ಬೆಂಗಳೂರು: ರಾಜ್ಯದಲ್ಲಿ ಸೋಂಕು ಮತ್ತಷ್ಟು ವ್ಯಾಪಿಸಿರುವ ಹಿನ್ನೆಲೆ ಮಾರ್ಚ್ 31ರ ವರೆಗೆ ರಾಜ್ಯಾದ್ಯಂತ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗಿದ್ದು, ನಿರ್ವಹಣೆಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರೂ 15 ದಿನಗಳ ಕಾಲ ಕಡ್ಡಾಯ ದಿಗ್ಬಂಧನಕ್ಕೆ ಆದೇಶಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್ಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಇಟ್ಟು 15 ದಿನಗಳ ಕಾಲ ನಿಗಾ ವಹಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದವರ ಗುರುತಿಗಾಗಿ ಅಂಥವರ ಬಲಗೈಗೆ ಸ್ಟಾಂಪ್ ಹಾಕಲೂ ನಿರ್ಧರಿಸಲಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಏನೇನು ನಿರ್ಬಂಧವಿದೆ? - ನೈಟ್ಕ್ಲಬ್, ಪಬ್, ಮಾಲ್, ಸಿನಿಮಾ ಪ್ರದರ್ಶನ ಬಂದ್ - ವಿವಾಹ, ನಿಶ್ಚಿತಾರ್ಥ, ಔತಣಕೂಟ ಇನ್ನಿತರ ಸಮಾರಂಭದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. - ರಾಜಕೀಯ ರ್ಯಾಲಿ, ಇನ್ಯಾವುದೇ ಉದ್ದೇಶದ ಬೃಹತ್ ಸಮಾವೇಶ ಮಾಡುವಂತಿಲ್ಲ. - ಕ್ರಿಕೆಟ್, ಕಬ್ಬಡಿ, ಫುಟ್ಬಾಲ್ ಇನ್ನಿತರ ಪಂದ್ಯಾವಳಿ; ಕ್ರೀಡಾಂಗಣ ಬಳಕೆ ಮಾಡುವಂತಿಲ್ಲ - ಸಮ್ಮರ್ ಕ್ಯಾಂಪ್ ಸೇರಿದಂತೆ ಯಾವುದೇ ಶಿಬಿರಗಳಿಗೆ ಅವಕಾಶವಿಲ್ಲ - ವಿಧಾನಸೌಧ, ವಿಕಾಸಸೌಧ, ಕೋರ್ಟ್, ಕಚೇರಿಗಳಿಗೆ ನಿರ್ಬಂಧ - ಚಾಲ್ತಿಯಲ್ಲಿರುವ ಪರೀಕ್ಷೆ ಹೊರತು ಪಡಿಸಿ ಶಾಲಾ, ಕಾಲೇಜಿಗೆ ರಜೆ - ಬೀದಿ ಬದಿ ಮಾಂಸ ಮಾರಾಟ ಮಾಡುವಂತಿಲ್ಲ - ಬೆಂಗಳೂರಿನ ಪಿಜಿ ವಾಸಿಗಳಿಗೆ ಊರಿಗೆ ಮರಳುವಂತೆ ಸಲಹೆ ಮೂರು ವಾರ ನಿರ್ಣಾಯಕ 4 ಹಂತಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತದೆ. ಹಾಗಾಗಿ ಮುಂದಿನ 3 ವಾರ ಬಹಳ ಕಟ್ಟೆಚ್ಚರದಿಂದ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ 2ನೇ ಹಂತವನ್ನು ಕೊರೊನಾ ದಾಟದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ವಿದೇಶಿ ವಿಮಾನ ನಿರ್ಬಂಧಿಸಲು ಚಿಂತನೆ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದಿಂದ ಬೆಂಗಳೂರಿಗೆ ಬರುವ ಮತ್ತು ಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಸಿಬಿಎಸ್ಇ ಪರೀಕ್ಷೆ ಮುಂದೂಡಿಕೆ ಈಗ ನಡೆಯುತ್ತಿರುವ ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆ, ಜೆಇಇ ಮೇನ್ಸ್ ಹಾಗೂ ಎಲ್ಲಾ ವಿವಿ ಪರೀಕ್ಷೆಗಳನ್ನು ಮಾ.31ರ ವರೆಗೆ ಮುಂದೂಡಲಾಗಿದೆ. ಸಹಾಯವಾಣಿ: 104 ಚಿಕಿತ್ಸೆಗೆ ಸಹಕರಿಸಲು ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 104 ದಿನದ 24 ಗಂಟೆಯೂ ಲಭ್ಯವಿರುತ್ತದೆ.
from India & World News in Kannada | VK Polls https://ift.tt/2Uhd9a1