ನವದೆಹಲಿ: ಹಂತಕರನ್ನು ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗಿದೆ. ನಾಲ್ವರು ಹಂತಕರನ್ನು ನೇಣಿಗೇರಿಸಿದ ಬಳಿಕ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ದೇಶದ ಜನತೆಗೆ, ವಕೀಲರಿಗೆ ಮತ್ತು ಸರಕಾರಕ್ಕೆ ಧನ್ಯವಾದ ಹೇಳಿದ್ದಾರೆ. ರಾಷ್ಟ್ರದ ಮಗಳಿಗೆ ನ್ಯಾಯ ಸಿಕ್ಕಿತು. ಕಳೆದ 7 ವರ್ಷಗಳಿಂದ ನಮ್ಮ ಜೊತೆಗಿದ್ದ ಎಲ್ಲರಿಗೂ ಧನ್ಯವಾದಗಳು. ನಮಗೆ ಬೆಂಬಲ ನೀಡಿದ ರಾಷ್ಟ್ರದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ನಾಳೆ ಉದಯಿಸುವ ಸೂರ್ಯ ಇತಿಹಾಸವನ್ನು ಉಲ್ಲೇಖಿಸುತ್ತದೆ. ನಿರ್ಭಯಾಗೆ ನ್ಯಾಯ ಒದಗಿಸಿದ ನ್ಯಾಯಾಂಗ ವ್ಯವಸ್ಥೆಗೆ ಧನ್ಯವಾದಗಳು. ಗಲ್ಲು ಶಿಕ್ಷೆಯನ್ನು ವಿಳಂಬಗೊಳಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದ್ದಕ್ಕೆ ಕೋರ್ಟ್ಗೆ ಧನ್ಯವಾದ ಸಲ್ಲಿಸುತ್ತೇನೆ. ಕೊನೆಗೆ ನಮ್ಮ ಪರವಿದ್ದ ಇಬ್ಬರು ವಕೀಲರಿಗೂ ಧನ್ಯವಾದಗಳು. - ಆಶಾ ದೇವಿ, ನಿರ್ಭಯಾ ತಾಯಿ "ನಾನು ಸುಪ್ರೀಂ ಕೋರ್ಟ್ನಿಂದ ಹಿಂದಿರುಗಿದ ಕೂಡಲೇ, ನನ್ನ ಮಗಳ ಚಿತ್ರವನ್ನು ತಬ್ಬಿಕೊಂಡು ಇಂದು ನಿಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದೆ. ನಮ್ಮ ಮಗಳಿಗೆ ಅಂತಿಮವಾಗಿ ನ್ಯಾಯ ಸಿಕ್ಕಿತು ಎಂಬ ಕಾರಣಕ್ಕೆ ನನಗೀಗ ಸಮಾಧಾನವಾಗುತ್ತಿದೆ. ಈ ಅಪರಾಧದಿಂದ ಇಡೀ ರಾಷ್ಟ್ರವೇ ನಾಚಿಕೆ ಪಡುವಂತಾಯಿತು. ಇವತ್ತು ರಾಷ್ಟ್ರಕ್ಕೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಅಂತಿಮವಾಗಿ ಹಂತಕರನ್ನು ಗಲ್ಲಿಗೇರಿಸಲಾಗಿದೆ, ಇದು ನಮ್ಮ ದೀರ್ಘ ಕಾಲದ ಹೋರಾಟವಾಗಿತ್ತು. ಇಂದು ನಮಗೆ ನ್ಯಾಯ ದೊರೆತಿದೆ, ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಸಮರ್ಪಿಸುತ್ತೇನೆ. ನಾನು ನ್ಯಾಯಾಂಗ ಮತ್ತು ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಮಗಳು ಇನ್ನಿಲ್ಲ ಮತ್ತು ಆಕೆ ಹಿಂತಿರುಗುವುದಿಲ್ಲ. ಅವಳು ನಮ್ಮನ್ನು ತೊರೆದ ನಂತರ ನಾವು ಈ ಹೋರಾಟವನ್ನು ಪ್ರಾರಂಭಿಸಿದ್ದೇವು. ಈ ಹೋರಾಟವು ಅವಳದ್ದಾಗಿತ್ತು ಆದರೆ ಭವಿಷ್ಯದಲ್ಲಿ ನಮ್ಮ ಹೆಣ್ಣುಮಕ್ಕಳಿಗಾಗಿ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ವಜಾಗೊಂಡು ನಾಲ್ವರಿಗೆ ಗಲ್ಲು ಖಚಿತವಾದಾಗ, ಕೊನೆಗೂ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು, ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ನಾನು ಸಮಾಜದ ಎಲ್ಲ ಜನರಿಗೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನಿರ್ಭಯಾ ತಾಯಿ ಹೇಳಿದ್ದರು.
from India & World News in Kannada | VK Polls https://ift.tt/2QvilG6