ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಆಚರಣೆಗೆ ನಿಮ್ಮೆಲ್ಲರ ಬೆಂಬಲ ಅತಿ ಅಗತ್ಯವಾಗಿದೆ ಎಂದು ನಾಡಿನ ಜನರಿಗೆ ಸಿಎಂ ಮನವಿ ಮಾಡಿಕೊಂಡಿದ್ಧಾರೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಾವೆಲ್ಲರೂ ಮನೆಯಲ್ಲಿ ಉಳಿದು ನಿಜವಾದ ಅರ್ಥದಲ್ಲಿ ಕರ್ಫ್ಯೂವನ್ನು ಬೆಂಬಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಜನತೆಗೆ ಕರೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಯಡಿಯೂರಪ್ಪ, “ಕರ್ನಾಟಕ ರಾಜ್ಯವು ದೇಶದಲ್ಲಿ ಕೊವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೆಲ್ಲದಕ್ಕೂ ರಾಜ್ಯದ 6.5 ಕೋಟಿ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಕಾರಣ” ಎಂದಿದ್ಧಾರೆ. “ಈ ಸಮಯದಲ್ಲಿ ನನ್ನ ಕಳಕಳಿಯ ಮನವಿಯೆಂದರೆ ರಾತ್ರಿ 9.00 ಗಂಟೆಯ ನಂತರ ಕರ್ಫ್ಯೂ ಅವಧಿ ಮುಗಿದಿದೆ ಎಂದು ಎಲ್ಲರೂ ಮನೆಯ ಹೊರಗಡೆ ಬಂದು ಸಂಭ್ರಮಿಸುವುದಾಗಲೀ ಅಥವಾ ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಲೀ ಮಾಡಬೇಡಿ. ಹಾಗೆ ಮಾಡಿದರೆ, ಬೆಳಗ್ಗೆಯಿಂದ ಆಚರಿಸಿದ ರೋಗ ತಡೆಯುವ ಕ್ರಮವಾದ ಕರ್ಫ್ಯೂವನ್ನು ಅರ್ಥರಹಿತವಾಗಿಸುತ್ತದೆ. ರಾತ್ರಿ 9 ಗಂಟೆ ನಂತರ ಹೊರಗಡೆ ಬರದೆ ಮನೆಯವರೆಲ್ಲರೂ ಆಪ್ತರೊಂದಿಗೆ ಕಾಲ ಕಳೆಯಲು ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಮನವಿ ಮಾಡಿರುತ್ತಾರೆ. ಆಗ ಮಾತ್ರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ಕರ್ಫ್ಯೂಗೆ ಒಂದು ಅರ್ಥ ಬರುತ್ತದೆ ಮತ್ತು ಸಾರ್ಥಕವಾಗಲಿದೆ. ಇನ್ನೊಮ್ಮೆ ನನ್ನ ಕಳಕಳಿಯ ಮನವಿ, ನೀವು ಯಾರೂ ರಾತ್ರಿ 9 ಗಂಟೆಯ ನಂತರ ಹೊರಗೆ ಬರಬೇಡಿ”. “ಆದರೆ ಸಂಜೆ 5 ಗಂಟೆಗೆ ನಿಮ್ಮ ಮನೆಯ ಕಿಟಕಿಗಳಿಂದ ಮತ್ತು ಛಾವಣಿಗಳ ಮೇಲಿಂದ ಚಪ್ಪಾಳೆ ತಟ್ಟಿ ಸರಕಾರದ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮಾತ್ರ ಮರೆಯಬೇಡಿ ಎಂದು ಸಿಎಂ ತಿಳಿಸಿದ್ದಾರೆ.
from India & World News in Kannada | VK Polls https://ift.tt/2vHwclK