಿಸಿ, ಸ್ಯಾಮ್ ಕರ್ರನ್ ಮತ್ತು ಕೆಎಮ್ ಆಸಿಫ್ ಸ್ಥಾನದಲ್ಲಿ ಡ್ವೇನ್ ಬ್ರಾವೋ ಮತ್ತು ದೀಪಕ್ ಚಹರ್ ಅವರನ್ನು ಕಣಕ್ಕಿಳಿಸಿತ್ತು. ಟಾಸ್ ವೇಳೆ ಮಾತನಾಡಿದ್ದ ಧೋನಿ, ಮಂಡಿ ನೋವಿನ ಕಾರಣ ಸುರೇಶ್ ರೈನಾಗೆ ವಿಶ್ರಾಂತಿ ನೀಡಿರುವುದಾಗಿ ಸ್ಪಷ್ಟ ಪಡಿಸಿದ್ದರು. 2021ರಲ್ಲಿ ರೈನಾ ಬ್ಯಾಟಿಂಗ್ ವೈಫಲ್ಯಹದಿನಾಲ್ಕನೇ ಐಪಿಎಲ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಫಿಫ್ಟಿ ಬಾರಿಸಿದ್ದ ಸುರೇಶ್ ರೈಮಾ ನಂತರದ 10 ಇನಿಂಗ್ಸ್ಗಳಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 12 ಪಂದ್ಯಗಳಿಂದ ಕೇವಲ 160 ರನ್ಗಳನ್ನು ಮಾತ್ರ ಗಳಿಸಿದ್ದಾರೆ. 2019ರ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರೈನಾ, ವೈಯಕ್ತಿಕ ಕಾರಣಗಳಿಂದ 2020ರ ಆವೃತ್ತಿಯಿಂದ ಹೊರಗುಳಿದಿದ್ದರು. ಹೀಗಾಗಿ ಸಾಕಷ್ಟು ಸಮಯ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದ ರೈನಾ, ಈಗ ಶ್ರೇಷ್ಠ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದಾರೆ. ಐಪಿಎಲ್ 2021 ಟೂರ್ನಿಯ ಮೊದಲ ಚರಣದಲ್ಲಿ ಆಡಿದ 7 ಪಂದ್ಯಗಳಲ್ಲಿ 123 ರನ್ ಗಳಿಸಿದ್ದ ರೈನಾ, ಎರಡನೇ ಚರಣದಲ್ಲಿ ಮತ್ತೂ ಹೀನಾಯ ಪ್ರದರ್ಶನ ನೀಡಿ ಕೇವಲ 37 ರನ್ ಮಾತ್ರವೇ ಗಳಿಸಿದ್ದಾರೆ. ಯುಎಇ ಚರಣದಲ್ಲಿ ರೈನಾ ಅವರ ಶ್ರೇಷ್ಠ ಬ್ಯಾಟಿಂಗ್ ಅಜೇಯ 17 ರನ್ ಆಗಿದೆ. ಇನ್ನು ರೈನಾ ಸ್ಥಾನದಲ್ಲಿ ಸಿಎಸ್ಕೆ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕರ್ನಾಟಕದ ಕಲಿ 19 ಎಸೆತಗಳಲ್ಲಿ 19 ರನ್ ಮಾತ್ರವೇ ಗಳಿಸಿ ಪೆವಿಲಿಯನ್ ಸೇರಿದರು. ಆರ್ ಅಶ್ವಿನ್ ಅವರ ಕೇರಮ್ ಬಾಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೂ ಹಾಕಿ ಅವರಿಗೇ ಕ್ಯಾಚ್ ಒಪ್ಪಿಸಿ ಹೊರನಡೆದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ, ಪವರ್ ಪ್ಲೇ ಓವರ್ಗಳಲ್ಲೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡ ಕಾರಣ 20 ಓವರ್ಗಳಲ್ಲಿ 5 ವಿಕೆಟ್ಗೆ 136 ರನ್ಗಳ ಸವಾಲಿನ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3laoqYz