ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ ಅವರ ವೈಯಕ್ತಿಕ ಜೀವನಕ್ಕೂ ಕೃಷಿ ರಾಯಭಾರಿಗೂ ಥಳುಕು ಹಾಕುವುದು ಬೇಡ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ನಟ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿ ಮಾಡಿದ್ದಕ್ಕೆ ಸಾಮಾಜಿಕ ತಾಣದಲ್ಲಿ ನಡೆಯುತ್ತಿರುವ ಪರ ವಿರೋಧ ಚರ್ಚೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾತನಾಡಿದ ಕೃಷಿ ಸಚಿವ , ‘ಎಲ್ಲಾ ರಂಗಗಳಂತೆ ಸಿನಿಮಾ ರಂಗದಲ್ಲೂ ರಾಜಕೀಯ ಇದೆ. ವೈಯಕ್ತಿಕ ಜೀವನವನ್ನು ಸಾರ್ವಜನಿಕ ಜೀವನದಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಕೃಷಿ ಇಲಾಖೆಗೆ ರಾಯಭಾರಿಯಾಗಿ ನಟ ದರ್ಶನ್ ಸ್ವಯಂ ಆಗಿ ಬಂದವರು, ಇಲಾಖೆಯಿಂದ ಒಂದು ಪೈಸೆ ಹಣವನ್ನೂ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಅವರಿಗೆ ಕೋರ್ಟ್ನಲ್ಲಿ ಯಾವುದಾದರೂ ಕೇಸ್ನಲ್ಲಿ ಶಿಕ್ಷೆಯಾಗಿದೆಯಾ? ಇಲ್ಲ. ಅವರ ಸಂಸಾರಿಕ ಜೀವನದ ಬಗ್ಗೆ ಇತರರು ಟೀಕೆ ಮಾಡುವುದು ಸರಿಯಲ್ಲ. ರಾಹು ಕಾಲ, ಗುಳಿಕ ಕಾಲ ಇದ್ದಂತೆ, ಕೆಟ್ಟ ಸಮಯವೂ ಬರುತ್ತದೆ. ನಂತರ ಎಲ್ಲವೂ ಸರಿ ಹೋಗುತ್ತದೆ. ಈಗ ಹೆಂಡತಿ ಮಕ್ಕಳ ಜತೆ ಚೆನ್ನಾಗಿದ್ದಾರೆ ಎಂದು ಹೇಳಿದರು. ದರ್ಶನ್ ಅವರು ಜೈಲಿಗೆ ಹೋಗಿ ಬಂದ ನಂತರ 'ಸಾರಥಿ' ಸಿನಿಮಾ ಸೂಪರ್ ಹಿಟ್ ಆಯ್ತು. ಅಲ್ಲಿಂದ ಅವರ ಜೀವನವೇ ಬದಲಾಯ್ತು. ಸಾಮಾಜಿಕ ಜಾಲ ತಾಣಗಳಲ್ಲಿ ದರ್ಶನ್ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯಗಳೂ ಬರುತ್ತಿವೆ. 'ಗಾಡ್ ಫಾದರ್' ಇಲ್ಲದೆ ಬಹಳ ಕಷ್ಟ ಪಟ್ಟು ಬೆಳೆದವರು ದರ್ಶನ್. ಇಂದು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಕರ್ನಾಟಕದ ಮನೆ ಮಾತಾಗಿದ್ದಾರೆ. ಕೃಷಿ ಇಲಾಖೆಯ ಬೆಳೆ ಸಮೀಕ್ಷೆಗೆ ದರ್ಶನ್ ಜಾಹೀರಾತು ನೀಡಿದ ನಂತರ ರೈತರು ಖುಷಿಯಾಗಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ಸಮೀಕ್ಷೆಯಾಗಿದೆ ಎಂದರು. ಸಚಿವ ಬಿ.ಸಿ ಪಾಟೀಲ್ ಅವರು ಕೃಷಿ ಸಚಿವರಾಗಿ ಆಯ್ಕೆಯಾದ ನಂತರ ನಟ ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ದರ್ಶನ್ ಅವರು ಕೃಷಿ ಇಲಾಖೆಗೆ ರಾಯಭಾರಿಯಾಗಿ ಆಗಲು ಒಪ್ಪಿಕೊಂಡಿದ್ದರು. ಕೃಷಿ ಇಲಾಖೆಯ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕೆ ನಟ ದರ್ಶನ್ ಯಾವುದೇ ಹಣವನ್ನು ಪಡೆದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.
from India & World News in Kannada | VK Polls https://ift.tt/3laIxWA