ಪ್ರಮೋದ ಹರಿಕಾಂತ ಬೆಳಗಾವಿ: ತೀವ್ರ ಕುತೂಹಲ ಸೃಷ್ಟಿಸಿರುವ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ ದಿ. ಸುರೇಶ್ ಅಂಗಡಿ ಅವರ ಮಗಳು ಶ್ರದ್ಧಾ ಅಂಗಡಿ ಹೆಸರು ಔಟ್ ಆಗಿದ್ದು, ಆ ಜಾಗದಲ್ಲಿಅಂಗಡಿ ಪತ್ನಿ ಮಂಗಳಾ ಅಂಗಡಿ ಅವರ ಹೆಸರು ಸೇರಿಸಲಾಗಿದೆ. ಎರಡು ದಿನಗಳಲ್ಲಿ ನಡೆದುಹೋದ ಈ ಬದಲಾವಣೆ ಅಂಗಡಿ ಕುಟುಂಬದ ಅಭಿಮಾನಿಗಳಲ್ಲಿ ಆಶ್ಚರ್ಯ ಹುಟ್ಟಿಸಿದೆ. ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರ ನಿಧನದ ಅನುಕಂಪ ಗಿಟ್ಟಿಸಿಕೊಳ್ಳಲು ಸಂಭಾವ್ಯ ಅಭ್ಯರ್ಥಿಗಳ ಸಾಲಿನಲ್ಲಿ ಅವರ ಹಿರಿಯ ಮಗಳು, ಬೃಹತ್ ಉದ್ಯಮ ಸಚಿವ ಜಗದೀಶ್ ಶೆಟ್ಟರ್ ಅವರ ಸೊಸೆ ಶ್ರದ್ಧಾ ಅಂಗಡಿ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎನ್ನುವ ಕಾರಣದೊಂದಿಗೆ ಶ್ರದ್ಧಾ ಅವರಿಗೆ ಟಿಕೆಟ್ ಕೊಡಿಸಲು ಸ್ವತಃ ಜಗದೀಶ್ ಶೆಟ್ಟರ್ ಅವರೇ ಪ್ರಯತ್ನ ನಡೆಸಿದ್ದರು. ಇನ್ನೊಂದೆಡೆ, ಬಿಜೆಪಿಯ ಪ್ರಮುಖ 30 ಆಕಾಂಕ್ಷಿಗಳ ಪಟ್ಟಿಯಲ್ಲಿಯೂ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿಇದ್ದಿದ್ದರಿಂದ ಹೈಕಮಾಂಡ್ ಅಭ್ಯರ್ಥಿ ಆಯ್ಕೆಗೆ ಅಳೆದು ತೂಗಿ ಲೆಕ್ಕ ಹಾಕುತ್ತಿದೆ. ಜತೆಗೆ ಕಾಂಗ್ರೆಸ್ ಕೂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯಂಥ ಪ್ರಬಲ ಹುರಿಯಾಳುವನ್ನು ಕಣಕ್ಕಿಳಿಸಲು ಮುಂದಾಗಿದ್ದರಿಂದ ಬಿಜೆಪಿಯೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಹಾಗಾಗಿ ಪಕ್ಷದ ಪ್ರಭಾವ, ಲಿಂಗಾಯತ ಜಾತ್ರಿ ಅಸ್ತ್ರದ ಜತೆಗೆ ಅನುಕಂಪದ ಟ್ರಂಪ್ ಕಾರ್ಡ್ ಮುಖ್ಯ ಎಂದು ಕೆಲ ಹಿರಿಯ ನಾಯಕರು ಅಭಿಪ್ರಾಯಿಸಿದ್ದಾರೆ. ಶೆಟ್ಟರ್ ಸೊಸೆ! ಹೀಗಿರುವಾಗ, ಜಿಲ್ಲಾ ಸಮಿತಿ ಸೂಚಿಸಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಾಜ್ಯ ಸಮಿತಿ ದಾಟಿ ಕರ್ನಾಟಕ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಬಳಿ ತಲುಪುತ್ತಿದ್ದಂತೆಯೇ ಶ್ರದ್ಧಾ ಅಂಗಡಿ ಅವರ ಹೆಸರಿನ ಬಗ್ಗೆ ಪ್ರಶ್ನೆಯೊಂದು ತೂರಿ ಬಂದಿದೆ. ಶ್ರದ್ಧಾ ಅಂಗಡಿ ದಿ. ಸುರೇಶ್ ಅಂಗಡಿ ಅವರ ಪುತ್ರಿಯಾಗಿದ್ದರೂ, ಇನ್ನೊಂದೆಡೆ ಅವರು ಜಗದೀಶ ಶೆಟ್ಟರ್ ಸೊಸೆ. ಹಾಗಾಗಿ ಅವರು ಹುಬ್ಬಳ್ಳಿಯವರು (ಗಂಡನ ಮನೆ), ಜತೆಗೆ ಅವರಿಗೆ ಟಿಕೆಟ್ ಕೊಟ್ಟರೆ ಅಂಗಡಿ ಕುಟುಂಬಕ್ಕೆ ಕೊಟ್ಟಿದ್ದಕ್ಕಿಂತ ಜಗದೀಶ್ ಶೆಟ್ಟರ್ ಅವರ ಕುಟುಂಬಕ್ಕೆ ಅಧಿಕಾರ ಕೊಟ್ಟಂತಾಗುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಅನುಕಂಪದ ಲೆಕ್ಕಾಚಾರ! ಒಂದೇ ಕುಟುಂಬಕ್ಕೆ ಎರಡು ಮೂರು ಅಧಿಕಾರ ಕೊಡುವುದು ಒಳ್ಳೆಯದಲ್ಲ. ದಿ. ಸುರೇಶ್ ಅಂಗಡಿ ಅವರ ಸಾವಿನ ಅನುಕಂಪಕ್ಕಾಗಿ ಶ್ರದ್ಧಾ ಅಂಗಡಿ ಅವರಿಗೆ ಟಿಕೆಟ್ ಕೊಟ್ಟರೆ, ಅನುಕಂಪದ ಬದಲು ಬೇರೆ ಜಿಲ್ಲೆಯವರು ಎನ್ನುವ ವ್ಯತಿರಿಕ್ತ ಆರೋಪ ಚುನಾವಣೆಯಲ್ಲಿ ಹೊಡೆತ ಕೊಡುವ ಅಪಾಯ ಇದೆ. ಹಾಗಾಗಿ ಮಗಳಿಗೆ ಟಿಕೆಟ್ ಕೊಡುವುದಕ್ಕಿಂತ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಲಾಗಿದೆ. ಇದರಿಂದ ಪ್ರಶ್ನಾತೀತವಾಗಿ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎನ್ನುವುದು ಒಂದು ರೀತಿ ಲೆಕ್ಕಾಚಾರ. ಸುರೇಶ್ ಅಂಗಡಿ ಅವರ ಕುಟುಂಬದ ಸಂಭಾವ್ಯ ಅಭ್ಯರ್ಥಿಯ ಹೆಸರು ಬದಲಾದ ಮಾತ್ರಕ್ಕೆ ಅವರಿಗೆ ಟಿಕೆಟ್ ಪಕ್ಕಾ ಆಗಿದೆ ಎನ್ನುವ ವಿಶ್ವಾಸ ಬಿಜೆಪಿ ವಲಯದಲ್ಲಿಯೂ ಗಟ್ಟಿಯಾಗಿಲ್ಲ. ಏಕೆಂದರೆ, ಬೆಂಗಳೂರಿನಲ್ಲಿ ಅನಂತ್ಕುಮಾರ್ ಅವರ ಸಾವಿನ ನಂತರ ನಡೆದ ಪ್ರಯೋಗ ಎಲ್ಲರ ಕಣ್ಣೆದುರಿಗಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಬಿಜೆಪಿ ಹೈಕಮಾಂಡ್ನ ಒಂದೊಂದು ಹೆಜ್ಜೆಯೂ ಆಕಾಂಕ್ಷಿಗಳಲ್ಲಿಎದೆ ಬಡಿತ ಹೆಚ್ಚಿಸುತ್ತಿದೆ.
from India & World News in Kannada | VK Polls https://ift.tt/3cjIgfg