ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಫ್ಲೆಕ್ಸ್‌ಗಳಿಗೆ ಮಸಿಬಳಿದ ಕರಾವಳಿಗರು!

ಮಂಗಳೂರು: ವಿವಾದಿತ ಎತ್ತಿನಹೊಳೆ ಯೋಜನೆಗೆ ರಾಜ್ಯ ಬಜೆಟ್‌ - 2020ಯಲ್ಲಿ 1,500 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸರ್ಕಾರದ ಈ ನಡೆ ಕರಾವಳಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಎತ್ತಿನಹೊಳೆ ಯೋಜನೆಯ ವಿರುದ್ಧವಾಗಿ ಸತತ ಹೋರಾಟವನ್ನು ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್‌ ವಿರುದ್ಧ ಜನರು ಕೋಪಗೊಂಡಿದ್ದಾರೆ. ಮಂಗಳೂರಿನಲ್ಲಿ ಹಾಕಲಾಗಿದ್ದ ನಳಿನ್ ಪರ ಫ್ಲೆಕ್ಸ್‌ಗಳಿಗೆ ಮಸಿ ಬಳಿಯುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಬಯಲು ಸೀಮೆಯ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಸಲುವಾಗಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯಗಳನ್ನು ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಾರಿಗೆ ತರಲಾಗಿರುವ ಯೋಜನೆಯ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಹೊಂಗಡ ಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ ಸೇರಿದಂತೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಮಳೆಗಾಲದಲ್ಲಿ ನೇತ್ರಾವತಿ ನದಿ ಮೂಲಕ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹ ಮಾಡಲಾಗುತ್ತದೆ. ಬಳಿಕ ಅಲ್ಲಿಂದ ವಿದ್ಯುತ್ ಚಾಲಿತ ಮೋಟರ್‌ಗಳನ್ನು ಅಳವಡಿಸಿ ಬೃಹತ್ ಗಾತ್ರದ ಪೈಪುಗಳ ಮೂಲಕ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರನ್ನು ಒಳಗೊಂಡ ಬಯಲು ಸೀಮೆಗೆ ಪೂರೈಸುವ ಯೋಜನೆ ಇದಾಗಿದೆ. ಆದರೆ ಇದಕ್ಕಾಗಿ ಭಾರೀ ಪ್ರಮಾಣದ ಅರಣ್ಯ ನಾಶವಾಗುತ್ತಿದೆ. ಅಲ್ಲದೆ, ಅತ್ಯಂತ ಸೂಕ್ಷ್ಮವಾಗಿರುವ ಪಶ್ಚಿಮಘಟ್ಟದ ಜೀವ ವೈವಿದ್ಯಗಳಿಗೂ ಧಕ್ಕೆಯಾಗುತ್ತಿದೆ. ಇದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯ ವಿರುದ್ಧ ಸಂಸದರಾಗಿರುವ ಹೋರಾಟ ನಡೆಸಿದ್ದರು. ಯಾವುದೇ ಕಾರಣಕ್ಕಾಗಿಯೂ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಮ್ಮ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ವಿರುದ್ಧ ಪಾದಯಾತ್ರೆಯನ್ನು ಸಂಘಟಿಸಿದ್ದರು. ಈ ಹೋರಾಟಕ್ಕೆ ಭಾರೀ ಜನಬೆಂಬಲವೂ ವ್ಯಕ್ತವಾಗಿತ್ತು. ಇದೀಗ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಬಜೆಟ್‌ನಲ್ಲಿ 1,500 ಕೋಟಿ ಅನುದಾನ ನೀಡಿದೆ. ಬಜೆಟ್‌ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ನಳಿನ್ ಕುಮಾರ್ ಕಟೀಲ್, ನಿರಾವರಿ ಯೋಜನೆಗಳಿಗೆ ಬೃಹತ್ ಪ್ರಮಾಣದಲ್ಲಿ ಅನುದಾನವನ್ನು ಸರ್ಕಾರ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಆಕ್ರೋಶಗೊಂಡಿರುವ ಕರಾವಳಿ ಭಾಗದ ಪರಿಸರ ಹೋರಾಟಗಾರರು ನಳಿನ್ ಕುಮಾರ್ ಕಟೀಲ್‌ ಅವರಿಗೆ ಅಭಿನಂದನೆ ಕೋರಿ ಮಂಗಳೂರಿನ ಹಲವು ಕಡೆಗಳಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳಿಗೆ ಮಸಿಬಳಿದು ಆಕ್ರೋಶ ವ್ಯಕ್ತಪಡಿದ್ದಾರೆ. ಈ ಕುರಿತಾಗಿ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿದ ಪರಸರ ಹೋರಾಟಗಾರ ದಿನೇಶ್ ಹೊಳ್ಳ, "ನಳಿನ್ ಕುಮಾರ್ ಕಟೀಲ್‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಯೋಜನೆಗೆ ವಿರೋಧಿಯಾಗಿದ್ದರು. ಯೋಜನೆ ಜಾರಿಯ ವಿರುದ್ಧ ಹೋರಾಟವನ್ನು ಸಂಘಟಿಸಿದ್ದರು. ಆದರೆ ಇದೀಗ ಅವರದ್ದೇ ಸರ್ಕಾರ ಬಜೆಟ್‌ನಲ್ಲಿ 1,500 ಕೋಟಿ ಅನುದಾನವನ್ನು ನೀಡಿದೆ. ಸ್ವತಃ ನಳಿನ್ ಕುಮಾರ್ ಕಟೀಲ್‌ ಇದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿ ನಳಿನ್ ನಡೆಯನ್ನು ಖಂಡಿಸಿ ಅವರ ಫ್ಲೆಕ್ಸ್‌ಗಳಿಗೆ ಮಸಿಬಳಿಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದೇವೆ” ಎಂದರು. ಒಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯ ಕುರಿತಾಗಿ ನಳಿನ್ ಕುಮಾರ್ ಕಟೀಲ್‌ ದ್ವಿಮುಖ ನೀತಿ ಏಕೆ ಎಂಬುವುದು ಕರಾವಳಿಯ ಹಲವರ ಪ್ರಶ್ನೆಯಾಗಿದೆ. ಒಂದು ಕಾಲದಲ್ಲಿ ಹೋರಾಟದ ಪರವಾಗಿದ್ದು ಇದೀಗ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆಯ ಪರವಾಗಿ ನಿಲ್ಲುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ ಕರಾವಳಿಗರು.


from India & World News in Kannada | VK Polls https://ift.tt/2WmR0de

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...