ಸಂಸದರ ನಡುವೆ ಜಗಳ ತಂದಿಟ್ಟ ಕೊರೊನಾ: ತೇಜಸ್ವಿ, ಕಾರ್ತಿ ನಡುವೆ ಟ್ವೀಟ್ ವಾರ್!

ನವದೆಹಲಿ: ಮಾರಕ ಕೊರೊನಾ ವೈರಸ್ ದೇಶಾದ್ಯಂತ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಈಗಾಗಲೇ ದೇಶದ ಪ್ರಮುಖ ನಗರಗಳು ಸಂಪೂರ್ಣವಾಗಿ ಮುಚ್ಚುವ ಹಂತಕ್ಕೆ ಬಂದು ನಿಂತಿದ್ದು, ಕೊರೊನಾ ಭೀತಿಯಿಂದಾಗಿ ಜನ ಮನೆಯಿಂದ ಹೊರ ಬರುತ್ತಿಲ್ಲ. ಆದರೆ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಾ ದೇಶದ ಜನರಿಗೆಧೈರ್ಯ ತುಂಬಲಿ ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಬಜೆಟ್ ಅಧಿವೇಶನವನ್ನು ರದ್ದುಗೊಳಿಸದಿರಲು ನಿರ್ಧರಿಸಿದ್ದಾರೆ. ಸಂಸದರು ಕೆಲಸ ಮಾಡುತ್ತಿದ್ದರೆ ಜನರಲ್ಲಿ ಭರವಸೆ ಮೂಡುತ್ತದೆ ಎಂಬುದು ಮೋದಿ ಅವರ ಆಶಯ. ಆದರೆ ಈ ನಿರ್ಧಾರ ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಗಳ ತಂದಿಟ್ಟಿದೆ. ಆಡಳಿತ ಪಕ್ಷದ ಸದಸ್ಯರು ಅಧಿವೇಶನ ಮುಂದುವರೆಯಲಿ ಎಂದರೆ, ಪ್ರತಿಪಕ್ಷಗಳ ಸದಸ್ಯರು ನಮಗೂ ಕೊರೊನಾ ಭೀತಿಯಿದ್ದು ಅಧಿವೇಶನ ಮೊಟಕುಗೊಳಿಸಿ ಎಂದು ದಂಬಾಲು ಬಿದ್ದಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದ ಸಂಸದ ಶಶಿ ತರೂರ್, ಸಂಸದರು ಒಬ್ಬರ ಪಕ್ಕ ಒಬ್ಬರು ಕೂರುವುದರಿಂದ ಕೊರೊನಾ ಸೋಂಕು ತಗುಲುವ ಭೀತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ದೇಶದ ವೈದ್ಯರು ಕೊರೊನಾ ಹೋಗಲಾಡಿಲು ಅತ್ಯಂತ ಧೈರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಸೈನಿಕರು ಅತ್ಯಂತ ಧೈರ್ಯದಿಂದ ಗಡಿ ಕಾಯುತ್ತಿದ್ದಾರೆ. ಅಂತದ್ದರಲ್ಲಿ ಸಂಸದರು ಕೆಲಸ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಜನರಿಂದ ಕೊರೊನಾ ಭೀತಿ ಹೋಗಲಾಡಿಸಲು ಸಂಸದರೂ ಕೂಡ ವೈದ್ಯರು ಹಾಗೂ ಸೈನಿಕರಂತೆ ಕೆಲಸ ಮಾಡಬೇಕು ಎಂದು ತೇಜಸ್ವಿ ಸೂರ್ಯ ಕರೆ ಕೊಟ್ಟಿದ್ದಾರೆ. ಆದರೆ ತೇಜಸ್ವಿ ಅವರ ವಾದವನ್ನು ಮತ್ತೋರ್ವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಕೊರೊನಾ ಸೋಲಿಸಲು ನಮ್ಮ ದೇಶದ ವೈದ್ಯ ಸಿಬ್ಬಂದಿ ಮಾಡುತ್ತಿರುವ ಕೆಲಸಕ್ಕೆ ನನ್ನ ಸಲಾಂ ಇದೆ. ಅಂತೆಯೇ ಗಡಿ ಕಾಯುತ್ತಿರುವ ಯೋಧರ ಮೇಲೂ ಅಪಾರ ಗೌರವವಿದೆ. ಆದರೆ ಸಂಸದರನ್ನು ವೈದ್ಯರಿಗೆ ಹಾಗೂ ಸೈನಿಕರಿಗೇಕೆ ಹೋಲಿಕೆ ಮಾಡಬೇಕು ಎಂದು ಕಾರ್ತಿ ಪ್ರಶ್ನಿಸಿದ್ದಾರೆ. ಸಂಸದರಿಗೂ ಕೊರೊನಾ ತಗುಲುವ ಭೀತಿ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಸಂಸದರನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಕಾರ್ತಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಬೇಕೋ ಬೇಡವೋ ಎಂಬ ಕುರಿತು ಸಂಸದರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಇದಕ್ಕಿಂತ ಹೆಚ್ಚಾಗಿ ಕೊರೊನಾ ತಡೆಗಟ್ಟುವಲ್ಲಿ ಎಷ್ಟು ಪರಿಣಾಮಕಾರಿಯಾಗಿ ನಮ್ಮ ಸಂಸದರು ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


from India & World News in Kannada | VK Polls https://ift.tt/3dhRd7F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...