ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವರಿಗೆ ಮತ್ತೆ ಮಧ್ಯಪ್ರದೇಶ ಪಟ್ಟ ಒಲಿಯುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಶುಕ್ರವಾರ ಕಮಲ್ನಾಥ್ ಸರಕಾರ ಪತನಗೊಳ್ಳುತ್ತಿದ್ದಂತೆಯೇ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾರು ಎನ್ನುವುದು ಜಿಜ್ಞಾಸೆಗೆ ಕಾರಣವಾಗಿದೆ. ರಾಜ್ಯದ ಮಾಜಿ ಸಚಿವ ನರೋತ್ತಮ ಶರ್ಮಾ ಮತ್ತು ಕೇಂದ್ರದ ಹಾಲಿ ಸಚಿವ ನರೇಂದ್ರ ಸಿಂಗ್ ತೋಮರ್ ಹೆಸರುಗಳೂ ಪ್ರಮುಖವಾಗಿ ಕೇಳಿಬಂದಿವೆ. ಶರ್ಮಾ ಅವರು ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ರುವಾರಿ ಎಂದು ಹೇಳಲಾಗಿದೆ. ಸತತ 13 ವರ್ಷ (2009ರ ನ. 29ರಿಂದ 2018ರ ಡಿ. 12) ಮುಖ್ಯಮಂತ್ರಿಯಾಗಿದ್ದ ಚೌಹಾಣ್ ಬದಲು ಎರಡನೇ ಹಂತದ ನಾಯಕರಿಗೆ ನಾಯಕತ್ವ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ.
15 ತಿಂಗಳ ಹಿಂದೆ ಶಾಸಕಾಂಗ ಪಕ್ಷದ ನಾಯಕರಾಗಿ ಚೌಹಾಣ್ ಅವರನ್ನು ಆಯ್ಕೆ ಮಾಡದೇ ಗೋಪಾಲ ಭಾರ್ಗವ ಅವರನ್ನು ಆಯ್ಕೆ ಮಾಡುವ ಮೂಲಕ ನಾಯಕತ್ವ ಬದಲಾವಣೆ ಸೂಚನೆಯನ್ನು ವರಿಷ್ಠರು ಆಗಲೇ ನೀಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿಬಂದಿದ್ದವು. ಆದರೆ, ಜನಪ್ರಿಯತೆ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ಕರೆದೊಯ್ಯುವ ಗುಣದಿಂದಾಗಿ ಚೌಹಾಣ್ ಅವರಿಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಪಟ್ಟ ಒಲಿಯುವುದು ಖಚಿತ ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚೌಹಾಣ್ ಅವರು ಆರ್ಎಸ್ಎಸ್ ಪ್ರಮುಖರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೆಲವು ನಾಯಕರ ಪ್ರಕಾರ, ಚೌಹಾಣ್ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿಯೇ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ.
ಎರಡು ವಾರಗಳ ಹೈಡ್ರಾಮಾಕಳೆದ ಮಾರ್ಚ್ 3 ರಂದು ಕಾಂಗ್ರೆಸ್ ಹಾಗೂ ಪಕ್ಷೇತರರು ಸೇರಿ ಆರು ಮಂದಿ ಶಾಸಕರ ರೆಸಾರ್ಟ್ ಪ್ರಯಾಣದೊಂದಿಗೆ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಶುರುವಾಗಿತ್ತು. ಅವರಲ್ಲಿ ಕೆಲವರನ್ನು ವಾಪಸ್ ಕರೆತರುವಲ್ಲಿ ಕಮಲ್ನಾಥ್ ಮತ್ತು ದಿಗ್ವಿಜಯ್ ಸಿಂಗ್ ಯಶಸ್ವಿಯಾಗಿದ್ದರು. ಮಾರ್ಚ್ 9ರಂದು ಆರು ಸಚಿವರು ಸೇರಿ 22 ಶಾಸಕರು ರಾಜೀನಾಮೆ ನೀಡುವುದರೊಂದಿಗೆ ರಾಜಕೀಯ ಹೈಡ್ರಾಮಾ ಹೊಸ ತಿರುವು ಪಡೆಯಿತು. ಬಂಡಾಯ ಶಾಸಕರು ಬೆಂಗಳೂರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆಪರೇಷನ್ ಮತ್ತು ರಿವರ್ಸ್ ಆಪರೇಷನ್ ಭೀತಿಯಿಂದ ಕಾಂಗ್ರೆಸ್, ಬಿಜೆಪಿ ತಮ್ಮ ಶಾಸಕರನ್ನು ಜೈಪುರ, ಗುರುಗ್ರಾಮಕ್ಕೆ ಸ್ಥಳಾಂತರಿಸಿದ್ದವು. ಮಾರ್ಚ್ 17ರಂದು ವಿಧಾನಸಭೆ ಕಲಾಪವನ್ನು ರಾಜ್ಯಪಾಲರ ಭಾಷಣಕ್ಕೆ ಸೀಮಿತಗೊಳಿಸಿ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮಾರ್ಚ್ 26ಕ್ಕೆ ಮುಂದೂಡುವ ಮೂಲಕ ಕಮಲ್ನಾಥ್ ಬಿಜೆಪಿಗೆ ಸಡ್ಡು ಹೊಡೆದಿದ್ದರು. ಆದರೆ ಸುಪ್ರೀಂ ಕೋರ್ಟ್ನ ತೀರ್ಪಿನಿಂದ ತಂತ್ರಗಳೆಲ್ಲಾ ಬುಡಮೇಲಾಗಿ ಶುಕ್ರವಾರ ಕಮಲ್ನಾಥ್ ಸರಕಾರ ಪತನವಾಯಿತು.
from India & World News in Kannada | VK Polls https://ift.tt/2UkEjgk