ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಹತ್ತು ಮಂದಿ ದರೋಡೆಕೋರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 80 ಗ್ರಾಂ ಚಿನ್ನಾಭರಣ, ಒಂದು ಮೊಬೈಲ್ ಫೋನ್, 1.45 ಲಕ್ಷ ರೂ. ನಗದು, ಒಂದು ಆಟೋ ಮತ್ತು 2 ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬನಶಂಕರಿ ನಿವಾಸಿ ನಾಗೇಂದ್ರ, ಪಾರ್ಥಿಬನ್, ನಯಾಜ್ ಪಾಷ, ಸೈಯದ್ ಸಿದ್ದಿಕ್, ಸುರೇಶ, ನತೀಶ, ಹನುಮೇಗೌಡ, ಧರ್ಮರಾಜ, ಇಮ್ರಾನ್ ಪಾಷ ಮತ್ತು ಹೇಮಂತ್ ಬಂಧಿತರು. ಐಪಿಎಸ್ ಅಧಿಕಾರಿಯ ಕಾರು ಚಾಲಕರಾಗಿರುವ ಕಾನ್ಸ್ಟೇಬಲ್ ಪ್ರಶಾಂತ್ಕುಮಾರ್ ಅವರ ಮುದ್ದಿನಪಾಳ್ಯದಲ್ಲಿರುವ ಮನೆಯಲ್ಲಿ ಮಾ.6ರಂದು ದರೋಡೆ ನಡೆದಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲಿ ಪ್ರಶಾಂತ್ ಪತ್ನಿ ದೀಪಾ ಒಬ್ಬರೇ ಇದ್ದರು. ಈ ವೇಳೆ ಬಾಗಿಲು ಬಡಿದ ಅಪರಿಚಿತ, ಪ್ರಶಾಂತ್ ಬಳಿ ಮಾತನಾಡಬೇಕು, ಬಾಗಿಲು ತೆಗೆಯಿರಿ ಎಂದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ನುಗ್ಗಿ ಒಳ ನುಗ್ಗಿದ ಆರೋಪಿಗಳು, ಬೆದರಿಸಿದ್ದಾರೆ. ಮನೆಯಲ್ಲಿರುವ ದಾಖಲೆಯನ್ನು ತರಲು ಪ್ರಶಾಂತ್ ಹೇಳಿದ್ದಾರೆಂದು ಹೇಳಿ ಮಲಗುವ ಕೋಣೆಗೆ ನುಗ್ಗಿ ಚಿನ್ನಾಭರಣ, ಮೊಬೈಲ್ ಫೋನ್ ಮತ್ತು ಸುಮಾರು 7 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ದೀಪಾ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
from India & World News in Kannada | VK Polls https://ift.tt/3ck6E0z