ಜಿನೆವಾ: ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವಾದಾದ್ಯಂತ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಗಂಭೀರ ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿರುವ WHO ಕಾರ್ಯನಿರ್ವಾಹಕ ನಿರ್ದೇಶಕ ಮೈಕಲ್ ಜೆ ರಯಾನ್, ಮಾರಕ ವೈರಾಣು ಅಟ್ಟಹಾಸ ಇಷ್ಟು ಬೇಗ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಪಸರಿಸುವಿಕೆಯ ಹಂತ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಲೇ ಇದ್ದು, ವಿಶ್ವದ ಎಲ್ಲಾ ಸರ್ಕಾರಗಳ ಪ್ರಯತ್ನದ ಹೊರತಾಗಿಯೂ ವೈರಸ್ ಹರಡುವಿಕೆಯನ್ನುಯ ನಾವು ಅಂದಾಜಿಸಿದ ಮಟ್ಟದಲ್ಲಿ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂದು ಮೈಕಲ್ ಜೆ ರಯಾನ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಕತೆ ಏನು?: ಇನ್ನು ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿರುವ ಭಾರತದಲ್ಲಿಯೂ ಸದ್ಯಕ್ಕೆ ವೈರಸ್ ನಿಯಂತ್ರಣಕ್ಕೆ ಬರುವುದು ದೂರದ ಮಾತು ಎಂದು WHO ಹೇಳಿದೆ. ಭಾರತದಲ್ಲಿ ಜನಸಂಖ್ಯಾ ಸಾಂದ್ರತೆ ಅಧಿಕವಾಗಿದ್ದು, ವೈರಾಣು ಹರಡಲು ಸುಲಭವಾಗಿ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು WHO ಹೇಳಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಸದೇ ಜನ ಮನೆಯಿಂದ ಹೊರಗೆ ಬಂದಲ್ಲಿ, ಭಾರತಕ್ಕೆ ಕೊರೊನಾ ಕಂಟಕ ತಪ್ಪಿದ್ದಲ್ಲ ಎಂದು ಮೈಕಲ್ ಜೆ ರಯಾನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಆದರೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ WHO, ಸ್ಮಾಲ್ ಫಾಕ್ಸ್ ಹಾಗೂ ಪೊಲಿಯೋ ವಿರುದ್ಧ ಅತ್ಯಂತ ಯಶಸ್ವಿಯಾಗಿ ಹೋರಾಡಿ ಜಯ ಸಾಧಿಸಿರುವ ಭಾರತ ಇದೇ ಅನುಭವನ್ನು ಬಳಸಿಕೊಂಡೇ ಕೊರೊನಾ ವೈರಸ್ನ್ನೂ ಗೆಲ್ಲಲಿದೆ ಎಂದು ಸ್ಪಷ್ಟಪಡಿಸಿದೆ. ಕೊರೊನಾ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತದ ಮಾರ್ಗದರ್ಶನ ಅತ್ಯಂತ ಅವಶ್ಯಕ ಎಂದಿರುವ ಮೈಕಲ್ ಜೆ ರಯಾನ್, ಮಾರಕ ವೈರಾಣುವಿನಿಂದ ಈ ಭೂಮಿಯನ್ನು ರಕ್ಷಿಸುವಲ್ಲಿ ಭಾರತ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2UbqYbc