ಬೆಂಗಳೂರು: ಕೋವಿಡ್-19 ನಿಂದ ಸಂಕಷ್ಟಕ್ಕೆ ಸಿಲುಕಿ ಜರ್ಜರಿತಗೊಂಡಿರುವ ಹೋಟೆಲ್ ಕ್ಷೇತ್ರದ ಪುನಶ್ಚೇತನಕ್ಕೆ ಪೂರಕವಾಗುವಂತೆ ಸ್ಟಾರ್ ವರ್ಗೀಕೃತ ಹೋಟೆಲ್ಗಳಿಗೆ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರವರು ಆತಿಥ್ಯ ವಲಯಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಿ, ವಿದ್ಯುಚ್ಛಕ್ತಿ ದರ ಹಾಗೂ ಆಸ್ತಿ ತೆರಿಗೆಯಲ್ಲಿ 5 ವರ್ಷಗಳ ಅವಧಿಗೆ ರಿಯಾಯಿತಿ ನೀಡಿ, ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದಲ್ಲಿ ನೊಂದಣಿಯಾಗಿರುವ 62 ಸ್ಟಾರ್ ವರ್ಗೀಕೃತ ಹೋಟೆಲ್ಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ನೊಂದಣಿಯಾಗುವ ಸ್ಟಾರ್ ವರ್ಗೀಕೃತ ಹೋಟೆಲ್ಗಳಿಗೆ ಕೈಗಾರಿಕಾ ಸ್ಥಾನಮಾನ ದೊರೆಯಲಿದೆ. ಈ ಕುರಿತು ಕೈಗಾರಿಕಾ ಅಭಿವೃದ್ಧಿ ಹಾಗೂ ವಾಣಿಜ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಮಾಲೋಚನೆ ಮಾಡಿ, ಮಾರ್ಗಸೂಚಿಗಳನ್ನು ಹೊರಡಿಸಲಿದೆ. ವಿದ್ಯುಚ್ಛಕ್ತಿ ದರ ಹಾಗೂ ಆಸ್ತಿ ತೆರಿಗೆಯಲ್ಲಿ ವಾಣಿಜ್ಯ ಬಳಕೆದಾರ ಮತ್ತು ಕೈಗಾರಿಕೆ ಬಳಕೆದಾರ ನಡುವಿನ ವ್ಯತ್ಯಾಸದ ದರ ಮಾತ್ರ ಇದಕ್ಕೆ ಅನ್ವಯಿಸುತ್ತದೆ. ಪ್ರವಾಸೋದ್ಯಮ ವಲಯ ರಾಜ್ಯದಲ್ಲಿ ಪ್ರಮುಖ ಕ್ಷೇತ್ರವಾಗಿದ್ದು, ದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪಾರಂಪರಿಕ ನೈಸರ್ಗಿಕ ಕರಾವಳಿ ಆದ್ಯಾತ್ಮಿಕ, ಅರಣ್ಯ ಹಾಗೂ ಸಾಹಸಿ ಪ್ರವಾಸ ಒಳಗೊಂಡಂತೆ 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರ ರಾಜ್ಯದ ಜಿಎಸ್ಡಿಪಿಗೆ ಶೇ.14.8 ರಷ್ಟು ಕೊಡುಗೆ ನೀಡುತ್ತಿದೆ.
from India & World News in Kannada | VK Polls https://ift.tt/3vQOj30