ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಎಕದಿನ ಕ್ರಿಕೆಟ್ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಕೈಲಿ ಬೌಲಿಂಗ್ ಮಾಡಿಸದೇ ಇರುವ ತಂತ್ರವನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಟುವಾಗಿ ಟೀಕಿಸಿದ್ದಾರೆ. ಆಟಗಾರರ ಮೇಲಿನ ಹೊರೆ ನೊರ್ವಹಿಸುವ ಸಲುವಾಗಿ ಹಾರ್ದಿಕ್ಗೆ ಒಡಿಐ ಸರಣಿಯಲ್ಲಿ ಬೌಲಿಂಗ್ ನೀಡಲಾಗಿಲ್ಲ ಎಂದು ಎರಡನೇ ಪಂದ್ಯದಲ್ಲಿ ಎದುರು 6 ವಿಕೆಟ್ಗಳ ಹೀನಾಯ ಸೋಲನುಭವಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು. ಆದರೆ, ಭಾರತ ತಂಡದ ಪರ ಹಾರ್ದಿಕ್ ಬೌಲಿಂಗ್ ಮಾಡಲೇ ಬೇಕು. ಅವರ ಮೇಲಿನ ಆಟದ ಹೊರೆ ನಿರ್ವಹಿಸಲೇ ಬೇಕೆಂದರೆ ಅದನ್ನು ಟೂರ್ನಿ ವೇಳೆ ಮಾಡಿ ಎಂದು ಸುನಿಲ್ ಗವಾಸ್ಕರ್ ಗುಡುಗಿದ್ದಾರೆ. "ಆಟಗಾರರ ಮೇಲಿನ ಹೊರೆ ನಿರ್ವಹಿಸುವ ಬಗ್ಗೆ ಮಾತನಾಡುವುದಾದರೆ, ನಿಮ್ಮ ತಂಡದ ಸಮತೋಲನದ ಬಗ್ಗೆಯೂ ಗಮನ ನೀಡಬೇಕು. ಆಟಗಾರರ ಹೊರೆ ನಿರ್ವಹಿಸಲು ತಂಡದ ಸಮತೋಲನ ಹಾಳುಮಾಡುವುದು ಸರಿಯಲ್ಲ. ಕೇವಲ ಬ್ಯಾಟಿಂಗ್ ಅಷ್ಟೇ ಮಾಡುವುದಿದ್ದರೆ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಬಾರದು. ಐಪಿಎಲ್ ಟೂರ್ನಿ ವೇಳೆ ಆಟಗಾರರ ಹೊರೆ ನಿರ್ವಹಣೆ ನಡೆಯಲಿ. ಆಲ್ರೌಂಡರ್ ಆಗಿ ಭಾರತ ತಂಡದ ಪರ ಆಡುವಾಗ ಕನಿಷ್ಠ 3-4 ಓವರ್ಗಳನ್ನಾದರೂ ಬೌಲಿಂಗ್ ಮಾಡಲೇ ಬೇಕು," ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. "ಹಾರ್ದಿಕ್ ಸಂಪೂರ್ಣ ಹತ್ತು ಓವರ್ ಬೌಲಿಂಗ್ ಮಾಡಲು ಸಿದ್ಧರಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಎಂದಿನ ಬೌಲರ್ಗಳು ಹೆಚ್ಚು ರನ್ ಬಟ್ಟುಕೊಡುವಾಗ ಅವರ ಸ್ಥಾನದಲ್ಲಿ 3-4 ಓವರ್ಗಳನ್ನು ಬೌಲಿಂಗ್ ಮಾಡಲೇ ಬೇಕು. ಹಾರ್ದಿಕ್ ಅವರಲ್ಲಿ ಆ ಸಾಮರ್ಥ್ಯವಿದೆ. ಆಟಗಾರರ ಮೇಲಿನ ಹೊರೆ ಕಡಿಮೆ ಮಾಡಲು ಟೀಮ್ ಇಂಡಿಯಾದ ಪ್ರದರ್ಶನ ಮಟ್ಟವನ್ನು ಬಲಿಕೊಡುವುದು ಸರಿಯಲ್ಲ. ಈ ಬಗ್ಗೆ ನನಗೆ ಅಸಮಾಧಾನವಿದೆ," ಎಂದಿದ್ದಾರೆ. ಪಾಂಡ್ಯ ಬೌಲಿಂಗ್ ಮಾಡಬೇಕು: ಸೆಹ್ವಾಗ್ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದು, ಹಾರ್ದಿಕ್ ಬೌಲಿಂಗ್ ಮಾಡಬೇಕು ಎಂದಿದ್ದಾರೆ. "ಕೊಂಚ ಬದಲಾವಣೆ ತರಲು ಹಾರ್ದಿಕ್ಗೆ 3-4 ಓವರ್ ನೀಡಬಹುದಿತ್ತು. ಟಿ20 ಕ್ರಿಕೆಟ್ನಲ್ಲಿ ಅವರು 4 ಓವರ್ಗಳನ್ನು ಎಸೆದಿದ್ದಾರೆ. ಇದನ್ನೇ ಒಡಿಐ ಕ್ರಿಕೆಟ್ನಲ್ಲೂ ಮಾಡಬಲ್ಲರು. ಬೌಲಿಂಗ್ ನೀಡುವುದಿಲ್ಲ ಎಂದಾದರೆ ಬರಿ ಬ್ಯಾಟ್ಸ್ಮನ್ ಎಂದು ಆಯ್ಕೆ ಮಾಡಿ. ಆಲ್ರೌಂಡರ್ ಎಂದ ಮೇಲೆ ಅದರ ಲಾಭ ತಂಡಕ್ಕೆ ಸಿಗಲೇ ಬೇಕು," ಎಂದಿದ್ದಾರೆ. ಐಪಿಎಲ್ 2021 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಬ್ಯಾಟಿಂಗ್ನಲ್ಲಿ ಪಾಂಡ್ಯ ಶ್ರೇಷ್ಠ ಲಯ ಕಂಡಿದ್ದಾರಾದರೂ, ಬೌಲಿಂಗ್ನಲ್ಲಿ ಇನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ. ಐಪಿಎಲ್ 2020 ಟೂರ್ನಿಯಲ್ಲಿ ಹಾರ್ದಿಕ್ ಬೌಲಿಂಗ್ ಮಾಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬೌಲಿಂಗ್ನಲ್ಲಿ ಉತ್ತಮ ಕಮ್ಬ್ಯಾಕ್ ಮಾಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39E1oTR