ಹೊಸದಿಲ್ಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ, ಅಕ್ಷಯ್ ಠಾಕೂರ್ ರವರನ್ನು ಇಂದು ಬೆಳಗ್ಗೆ 5.30ಕ್ಕೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಯಿತು. ತಿಹಾರ್ ಜೈಲಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರನ್ನು ಏಕಕಾಲಕ್ಕೆ ಗಲ್ಲಿಗೇರಿಸಲಾಯಿತು. 2012 ರಲ್ಲಿ ನಡೆದ 23 ವರ್ಷದ ಅರೆ ವೈದ್ಯಕೀಯ ಪದವಿ ವಿದ್ಯಾರ್ಥಿನಿ 'ನಿರ್ಭಯಾ' ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಇಂದು ಶಿಕ್ಷೆಯಾಗಿದೆ. ಏಳು ವರ್ಷದ ಬಳಿಕ ಅಪರಾಧಿಗಳನ್ನು ನೇಣಿಗೇರಿಸುತ್ತಿರುವುದು ಇದೇ ಮೊದಲು. ಸಂಸತ್ ದಾಳಿ ಸಂಚುಕೋರ ಅಫ್ಜಲ್ ಗುರುವನ್ನು 2013ರ ಫೆ.9ರಂದು ಇಲ್ಲಿ ಗಲ್ಲಿಗೇರಿಸಲಾಗಿತ್ತು. ತಿಹಾರ್ ಜೈಲಿನ ಇತಿಹಾಸ 1958ರಲ್ಲಿ ತಿಹಾರ್ ಎಂಬ ಗ್ರಾಮದಲ್ಲಿ ತಿಹಾರ್ ಸೆಂಟ್ರಲ್ ಜೈಲು ಅನ್ನು ನಿರ್ಮಾಣ ಮಾಡಲಾಯಿತು. ಇದೇ ಕಾರಣಕ್ಕಾಗಿ ಜೈಲಿಗೆ ತಿಹಾರ್ ಎಂಬ ಹೆಸರು ಬಂದಿದೆ. ಇದು ಭಾರತದಲ್ಲಿ ಅತೀ ದೊಡ್ಡ ಕಾರಾಗೃಹ. ಬರೀ ಭಾರತ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಜೈಲಿದು. ಸುಮಾರು 400 ಎಕರೆಯಲ್ಲಿ ನಿರ್ಮಾಣಗೊಂಡಿರುವ ಏಷ್ಯಾದ ಅತೀ ದೊಡ್ಡ ತಿಹಾರ್ ಜೈಲು ಬಿಗಿ ಬಂದೋಬಸ್ತ್ ಅನ್ನು ಹೊಂದಿದೆ. ಪ್ರಾರಂಭದಲ್ಲಿ ಈ ಬಂದಿಕಾನೆಯನ್ನು ಪಂಜಾಬ್ ಸರ್ಕಾರ ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದು, ಆದರೆ 1966 ರಲ್ಲಿ ಡೆಲ್ಲಿಯ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿತು. 1961ರಲ್ಲಿ ತಿಹಾರ್ ಸೆಂಟ್ರಲ್ ಜೈಲಿನ ನಂ.2ರಲ್ಲಿ ಜೈಲಿನ ಫ್ಯಾಕ್ಟರಿ ಆರಂಭಿಸಲಾಗಿತ್ತು. ಅಲ್ಲಿ ಕೈದಿಗಳು ಮರಗೆಲಸ, ಕೈಮಗ್ಗ, ಟೈಲರಿಂಗ್, ಕೆಮಿಕಲ್, ಪೇಪರ್ ತಯಾರಿಕೆ, ಬೇಕರಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ನಂತರ 2009ರಲ್ಲಿ ಶೂ ಉತ್ಪಾದನಾ ಘಟಕ ಆರಂಭಿಸಲಾಯಿತು. ಶೂ ಉತ್ಪಾದನಾ ಘಟಕದಲ್ಲಿ ಕೈದಿಗಳು ಕೆಲಸ ಮಾಡುತ್ತಾರೆ. ಇದರಿಂದ ಬಂದಂತಹ ಆದಾಯವನ್ನು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಧನವಾಗಿ ನೀಡಲಾಗುತ್ತದೆ. ಕೈದಿಗಳ ಮನ ಪರಿವರ್ತನೆಯನ್ನು ಮಾಡಲು ಕಿರಣ್ ಬೇಡಿ ತಿಹಾರ್ ಜೈಲಿನ ಇನ್ಸ್ ಪೆಕ್ಟರ್ ಜನರಲ್ ಆಗಿದ್ದ ಸಮಯದಲ್ಲಿ ಪ್ರಯತ್ನಿಸಿದ್ದರು. ಜೈಲಿನ ಹೆಸರನ್ನು ತಿಹಾರ್ ಆಶ್ರಮ ಎಂದು ಬದಲಾಯಿಸಿ, ಕೈದಿಗಳು ಮತ್ತು ಸಿಬ್ಬಂದಿಗಳಿಗೆ ವಿಪಾಸ್ಸನಾ ಧ್ಯಾನವನ್ನು ಸಹ ಆರಂಭಿಸಿದ್ದರು. ಕೈದಿಗಳು ದೂರ ಶಿಕ್ಷಣದ ಮೂಲಕ ಪದವಿಗಳನ್ನು ಸಹ ಪಡೆದಿದ್ದರು. ತಿಹಾರ್ ಜೈಲಿನಲ್ಲಿ ಇರುವ ಕೈದಿಗಳಿಗೆ, ಕೇಬಲ್ ಟಿವಿ, ಒಳಾಂಗಣ, ಹೊರಾಂಗಣ ಗೇಮ್ಸ್, ಕ್ಯಾಂಟೀನ್, ಉನ್ನತ ದರ್ಜೆಯ ಶೌಚಾಲಯ, ಹಸಿರು ವಾತಾವರಣ, ಮೆಡಿಕಲ್ , ಕಾನೂನು ನೆರವು, ಶುದ್ಧ ಕುಡಿಯುವ ನೀರು, ದೂರವಾಣಿ ಹೀಗೆ ಹಲವು ಸೌಲಭ್ಯಗಳು ಲಭ್ಯವಿವೆ. ಇಲ್ಲಿ ಘಟಾನುಘಟಿಗಳು ಜೈಲು ಕಂಬಿ ಎಣಿಸಿದ್ದರುಇಂದಿರಾಗಾಂಧಿ ಪುತ್ರ ಸಂಜಯ್ ಗಾಂಧಿ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್, ಖ್ಯಾತ ಉದ್ಯಮಿ ಸುಬ್ರತೋ ರಾಯ್, ಭೂಗತ ಪಾತಕಿ ಛೋಟಾ ರಾಜನ್, ಪತ್ರಕರ್ತ ಸುಧೀರ್ ಚೌದರಿ, ಇಂದಿರಾ ಹಂತಕರಾದ ಸತ್ವಂತ್ ಸಿಂಗ್, ಕೇಹರ್ ಸಿಂಗ್, ಅಂತಾರಾಷ್ಟ್ರೀಯ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್, ಅಸ್ಸಾಂನ ಶಿಕ್ಷಣ ಸಚಿವ ರಿಪುನ್ ಬೋರಾ, ಎ.ರಾಜಾ, ವಿನೋದ್ ಗೋಯೆಂಕಾ, ಸುರೇಶ್ ಕಲ್ಮಾಡಿ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ಮಿಲ್ಕಾ ಸಿಂಗ್, ಐಎನ್ ಎಕ್ಸ್ ಪ್ರಕರಣದಲ್ಲಿ ಪಿ.ಚಿದಂಬರಂ, ಅಕ್ರಮ ಹಣ ವರ್ಗಾವಣೆಯಲ್ಲಿ ಡಿಕೆ ಶಿವಕುಮಾರ್ ಹೀಗೆ ಘಟಾನುಘಟಿ ರಾಜಕಾರಣಿಗಳು, ಭೂಗತ ಪಾತಕಿಗಳು, ಖ್ಯಾತ ಉದ್ಯಮಿಗಳು ತಿಹಾರ್ ಜೈಲು ಕಂಬಿ ಎಣಿಸಿದ್ದರು.
from India & World News in Kannada | VK Polls https://ift.tt/2WvBBaG