ಈತ ಕೆಎಲ್ ರಾಹುಲ್‌ಗೆ ಸರಿಸಮ ಎಂದ ಬ್ರಿಯಾನ್ ಲಾರಾ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ವೃತ್ತಿಬದುಕಿನ ಚೊಚ್ಚಲ ಶತಕ ಬಾರಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಸಾಮರ್ಥ್ಯವನ್ನು ವೆಸ್ಟ್‌ ಇಂಡೀಸ್‌ನ ದಿಗ್ಗಜ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಬುಧಾಬಿಯ ಶೇಖ್‌ ಝಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಋತುರಾಜ್‌ ಗಾಯಕ್ವಾಡ್‌, ಕೇವಲ 60 ಎಸೆತಗಳಲ್ಲಿ 9 ಫೋರ್‌ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 101 ರನ್‌ ಚೆಚ್ಚಿದರು. ಇದೇ ವೇಳೆ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಯೊಂದಿಗೆ ಆರೆಂಜ್ ಕ್ಯಾಪ್‌ ಸಂಪಾದಿಸಿದರು. ಪಂದ್ಯದಲ್ಲಿ ತಮ್ಮ ಮೊದಲ 30 ರನ್‌ಗಳನ್ನು ಗಳಿಸಲು 29 ಎಸೆಸತಗಳನ್ನು ತೆಗೆದುಕೊಂಡಿದ್ದ ಋತುರಾಜ್‌ ಗಾಯಕ್ವಾಡ್‌ ನಂತರ ರನ್‌ ಗಳಿಕೆಯ ವೇಗ ಹೆಚ್ಚಿಸಿ 31 ಎಸೆತಗಳಲ್ಲಿ 71 ರನ್‌ಗಳನ್ನು ಸಿಡಿಸಿದರು. ಕೊನೇ ಓವರ್‌ನ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮ್ಮ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಈ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಐಪಿಎಲ್‌ ಕಾಮೆಂಟೇಟರ್‌ ಹಾಗೂ ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ, ಸಿಎಸ್‌ಕೆ ಓಪನರ್‌ ತಮ್ಮ ಇನಿಂಗ್ಸ್‌ ಕಟ್ಟಿದ ರೀತಿಯನ್ನು ಗುಣಗಾನ ಮಾಡಿದ್ದಾರೆ. "ಅಂತಿಮ ಓವರ್‌ಗಳಲ್ಲಿ ಋತುರಾಜ್‌ಗೆ ಹೆಚ್ಚು ಸ್ಟ್ರೈಕ್‌ ಸಿಕ್ಕಿದ್ದರೆ ಬಹುಶಾ ಅವರು ಅಜೇಯ 135 ರನ್‌ಗಳನ್ನು ಗಳಿಸಿರುತ್ತಿದ್ದರು. ಆದರೆ ಅವರ ಬ್ಯಾಟಿಂಗ್‌ ತಂತ್ರಗಾರಿಕೆಯನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಇನಿಂಗ್ಸ್‌ ಕಟ್ಟಿದ ರೀತಿಯಂತೂ ಅದ್ಭುತ. ಅರ್ಧಶತಕ ಬಾರಿಸಿದ ಬಳಿಕ ಆತ ರನ್ ಗತಿಯನ್ನು ಹೆಚ್ಚಿಸಿದ ರೀತಿ ನಂಬಲು ಅಸಾಧ್ಯ. ಕಣ್ಣಿಗೆ ಹಬ್ಬ," ಎಂದು ಲಾರಾ ಶ್ಲಾಘಿಸಿದ್ದಾರೆ. ಋತುರಾಜ್‌ ತಮ್ಮ ಈ ಮನಮೋಹಕ ಇನಿಂಗ್ಸ್‌ ವೇಳೆ ವಿಶೇಷ ದಾಖಲೆ ಒಂದನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ 2021 ಟೂರ್ನಿಯ ಅತಿ ದೊಡ್ಡ ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್‌ನ ಕೈರೊನ್‌ ಪೊಲಾರ್ಡ್‌ ಅವರ ದಾಖಲೆ ಮುರಿದಿದ್ದಾರೆ. ಪೊಲಾರ್ಡ್‌ 105 ಮೀ. ದೂರಕ್ಕೆ ಸಿಕ್ಸರ್‌ ಬಾರಿಸಿದ್ದರು. ಋತುರಾಜ್‌ 108 ಮೀ.ಗಳ ದೊಡ್ಡ ಸಿಕ್ಸರ್‌ ಸಿಡಿಸಿ ಪೊಲಾರ್ಡ್‌ಗೆ ಸಡ್ಡು ಹೊಡೆದಿದ್ದಾರೆ. "ನಂಬಲು ಅಸಾಧ್ಯದ ರೀತಿಯ ಬ್ಯಾಟಿಂಗ್‌. ಅತ್ಯುತ್ತಮ ಕ್ರಿಕೆಟ್ ಹೊಡೆತಗಳ ಮೂಲಕವೂ ಬಿರುಸಿನ ರನ್‌ ಗಳಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಒಬ್ಬ ಬ್ಯಾಟ್ಸ್‌ಮನ್‌ ಆಗಿ ನನಗೆ ಇದಕ್ಕಿಂತಲೂ ಹೆಮ್ಮೆಯ ವಿಚಾರ ಸಿಗಲಾರದು. ಮನಮೋಹಕ ಹಾಗೂ ನಂಬಲು ಸಾಧ್ಯವಾಗದೇ ಇರುವಂತಹ ಬ್ಯಾಟಿಂಗ್ ಪ್ರದರ್ಶನವಿದು. ಋತುರಾಜ್‌ ಅವರನ್ನು ಈಗ ಕೆಎಲ್‌ ರಾಹುಲ್‌ ಅವರಂತಹ ಆಟಗಾರರ ಸಾಲಿನಲ್ಲಿ ಕಾಣಬಹುದು," ಎಂದಿದ್ದಾರೆ. 24 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಋತುರಾಜ್‌, ಈ ವರ್ಷ 500ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಆರೆಂಜ್ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಆಡಿದ 12 ಪಂದ್ಯಗಳಿಂದ 50.8ರ ಸರಾಸರಿಯಲ್ಲಿ 508 ರನ್‌ಗಳನ್ನು ಬಾರಿಸಿದ್ದಾರೆ. 140.33ರ ಅದ್ಭುತ ಸ್ಟ್ರೈಕ್‌ರೇಟ್‌ ಕೂಡ ಅವರದ್ದಾಗಿದೆ. ನಾಲ್ಕು ಬಾರಿ 50ಕ್ಕೂ ಹೆಚ್ಚು ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಸಿಎಸ್‌ಕೆ-ಆರ್‌ಆರ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್ ( 101*, ಫಾಫ್ ಡು'ಪ್ಲೆಸಿಸ್‌ 25, ಮೊಯೀನ್ ಅಲಿ 21, ರವೀಂದ್ರ ಜಡೇಜಾ 32*; ರಾಹುಲ್ ತೆವಾಟಿಯಾ 39ಕ್ಕೆ 3). ರಾಜಸ್ಥಾನ್ ರಾಯಲ್ಸ್‌: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್ (ಎವಿನ್ ಲೂಯಿಸ್ 27, ಯಶಸ್ವಿ ಜೈಸ್ವಾಲ್ 50, ಸಂಜು ಸ್ಯಾಮ್ಸನ್ 28, ಶಿವಂ ದುಬೇ 64*; ಶಾರ್ದುಲ್ ಠಾಕೂರ್‌ 30ಕ್ಕೆ 2). ಪಂದ್ಯಶ್ರೇಷ್ಠ: ಋತುರಾಜ್ ಗಾಯಕ್ವಾಡ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mBETEL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...