ರಟ್ಟೀಹಳ್ಳಿ: ತಮ್ಮ ಮೇಲೆ ದಾಳಿ ಮಾಡಿದ ಚಿರತೆಯನ್ನು ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ರೈತರಿಬ್ಬರು ಹರಸಾಹಸ ಮಾಡಿ ಅದರೊಂದಿಗೆ ಕಾದಾಡಿ ಕೊಂದು ಹಾಕಿದ್ದಾರೆ. ಜಮೀನಿನಲ್ಲಿ ಬೆಳೆಗೆ ಸೋಮವಾರ ರಾತ್ರಿ ನೀರು ಹಾಯಿಸುವ ವೇಳೆ ಈ ಸಂಗತಿ ನಡೆದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಗದಿಗೆಪ್ಪ ಯಳವಳ್ಳಿ (46) ಅವರಿಗೆ ತುಮ್ಮಿನಕಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ದಾವಣಗೆರೆಯ ಚಿಟಗೇರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕೃಷ್ಣಪ್ಪ ಮೂಡಬಾಗಿಲ(45) ಅವರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಆರ್ಎಫ್ಒ ಹೇಮಗಿರಿ ಅಂಗಡಿ, ಸಿಪಿಐ ಮಂಜುನಾಥ ಪಂಡಿತ, ಪಿಎಸ್ಐ ಕೃಷ್ಣಪ್ಪ ತೋಪಿನ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಚಿರತೆ ದಾಳಿಯಿಂದ ಗಾಯಗೊಂಡ ರೈತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಏನಾಯಿತು? ಎಂದಿನಂತೆ ಸೋಮವಾರ ರಾತ್ರಿ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಗದಿಗೆಪ್ಪ ಅವರ ಮೇಲೆ ಮೊದಲು ಮಾಡಿದೆ. ಈ ವೇಳೆ ಕೃಷ್ಣಪ್ಪ ಬಂದು ಚಿರತೆ ದಾಳಿ ತಪ್ಪಿಸುವುದಕ್ಕೆ ಮುಂದಾಗಿದ್ದಾರೆ. ಆಗ ಇಬ್ಬರ ಮೇಲೂ ಚಿರತೆ ಎರಗಲು ಮುಂದಾಗಿದೆ. ಇಬ್ಬರೂ ಎದೆಗುಂದದೆ ಕಾದಾಡಿ ಚಿರತೆಯನ್ನು ಹಿಡಿಯಲು ಒಂದಾಗಿದ್ದಾರೆ. ಒಬ್ಬ ಸಾಹಸ ಮಾಡಿ ಚಿರತೆಯನ್ನು ಬಿಗಿದಪ್ಪ ಹಿಡಿದ್ದಾರೆ. ಆಗ ಇನ್ನೊಬ್ಬ ಅಲ್ಲಿಯೇ ಸಿಕ್ಕ ಕಲ್ಲಿನಿಂದ ನಿರಂತರವಾಗಿ ಚಿರತೆಗೆ ಹೊಡೆದಿದ್ದಾರೆ. ಇದರಿಂದ ಚಿರತೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಅಧಿಕಾರಿಗಳ ವಿರುದ್ಧ ಆಕ್ರೋಶ ಏತನ್ಮಧ್ಯೆ, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದರು. ಚಿರತೆ ದಾಳಿ ನಡೆದಿದ್ದು ರಾತ್ರಿ ವೇಳೆ ನಡೆದಿದ್ದರೂ ಅಧಿಕಾರಿಗಳು ಸ್ಥಳಕ್ಕೆ ವಿಳಂಬವಾಗಿ ಬಂದಿದ್ದನ್ನು ಖಂಡಿಸಿದರು. ಗಂಭೀರ ಗಾಯಗೊಂಡ ಗದಿಗೆಪ್ಪ ಹಾಗೂ ಕೃಷ್ಣಪ್ಪ ಅವರಿಗೆ ಚಿಕಿತ್ಸೆ ವೆಚ್ಚ ಮತ್ತು ಸೂಕ್ತ ಪರಿಹಾರ ನೀಡಬೇಕು. ಈ ಭಾಗದಲ್ಲಿ ಸಾಕಷ್ಟು ಚಿರತೆಗಳು ವಾಸವಾಗಿದ್ದು, ಅವುಗಳನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದರು. ಹಗಲು ವಿದ್ಯುತ್ ಪೂರೈಸಿ ಬುಳ್ಳಾಪುರ-ಹಾಡೆ ಸೇರಿದಂತೆ ತಾಲೂಕಿನ ಹಲವೆಡೆ ಚಿರತೆಗಳು ಪದೇ ಪದೆ ದಾಳಿ ಮಾಡಿ ರೈತರಿಗೆ ತೊಂದರೆ ಕೊಡುತ್ತಿವೆ. ರೈತರು ಜಮೀನಿಗೆ ಹೋಗಲು ಭಯಪಡುವಂತಾಗಿದೆ. ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಯನ್ನು ರಾತ್ರಿ ವೇಳೆ ಬದಲು ಹಗಲು ಕೊಟ್ಟರೆ ಅನುಕೂಲವಾಗುತ್ತದೆ. ರೈತರ ಪ್ರಾಣ ಹೋದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಎಚ್ಚತ್ತುಕೊಂಡರೆ ಉತ್ತಮ ಎಂದು ರೈತ ಮುಖಂಡರಾದ ಶಂಕರಗೌಡ ಶಿರಗಂಬಿ, ಮಹೇಂದ್ರಪ್ಪ ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/2PkcBl8