ಕೊರೊನಾ ವಿರುದ್ಧ ಹೋರಾಟ: 9 ಜಿಲ್ಲೆಗಳು ಸಾಲದು, ಇಡೀ ರಾಜ್ಯವೇ ಲಾಕ್‌ಡೌನ್‌ ಆಗಬೇಕಿದೆ!

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 6 ಹೊಸ ಪ್ರಕರಣಗಳು ಪತ್ತೆಯಾಗಿ, ಒಟ್ಟು ಪ್ರಕರಣಗಳ ಸಂಖ್ಯೆ 26ಕ್ಕೇರಿದೆ. ರಾಜ್ಯ ಅತ್ಯಂತ ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಲಾಕ್‌ಡೌನನ್ನು ಕೇವಲ 9 ಜಿಲ್ಲೆಗಳಿಗೆ ಸೀಮಿತಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದ್ದು, ವೈರಸ್‌ನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ಇಡೀ ರಾಜ್ಯವನ್ನೇ ಲಾಕ್‌ಡೌನ್‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೇಂದ್ರ ಸರಕಾರವು ಕೇವಲ 75 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡಲು ಸೂಚಿಸಿದ್ದರೂ 12 ರಾಜ್ಯಗಳು ಸ್ವಯಂಪ್ರೇರಣೆಯಿಂದ ಸಂಪೂರ್ಣ ರಾಜ್ಯಕ್ಕೇ ಲಾಕ್‌ಡೌನ್‌ ಘೋಷಿಸಿವೆ. ಆದರೆ, ದೇಶದಲ್ಲೇ ಮೊದಲ ಬಾರಿ ಸಾವು ಸಂಭವಿಸಿದ ಕರ್ನಾಟಕ ಮಾತ್ರ ಕೇಂದ್ರ ಹೇಳಿದ ಜಿಲ್ಲೆಗಳಿಗೆ ಲಾಕ್‌ಡೌನ್‌ ಸೀಮಿತಗೊಳಿಸಿದೆ. ಇದು ಮಹಾಮಾರಿಯನ್ನು ಎದುರಿಸಲು ರಾಜ್ಯ ಸಮಗ್ರ ಸಿದ್ಧತೆ ನಡೆಸಿಲ್ಲ ಎನ್ನುವುದನ್ನು ಸೂಚಿಸುತ್ತದೆ. ದಿಲ್ಲಿ ಮಾದರಿ ರಾಜಧಾನಿ ದಿಲ್ಲಿಯ ಸರಕಾರ ತನ್ನ ಪ್ರಜೆಗಳನ್ನು ಕೊರೊನಾದಿಂದ ರಕ್ಷಿಸುವ ನಿಟ್ಟಿನಲ್ಲಿ ಆರಂಭದಲ್ಲೇ ಸ್ಪಂದಿಸಿತ್ತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಆರಂಭದಲ್ಲೇ ಆರೋಗ್ಯ ಇಲಾಖೆ ಮತ್ತು ಪೊಲೀಸರ ಸಭೆಯನ್ನು ನಡೆಸಿ ಸಿದ್ಧತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದರು. ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌ಗಳು, ಲ್ಯಾಬ್‌ಗಳ ಸ್ಥಿತಿಗತಿ ವಿಚಾರಿಸಿದ್ದಲ್ಲದೆ ಯಾವುದೇ ಬೇಡಿಕೆಗಳಿದ್ದರೂ ನಿಂತ ಜಾಗದಲ್ಲೇ ಅನುಮತಿ ನೀಡುವ ನಿರ್ದೇಶನ ನೀಡಿದ್ದರು. ಇದರ ಜತೆಗೆ, ದಿಲ್ಲಿಗೆ ವಿಮಾನ ಮೂಲಕ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ತಪಾಸಣೆ, ಕ್ವಾರಂಟೈನ್‌ಗೆ ಒಳಪಡಿಸುವ ನಿಟ್ಟಿನಲ್ಲಿ ಜತೆಯಾಗಿ ಕಾರ್ಯಾಚರಿಸುವಂತೆ ಆರೋಗ್ಯ ಮತ್ತು ಪೊಲೀಸ್‌ ಇಲಾಖೆಗೆ ಸೂಚಿಸಿದ್ದರು. ಇದರಿಂದ ಪ್ರಕರಣಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಅದಕ್ಕೆ ಸಾಧ್ಯವಾಯಿತು. ಇದೇ ಮಾದರಿಯಲ್ಲಿತಮಿಳುನಾಡು, ತೆಲಂಗಾಣಗಳು ಕೂಡಾ ದಿಟ್ಟ ಹೆಜ್ಜೆಯನ್ನು ಇಟ್ಟವು. ಬಂಗಾಳವೇ ಬೆಸ್ಟ್‌ ಪಶ್ಚಿಮ ಬಂಗಾಳದಲ್ಲಿ ಇದುವರೆಗೆ ಕೇವಲ 07 ಪ್ರಕರಣಗಳು ದಾಖಲಾಗಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಇಡೀ ರಾಜ್ಯವನ್ನೇ ಲಾಕ್‌ಡೌನ್‌ ಘೋಷಿಸಿದ್ದಾರೆ. ಆದರೆ, ಕರ್ನಾಟಕ ಮಾತ್ರ 26 ಪ್ರಕರಣ, ಒಂದು ಸಾವಿನ ಬಳಿಕವೂ 9 ಜಿಲ್ಲೆಗಳ ಲಾಕ್‌ಡೌನ್‌ಗೆ ಸೀಮಿತಗೊಂಡಿದೆ. ಮುಂದಿದೆ ಅಪಾಯರಾಜ್ಯದಲ್ಲಿ ಈಗಾಗಲೇ ಸೋಂಕಿತರಿಂದ ಇನ್ನೊಬ್ಬರಿಗೆ ಸೋಂಕು ತಗಲುವ ಕ್ಲಸ್ಟರ್‌ ಹಂತದ ಹರಡುವಿಕೆ ಆರಂಭವಾಗಿದೆ. ಪಕ್ಕದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅಪಾಯದ ಸ್ಥಿತಿ ಇದೆ. ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ರಾಜ್ಯ ಮೂರನೇ ಹಂತಕ್ಕೆ ಪ್ರವೇಶಿಸಿ ಸಣ್ಣ ಸಣ್ಣ ಪಟ್ಟಣ, ಹಳ್ಳಿಗಳಿಗೂ ಕೊರೊನಾ ನುಗ್ಗಿ ಬಿಡಬಹುದು. ಕೇವಲ ಒಂಬತ್ತೇ ಜಿಲ್ಲೆಗಳಿಗೆ ಲಾಕ್‌ಡೌನ್‌ ಸೀಮಿತಗೊಳಿಸುವುದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ಇದು ತೀವ್ರ ರೂಪದಲ್ಲಿ ಹಬ್ಬುವ ಅಪಾಯವಿದೆ. ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ, ಬಂದರನ್ನೂ ಹೊಂದಿರುವ, ಈಗಾಗಲೇ ಒಂದು ಪ್ರಕರಣ ದೃಢಪಟ್ಟಿರುವ ಉತ್ತರ ಕನ್ನಡವನ್ನೂ ಪಟ್ಟಿಯಿಂದ ಹೊರಗಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯವನ್ನು ಕೊರೊನಾದಿಂದ ರಕ್ಷಿಸಬೇಕಾದರೆ ಇಡೀ ರಾಜ್ಯಕ್ಕೆ ಲಾಕ್‌ಡೌನ್‌ ಘೋಷಿಸಿ, ಎಲ್ಲ ಸಂಚಾರ ವ್ಯವಸ್ಥೆಯನ್ನು ಬಂದ್‌ ಮಾಡುವುದು ಅನಿವಾರ್ಯ. ಹೊರ ರಾಜ್ಯಗಳ ಸಂಪರ್ಕ, ವಿಮಾನ, ರೈಲು ಸೇವೆಗಳನ್ನು ನಿಲ್ಲಿಸಿ ನಿತ್ಯದ ಅಗತ್ಯಗಳಿಗಾಗಿ ವ್ಯವಸ್ಥೆ ಮಾಡಿದರೆ ಮಾತ್ರ ಅಪಾಯ ತಪ್ಪಿಸಬಹುದು.


from India & World News in Kannada | VK Polls https://ift.tt/3bgfyZx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...