ಹೊಸದಿಲ್ಲಿ: ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿಗೆ ಬಂದಿದ್ದ ಉತ್ತರ ಪ್ರದೇಶದ ಮೀರತ್ನ ಅನುಭವಿ ಹ್ಯಾಂಗ್ಮನ್ ಪವನ್ ಜಲ್ಲಾದ್ ಅವರನ್ನು ಬಿಗಿ ಭದ್ರತೆಯಲ್ಲಿ ವಾಪಸ್ ಕಳುಹಿಸಿಕೊಡಲಾಯಿತು. ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ನಾಲ್ವರು ಅಪರಾಧಿಗಳನ್ನು ಪವನ್ ಜಲ್ಲಾದ್ ಏಕಕಾಲಕ್ಕೆ ಗಲ್ಲಿಗೇರಿಸಿದರು. ಗಲ್ಲಿಗೇರಿಸಿದ ನಂತರ ಮಾತನಾಡಿರುವ ಪವನ್ ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾಲ್ಕು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲು ನನಗೆ ಸಂತೋಷವಾಗಿದೆ. ನಾನು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ. ನಾನು ದೇವರಿಗೆ ಮತ್ತು ತಿಹಾರ್ ಜೈಲು ಆಡಳಿತಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಪವನ್ ಜಲ್ಲಾದ್ ಸೇರಿದಂತೆ ತಿಹಾರ್ ಜೈಲಿನ ಸಿಬ್ಬಂದಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಕಳೆದ 36 ಗಂಟೆಗಳಿಂದ ಸಿದ್ಧತೆ ನಡೆಸಿದ್ದರು. ಮರಣದಂಡನೆ ವೇಳೆ ತಿಹಾರ್ ಅಧೀಕ್ಷಕರು, ಜಿಲ್ಲಾಧಿಕಾರಿ, ವೈದ್ಯಕೀಯ ಅಧಿಕಾರಿ ಮತ್ತು ಉಪ ಅಧೀಕ್ಷಕರು ಉಪಸ್ಥಿತರಿದ್ದರು. ದಕ್ಷಿಣ ಏಷ್ಯಾದ ಅತಿದೊಡ್ಡ ತಿಹಾರ್ ಜೈಲಿನಲ್ಲಿ ನಾಲ್ಕು ಜನರನ್ನು ಒಟ್ಟಿಗೆ ಗಲ್ಲಿಗೇರಿಸಿರುವ ಘಟನೆ ಇದೇ ಮೊದಲು. ಜೈಲು 16,000 ಕ್ಕೂ ಹೆಚ್ಚು ಕೈದಿಗಳನ್ನು ಹೊಂದಿದೆ. ಮೀರತ್ನ ಹ್ಯಾಂಗ್ಮ್ಯಾನ್ ಪವನ್ ಜಲ್ಲಾದ್ ತಿಹಾರ್ ಜೈಲಿಗೆ ಮಂಗಳವಾರವೇ ಆಗಮಿಸಿದ್ದು, ಜೈಲು ಅಧಿಕಾರಿಗಳ ಜೊತೆ ಗಲ್ಲು ಶಿಕ್ಷೆಗೆ ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದರು. ಕಾರಾಗೃಹ ನಿಯಮಗಳ ಪ್ರಕಾರ, ಕಾರಾಗೃಹ ಅಧೀಕ್ಷಕರು ನೇಣು ಹಗ್ಗಗಳನ್ನು ಪರೀಕ್ಷಿಸಿ, ಮರಣದಂಡನೆಗೆ ಒಂದು ದಿನ ಮೊದಲು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಾದ ನಂತರ, ಅಣಕು ಮರಣದಂಡನೆ ನಡೆಯುತ್ತದೆ. ಖೈದಿಯ ತೂಕಕ್ಕಿಂತ 1.5 ಪಟ್ಟು ತೂಕದ ಮರಳಿನ ಚೀಲವನ್ನು ಗಲ್ಲಿಗೇರಿಸಲಾಗುತ್ತದೆ. ಈ ಎಲ್ಲ ಅಣುಕು ಪ್ರಕ್ರಿಯೆಗಳನ್ನು ಮುಗಿಸಿ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ಧರಾಗಿದ್ದರು.
from India & World News in Kannada | VK Polls https://ift.tt/3a8H6Qy