ಹೊಸ ದಿಲ್ಲಿ: ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು ಬೆಳಗ್ಗಿನ ಜಾವ 5.30 ಕ್ಕೆ ಮರಣದಂಡನೆಯಾಗಿದೆ. ಈ ಮೂಲಕ 7 ವರ್ಷಗಳ ನಿರ್ಭಯಾ ಹೆತ್ತವರ ಹೋರಾಟಕ್ಕೆ ಫಲ ಸಿಕ್ಕಿದೆ. ಜೈಲಿನಲ್ಲಿ ಅವರನ್ನು ಗಲ್ಲಿಗೇರಿಸುತ್ತಿದ್ದಂತೆಯೇ ಹೊರಗಡೆ ಸಂಭ್ರಮ ಮುಗಿಲು ಮುಟ್ಟಿದೆ. ನಿರ್ಭಯಾ ಚಿರಾಯು, ಭಾರತ ಮಾತೆಗೆ ಜೈ ಎಂದು ಘೋಷಣೆಗಳು ಮೊಳಗಿವೆ. ತಿಹಾರ್ ಜೈಲು ಹೊರಗೆ ನೆರೆದಿದ್ದ ನೂರಾರು ಮಂದಿ 'ಲಾಂಗ್ ಲೀವ್ ನಿರ್ಭಯಾ', 'ಭಾರತ್ ಮಾತಾಕೀ ಜೈ' ಘೋಷಣೆಗಳನ್ನು ಮೊಳಗಿಸಿದರು. ಸಿಹಿ ಹಂಚಿ ಸಂಭ್ರಮ: ಹಂತಕರಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ ದೆಹಲಿಯ ತಿಹಾರ್ ಜೈಲಿನ ಮುಂಭಾಗದಲ್ಲಿ ಜನ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯೋಗಿತಾ ಭಯಾನಾ ಕೂಡ ಭಾಗಿಯಾಗಿ ಸಿಹಿ ಹಂಚಿ ಸಂಭ್ರಮಿಸಿದರು.
ಅಪರಾಧಿಗಳಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಹಾಗೂ ಪವನ್ ಗುಪ್ತಾ ಕೊನೆಯವರೆಗೂ ಕಾನೂನು ಹೋರಾಟ ನಡೆಸಿದರೂ ಸಾವಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗಲ್ಲಿಗೇರಿಸಿದ ಅರ್ಧಗಂಟೆಯ ಬಳಿಕ ಅಪರಾಧಿಗಳ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಖೈದಿಗಳ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
from India & World News in Kannada | VK Polls https://ift.tt/2Qy2PJE