ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ರಾಜ್ಯದಲ್ಲಿ ಮಾರ್ಚ್ 31 ರ ತನಕ ನಿರ್ಬಂಧ ಮುಂದುವರಿದಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಆರ್ಥಿಕ ಹಿಂಜರಿತದಿಂದ ವ್ಯಾಪಾರಕ್ಕೆ ಬಿದ್ದಿರುವ ಹೊಡೆತದ ಜೊತೆಗೆ ಕೊರೊನಾ ದಾಳಿ ವ್ಯಾಪಾರಿಗಳನ್ನು ತೀವ್ರವಾಗಿ ಕಾಡುತ್ತಿದೆ. ಕೊರೊನಾಗೆ ಹೆದರಿ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಮಾಲ್,ಪಬ್, ಸಿನಿಮಾ ಮಂದಿರಗಳನ್ನು ಸರ್ಕಾರದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. ದೈನಂದಿನ ಅಗತ್ಯ ಸಾಮಾಗ್ರಿಗಳಿಗಾಗಿ ಸೂಪರ್ ಮಾರ್ಕೆಟ್ಗಳಿಗಷ್ಟೇ ಜನರು ಮುಗಿಬೀಳುತ್ತಿದ್ದಾರೆ. ಮನೆ ಅಡುಗೆ ಬದಲಾಗಿ ನಿತ್ಯ ಹೊಟೇಲ್ಗಳನ್ನು ಅವಲಂಬಿಸುತ್ತಿರುವವರ ಸಂಖ್ಯೆ ಹಿಂದೆ ಹೆಚ್ಚಿತ್ತು. ಆದರೆ ಇದೀಗ ಅನಿವಾರ್ಯವಾಗಿ ಬಹುತೇಕ ಮಂದಿ ಮನೆ ಅಡುಗೆ ಮೊರೆ ಹೋಗಿದ್ದಾರೆ. ಖಾಸಗಿ ಕಂಪನಿಗಳು ವರ್ಕ್ ಫ್ರಂಮ್ ಹೋಂಗೆ ಅವಕಾಶ ನೀಡಿರುವುದರಿಂದ ಜನರು ಮನೆಯಲ್ಲೇ ಊಟ, ತಿಂಡಿ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಹೋಟೆಲ್ಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಅದರಲ್ಲೂ ಹಕ್ಕಿಜ್ವರದ ಕಾರಣದಿಂದ ಚಿಕನ್ ಪ್ರಿಯರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ನಗರದ ನಾನ್ವೆಜ್ ಹೋಟೆಲ್ಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಾರದಲ್ಲಿ ಭಾರೀ ನಷ್ಟ ಉಂಟಾಗಿದೆ. “ನಿತ್ಯ ನೂರಾರು ಸಂಖ್ಯೆಯ ಗ್ರಾಹಕರು ನಮ್ಮ ರೆಸ್ಟೋರೆಂಟ್ಗೆ ಬರುತ್ತಿದ್ದರು. ಆದರೆ ಇದೀಗ ಜನರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಕೆಲವರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಹೋಟೆಲ್ಗೆ ಬರುವರರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಇದರಿಂದ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ” ಎನ್ನುತ್ತಾರೆ ಬೆಂಗಳೂರಿನ ಪ್ರಸಿದ್ಧ ನಾನ್ವೆಜ್ ಹೋಟೆಲ್ ಮಾಲಿಕರು. ಕೇವಲ ಹೋಟೆಲ್ ಉದ್ಯಮ ಮಾತ್ರವಲ್ಲದೆ ಕ್ಯಾಬ್ ಉದ್ಯಮಕ್ಕೂ ಕೊರೊನಾ ಬಿಸಿ ತಟ್ಟಿದೆ. ಬಹುತೇಕ ಐಟಿ - ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸಕ್ಕೆ ಅನುಮತಿ ನೀಡಿವೆ. ಕೆಲವು ಕಂಪನಿಗಳು ರಜೆಯನ್ನು ಘೋಷಣೆ ಮಾಡಿವೆ. ಇದರಿಂದ ಕ್ಯಾಬ್ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಿವೆ. “ನಮ್ಮ ಏಜೆನ್ಸಿಗೆ ಪ್ರತಿನಿತ್ಯ 350 ರಿಂದ 400 ಬುಕ್ಕಿಂಗ್ಗಳು ಇರುತ್ತಿದ್ದವು, ಆದರೆ ಇದೀಗ 10 ರಷ್ಟು ಕೂಡಾ ಇಲ್ಲ. ಚಾಲಕರು ಈ ಆದಾಯವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ತಿಂಗಳು ಕಾರು ಖರೀದಿಸಲು ಬ್ಯಾಂಕ್ನಿಂದ ಪಡೆದ ಸಾಲವನ್ನು ಕಟ್ಟಲು ಕಷ್ಟಪಡಬೇಕಾಗುತ್ತದೆ ” ಎನ್ನುತ್ತಾರೆ ಕ್ಯಾಬ್ ಏಜನ್ಸಿ ಕಂಪನಿಯಲ್ಲಿ ಕೆಲಸ ಮಾಡುವ ಕುಮಾರ್. ಇನ್ನು ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟ ಕೇಳುವವರಿಲ್ಲ. ರಸ್ತೆಯ ಬದಿಯ ಆಹಾರವನ್ನು ಸೇವಿಸಬೇಡಿ ಎಂದು ಸರ್ಕಾರ ಸೂಚನೆ ನೀಡಿದ್ದು, ಇದರಿಂದ ರಸ್ತೆ ಬದಿಯ ಹೋಟೆಲ್ಗಳು ಬಹುತೇಕ ಮುಚ್ಚಿವೆ. ಜನರ ಸಂಚಾರ ಕೂಡಾ ಕಡಿಮೆ ಇರುವುದರಿಂದ ಈ ಬಡ ವ್ಯಾಪಾರಿಗಳು ಮುಂದೇನು ಎಂದು ಯೋಚಿಸುವಂತಾಗಿದೆ. ಬುಧವಾರ ಸದನದಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಸ್ತಾಪಿದ್ದರು. ಕೊರೊನಾದಿಂದ ವ್ಯಾಪಾರಸ್ಥರ ಮೇಲೆ ಆಗುತ್ತಿರುವ ಪರಿಣಾಗಳ ಕುರಿತಾಗಿ ಬೆಳಕು ಚೆಲ್ಲಿದ್ದರು. “ರಾಜ್ಯದಲ್ಲಿ ಕೊರೋನಾ ರೋಗದಿಂದಾಗ ವ್ಯಾಪಾರ ವಹಿವಾಟು ಕುಸಿದಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಗುಡಿ ಕೈಗಾರಿಕೆಗಾರರು, ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳಿಂದ ಪಡೆದಿದ್ದ ಸಾಲದ ವಸೂಲಾತಿಯನ್ನು ಮುಂದೂಡಬೇಕು. ಕೈಸೋತು ಕುಳಿತವರ ಮೇಲೆ ಬರೆ ಹಾಕಬೇಡಿ” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಾಗಿದೆ.
from India & World News in Kannada | VK Polls https://ift.tt/2J09o3v