ಯುಗಾದಿ ಹಬ್ಬ ಬಂತೆಂದು ಊರಿಗೆ ಓಡ್ಬೇಡಿ ಪ್ಲೀಸ್‌: ಬಿಎಸ್‌ವೈ ಮನವಿ

- ಬಿ ಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ ''ಒಲೆ ಹೊತ್ತಿ ಉರಿದೊಡೆ, ನಿಲಬಹುದಲ್ಲದೆ, ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ...'' ಎಂಬ ಬಸವಣ್ಣನವರ ವಚನ ಈಗ ಎಷ್ಟು ಸಾಂದರ್ಭಿಕವಾಗಿದೆ ನೋಡಿ. ಧರೆ ಈಗ ಕೊರೊನಾ ವೈರಸ್‌ ಎನ್ನುವ ಮಾರಣಾಂತಿಕ ರೋಗದಿಂದ ಉರಿಯುತ್ತಿದೆ. ಚೀನಾದ ವುಹಾನ್‌ ನಗರದಲ್ಲಿ ಕಾಣಿಸಿಕೊಂಡು ಅಲ್ಲಿನ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌ ಒಂದು ಒಂದುವರೆ ತಿಂಗಳ ಅವಧಿಯಲ್ಲಿ ಇಡೀ ಜಗತ್ತನ್ನು ಆವರಿಸಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಈ ಮಾರಣಾಂತಿಕ ರೋಗವನ್ನು ತಡೆಗಟ್ಟುವ ಹಾದಿಯಲ್ಲಿ ಸಮರೋಪಾದಿಯಲ್ಲಿ ಸಜ್ಜಾಗಿವೆ. ಭಾರತದಲ್ಲಿ ಪ್ರಧಾನಮಂತ್ರಿ ಮೋದಿಯವರ ದಕ್ಷ ನೇತೃತ್ವದಲ್ಲಿ ಕೊರೊನಾ ಪಿಡುಗನ್ನು ಮೂಲೋತ್ಪಾಟನೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಿತ ಕಾಪಾಡುವುದು ನನ್ನ ಗುರುತರ ಹೊಣೆಗಾರಿಕೆ. ಯಾವುದೇ ಕಾರಣಕ್ಕೆ ಕೊರೊನಾ ವೈರಸ್‌ ರಾಜ್ಯವ್ಯಾಪಿ ಹರಡಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಪರಿಶುದ್ಧ ಪರಿಸರ, ಯಾವುದೇ ರೋಗರುಜಿನಗಳಿಲ್ಲದ ನೆಮ್ಮದಿಯ ನೆಲೆಯಾಗಿರುವ ಹಳ್ಳಿಗಳನ್ನು ಕೊರೊನಾ ಎನ್ನುವ ಈ ಮಾರಣಾಂತಿಕ ವೈರಸ್‌ ತಲುಪಲೇ ಕೂಡದು. ಹಳ್ಳಿಗಳು ಭಾರತದ ಬೆನ್ನೆಲುಬು. ಕೃಷಿ, ಹೈನುಗಾರಿಕೆ, ಮುಂತಾದ ಜೀವನೋಪಯೋಗಿ ಚಟುವಟಿಕೆಗಳು ಇಡೀ ರಾಜ್ಯದ ನೆಮ್ಮದಿಯ ಬದುಕಿನ ಜೀವನಾಡಿ. ಅತ್ಯಧಿಕ ಸಂಖ್ಯೆ ಶ್ರಮಿಕರು ನೆಲೆಸಿರುವುದೇ ಹಳ್ಳಿಗಳಲ್ಲಿ. ಈ ಕಾರಣದಿಂದಲೇ ಹಳ್ಳಿಗಳಿಗೆ ಕೊರೊನಾ ವೈರಸ್‌ ಪ್ರವೇಶಿಸಬಾರದು ಎನ್ನುವುದು ನನ್ನ ಅಭಿಮತ. ನಗರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳಿಗೆ ಎಲ್ಲಾ ರೀತಿಯ ಸವಲತ್ತುಗಳಿರುತ್ತದೆ. ಸಾಕಷ್ಟು ಪ್ರಮಾಣದ ಪರಿಣತ ವೈದ್ಯಕೀಯ ಸಿಬ್ಬಂದಿ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ರೋಗ ತಪಾಸಣಾ ಕೇಂದ್ರಗಳಿವೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಹಾಸಿಗೆ ಸಮುಚ್ಛಯವನ್ನು ಮೀಸಲಿಟ್ಟಿದ್ದೇವೆ. ಆದರೆ ಇಂಥ ವೈದ್ಯಕೀಯ ಸವಲತ್ತುಗಳು ಹಳ್ಳಿಗಳಲ್ಲಿ ಇಲ್ಲ. ಬೆಂಗಳೂರು ಸೇರಿದಂತೆ ನಗರಕ್ಕೆ ಹತ್ತಿರವಿರುವ ಹಳ್ಳಿಗಳ ಜನರು ಕೊರೊನಾ ಸೋಂಕು ಪೀಡಿತರನ್ನು ನಗರ ಪ್ರದೇಶಗಳಿಗೆ ಕರೆದುಕೊಂಡು ಬರಬಹುದು. ಆದರೆ ಕುಗ್ರಾಮಗಳಲ್ಲಿ ನೆಲೆಸಿರುವವರು ತಕ್ಷಣ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ಬರಲು ಕಷ್ಟಸಾಧ್ಯ. ಇದನ್ನು ಮನಗಂಡು ಹಳ್ಳಿಗಳಲ್ಲಿ ನೆಲೆಸಿರುವ ಕೃಷಿಕರು, ಕೃಷಿ ಕಾರ್ಮಿಕರು, ದಲಿತರು, ಹಿಂದುಳಿದವರು, ನಿರಕ್ಷರಿಗಳು, ವಯೋವೃದ್ಧ ತಂದೆ-ತಾಯಿ, ಅಕ್ಕತಂಗಿ, ಅಣ್ಣತಮ್ಮ, ಬಂಧುಬಳಗ ಇವರು ಯಾವುದೇ ಕಾರಣಕ್ಕೆ ಕೊರೊನಾ ವೈರಸ್ಸಿಗೆ ಬಲಿ ಆಗಲೇಕೂಡದು. ಈ ಹಿನ್ನೆಲೆಯಲ್ಲಿ 'ರೋಗ ಗುಣಪಡಿಸುವುದಕ್ಕಿಂತ, ರೋಗ ತಡೆಗಟ್ಟುವುದು ಜಾಣತನ' ಎನ್ನುವ ಮಾತಿನ ಹಾಗೆ ಬೆಂಗಳೂರು ನಗರ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಕಾರಣಕ್ಕೆ ಹಳ್ಳಿಗಳಿಗೆ ಭೇಟಿ ನೀಡಕೂಡದು. ಎರಡು ಮೂರು ದಿನಗಳಲ್ಲಿ ಯುಗಾದಿ ಹಬ್ಬವಿದೆ. ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರೂ ಸೇರಿದಂತೆ ನಗರ ಪ್ರದೇಶಗಳಲ್ಲಿ ನೆಲೆಸಿರುವವರಿಗೆ ಯುಗಾದಿ ಜೊತೆಗೆ ಭಾವನಾತ್ಮಕ ಬಂಧವಿದೆ. ಈ ಭಾವನಾತ್ಮಕ ಬಂಧದ ಸೆಳೆತಕ್ಕೆ ಬಲಿಯಾದರೆ ಹಳ್ಳಿಗಳ ನೆಮ್ಮದಿ ನಾಶ ಆಗುತ್ತದೆ. 'ಹರ್ಷದ ಕೂಳಿಗಿಂತಲೂ ವರ್ಷದ ಕೂಳು ಮುಖ್ಯ' ಎನ್ನುವ ಕಟು ವಾಸ್ತವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಹಳ್ಳಿಗಳನ್ನು ಕೊರೊನಾ ಪ್ರವೇಶಿಸದಂತೆ ತಡೆಗಟ್ಟಿದರೆ ನಾವು ವೈರಸ್‌ ವಿರುದ್ಧದ ಹೋರಾಟದಲ್ಲಿಶೇಕಡ ಅರವತ್ತರಷ್ಟು ಗೆಲುವು ಸಾಧಿಸಿದ ಹಾಗೆ. ಕರ್ನಾಟಕದ ಪ್ರತಿಯೊಂದು ಹಳ್ಳಿಗಳನ್ನು ಕೊರೊನಾ ವೈರಸ್‌ ಮುಕ್ತವಾಗಿಸಬೇಕು ಎನ್ನುವ ನನ್ನ ಸರಕಾರದ ಸದಾಶಯದೊಂದಿಗೆ ನೀವೆಲ್ಲಾ ಭಾಗಿಗಳಾಗಬೇಕೆಂದು ನಾನು ಕೈಜೋಡಿಸಿ ವಿನಂತಿ ಮಾಡಿಕೊಳ್ಳುತ್ತೇನೆ. ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ದಿಸೆಯಲ್ಲಿ ಸರಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕದ ಎಲ್ಲಾ ಗಡಿಗಳನ್ನು ಮುಚ್ಚಿದ್ದೇವೆ. ಸಾಮಾಜಿಕ ಒಗ್ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿಸೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಂದೂಡಿದ್ದೇವೆ. ಕೊರೊನಾ ವೈರಾಣುಗಳನ್ನು ಪತ್ತೆ ಮಾಡುವ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ ಇನ್ನೂರು ಮಂದಿಗೆ ವೈದ್ಯಕೀಯ ತಪಾಸಣೆ ನಡೆಸುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಐಸಿಎಂಆರ್‌ ಮತ್ತು ಎನ್‌ಐವಿ ಸಹಯೋಗತ್ವದಲ್ಲಿ ಸಾಕಷ್ಟು ಸಂಖ್ಯೆಯ ಸರಕಾರಿ ಮತ್ತು ಸರಕಾರೇತರ ಲ್ಯಾಬ್‌ಗಳಿಗೆ ಕೋವಿಡ್‌ ತಪಾಸಣಾ ಪರವಾನಗಿ ನೀಡಲಾಗುವುದು. ಕೊರೊನಾ ತಡೆಗಟ್ಟುವ ಹಾದಿಯಲ್ಲಿ ಹಿರಿಯ ಸಚಿವರನ್ನೊಳಗೊಂಡ ಟಾಸ್ಕ್‌ ಫೋರ್ಸ್‌ಗೆ ಸಹಾಯ ಮಾಡಲು ಹಿರಿಯ ಐಎಎಸ್‌ ಅಧಿಕಾರಿಗಳ ನಿಗ್ರಹ ದಳವನ್ನು ರಚಿಸಲಾಗಿದೆ. ಬಾಲಬ್ರೂಯಿ ಅತಿಥಿ ಗೃಹವನ್ನು ಕೊರೊನಾ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಮಾಡುವ ವಾರ್‌ ರೂಂ ಆಗಿ ಪರಿವರ್ತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿನ ಕೊರೊನಾ ಕುರಿತ ಸಂಪೂರ್ಣ ಮಾಹಿತಿ, ಅದನ್ನು ನಿವಾರಿಸಲು ಕೈಗೊಂಡ ಕ್ರಮಗಳ ಸಂಪೂರ್ಣ ನಿರ್ವಹಣೆಯನ್ನು ಬಾಲಬ್ರೂಯಿ ವಾರ್‌ ರೂಂನಿಂದ ನಿಭಾಯಿಸಲಾಗುವುದು. ಇಪ್ಪತ್ತ ನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಾರ್‌ ರೂಂ ನಿರ್ವಹಣೆಯ ನೇತೃತ್ವವನ್ನು ನಾನೇ ವಹಿಸಿದ್ದೇನೆ. ಇದರ ಜೊತೆಗೆ ಮುಂದಿನ ಆದೇಶದವರೆಗೆ ರಾಜ್ಯದಲ್ಲಿ ಮುಂಬರುವ ತಿಂಗಳುಗಳಲ್ಲಿ ನಡೆಯಬೇಕಿದ್ದ ಎಲ್ಲಾಚುನಾವಣೆಗಳನ್ನು ಮುಂದೂಡಿದ್ದೇವೆ. ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿಸ್ಥಳೀಯ ವಿಮಾನ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬಳ್ಳಾರಿ ಸೇರಿದಂತೆ ಕೊರೊನಾ ವೈರಸ್‌ ಹೆಚ್ಚು ಕಂಡುಬಂದಿರುವ ಜಿಲ್ಲೆಗಳಲ್ಲಿವೈದ್ಯಕೀಯ, ಔಷಧಿ, ದಿನಸಿ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಜಲ್ಲೆಗಳಲ್ಲಿಕೈಗಾರಿಕೆಗಳು ಹೆಚ್ಚು ಸಂಖ್ಯೆಯಲ್ಲಿಇರುವುದರಿಂದ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕೆಂದು ಸೂಚಿಸಿದ್ದೇವೆ. ಇನ್ನು ಈ ಒಂಬತ್ತು ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರಲ್ಲಿ ನನ್ನದೊಂದು ನಿವೇದನೆ. ಸರಕಾರ ಕೊರೊನಾ ತಡೆಗಟ್ಟಲು ಕಾಯಾ ವಾಚಾ ಮನಸಾ ಎಲ್ಲಾ ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ನಾನು ಹಗಲು-ರಾತ್ರಿಯೆನ್ನದೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮುನ್ನೆಚ್ಚರಿಕಾ ಕ್ರಮಗಳ ಮೇಲುಸ್ತುವಾರಿಯನ್ನು ಮಾಡುತ್ತಿದ್ದೇನೆ. ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರೂ ಸೇರಿ ಸಂಪುಟದ ಪ್ರತಿಯೊಬ್ಬ ಸಚಿವರು ಕೊರೊನಾ ವಿರುದ್ಧದ ಹೋರಾಟದಲ್ಲಿ ನನಗೆ ಬೆಂಗಾವಲಾಗಿ ನಿಂತಿದ್ದಾರೆ. ರಾಜ್ಯದ ಸಾವಿರಾರು ವೈದ್ಯಕೀಯ ಸಿಬ್ಬಂದಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೊರೊನಾ ವಿರುದ್ಧ ಯುದ್ಧ ಸಾರಿದ್ದಾರೆ. ಸರಕಾರ ಮಾತ್ರ ಕೊರೊನಾ ವಿರುದ್ಧದ ಸಮರದಲ್ಲಿ ಭಾಗಿಯಾದರೆ ಸಾಲದು. ಕರ್ನಾಟಕದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಸಮರದ ಸೇನಾನಿಗಳಾಗಬೇಕೆಂಬುದು ನನ್ನ ಕಳಕಳಿಯ ವಿನಂತಿ.


from India & World News in Kannada | VK Polls https://ift.tt/2J93RYM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...