'ವೈಫಲ್ಯತೆ ಆಟಗಾರನನ್ನು ಬಲಿಷ್ಠಗೊಳಿಸುತ್ತದೆ' ರಾಹುಲ್‌ಗೆ ಧವನ್ ಬೆಂಬಲ!

ಪುಣೆ: ಇಂಗ್ಲೆಂಡ್‌ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕದೊಂದಿಗೆ ಕಮ್‌ಬ್ಯಾಕ್‌ ಮಾಡಿದ ಸಹ ಆಟಗಾರ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಮೊದಲನೇ ಓಡಿಐ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡ ನಿಗದಿತ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 317 ರನ್‌ ಗಳಿಸಿತ್ತು. ಬಳಿಕ 318 ರನ್‌ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್‌ ತಂಡ 42.1 ಓವರ್‌ಗಳಿಗೆ 251 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ ತಂಡ ಗೆಲುವಿನೊಂದಿಗೆ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಪಂದ್ಯದಲ್ಲಿ 98 ರನ್‌ ಗಳಿಸಿದ್ದ ಶಿಖರ್ ಧವನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಧವನ್, ಕೆ.ಎಲ್‌ ರಾಹುಲ್‌ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದ್ದರು. ಇಂಗ್ಲೆಂಡ್‌ ವಿರುದ್ಧ ಕಳೆದ ಟಿ20 ಸರಣಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಕೆ.ಎಲ್‌ ರಾಹುಲ್ ಕ್ರಮವಾಗಿ 1, 0, 0 ಹಾಗೂ 14 ರನ್‌ ಗಳಿಸಿ ವೈಫಲ್ಯ ಅನುಭವಿಸಿದ್ದರು. ನಂತರ, ಸರಣಿಯ ಕೊನೆಯ ಪಂದ್ಯದಲ್ಲಿ ರಾಹುಲ್‌ ಬದಲು ರೋಹಿತ್‌ ಶರ್ಮಾ ಜತೆ ವಿರಾಟ್‌ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಓಡಿಐ ಸರಣಿಯಲ್ಲಿ ರಾಹುಲ್‌ಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಸಿಗುವುದು ಬಹುತೇಕ ಅನುಮಾನವಿತ್ತು. ಆದರೆ, ರಿಷಭ್‌ ಪಂತ್‌ ಬದಲು ರಾಹುಲ್‌ಗೆ ವಿಕೆಟ್‌-ಕೀಪಿಂಗ್‌ ಜವಾಬ್ದಾರಿಯನ್ನು ಕ್ಯಾಪ್ಟನ್‌ ಕೊಹ್ಲಿ ನೀಡಿದರು. ಸಿಕ್ಕ ಅವಕಾಶವನ್ನು ಕೆ.ಎಲ್‌ ರಾಹುಲ್‌ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕೆ.ಎಲ್‌ ರಾಹುಲ್‌ 43 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 62 ರನ್‌ ಗಳಿಸಿ ಭಾರತ 317 ರನ್‌ ಗಳಿಸಲು ನೆರವಾದರು. ಜತೆಗೆ ವಿಕೆಟ್‌ ಕೀಪಿಂಗ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಖರ್ ಧವನ್, ಹಲವು ವೈಫಲ್ಯಗಳ ಬಳಿಕ ಅರ್ಧಶತಕ ಸಿಡಿಸಿರುವ ಕೆ.ಎಲ್‌ ರಾಹುಲ್‌ ಇದೀಗ 'ಬಲಿಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು ಹಾಗೂ ಬಲಗೈ ಆಟಗಾರನ ಬ್ಯಾಟಿಂಗ್‌ ಕ್ಲಾಸ್‌ ಎಂದು ಗುಣಗಾನ ಮಾಡಿದರು. "ಕೆ.ಎಲ್‌ ರಾಹುಲ್ ಅರ್ಧಶತಕ ಬಾರಿಸಿದ್ದನ್ನು ನೋಡುವುದು ಅದ್ಭುತವಾಗಿತ್ತು. ರಾಹುಲ್‌ ಕ್ಲಾಸ್‌ ಆಟಗಾರನಾಗಿದ್ದು, ಅವರ ಬ್ಯಾಟಿಂಗ್‌ ನೋಡಲು ತುಂಬಾ ಇಷ್ಟಪಡುತ್ತೇನೆ. ವೈಫಲ್ಯಗಳು ಚಾಂಪಿಯನ್‌ ಆಟಗಾರರನ್ನು ಬಲಿಷ್ಠಗೊಳಿಸುತ್ತದೆ. ಇದೀಗ ಅವರು ಬಲಿಷ್ಠ ಆಟಗಾರನಾಗಿ ಪರಿವರ್ತನೆಯಾಗಿದ್ದಾರೆಂದು ನಾನು ಭಾವಿಸುತ್ತೇನೆ," ಎಂದರು. "ಇಂದು ಅವರ(ರಾಹುಲ್‌) ಬ್ಯಾಟಿಂಗ್‌ ನೆರವಿನಿಂದ ನಾವು 300ಕ್ಕೂ ಹೆಚ್ಚಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು ಹಾಗೂ ಅವರ ಬ್ಯಾಟಿಂಗ್ ನೋಡಲು ಅದ್ಭುತವಾಗಿತ್ತು. ಇಂದು ತೋರಿದ ಪ್ರದರ್ಶನದಿಂದ ಅವರಲ್ಲಿನ ವಿಶ್ವಾಸ ವೃದ್ದಿಯಾಗಿದೆ ಹಾಗೂ ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಸುಲಲಿತವಾಗಿ ಬ್ಯಾಟಿಂಗ್‌ ಮಾಡಲಿದ್ದಾರೆಂಬ ನಂಬಿಕೆ ನಮಗೆ ಇದೆ ," ಎಂದು ಧವನ್‌ ಹೇಳಿದರು. ಇಂಗ್ಲೆಂಡ್‌ ವಿರುದ್ಧ ಚುಟುಕು ಸರಣಿಯಲ್ಲಿ ‌ ವೈಫಲ್ಯದ ಹೊರತಾಗಿಯೂ ಕೆ.ಎಲ್‌ ರಾಹುಲ್, ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರತೀಯರ ಪಾಲಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಅಲ್ಲದೆ, 2020ರ ಐಪಿಎಲ್‌ ಟೂರ್ನಿಯಲ್ಲಿ ರಾಹುಲ್ ಆರೆಂಜ್‌ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Priug7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...