ಹೊಸದಿಲ್ಲಿ: ಅದು 2012 ಡಿಸೆಂಬರ್ 16ರ ರಾತ್ರಿ. ದೆಹಲಿಯಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಆರು ಮಂದಿ ಕಿರಾತಕರು ಮೇಲೆ ಅತ್ಯಂತ ಕ್ರೂರವಾಗಿ ಚಲಿಸುವ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಬಳಿಕ ಹಲ್ಲೆ ನಡೆಸಿ ರಸ್ತೆಗೆ ಎಸೆದು ಹೋಗುತ್ತಾರೆ. ರಸ್ತೆಯಲ್ಲಿ ಬಿದ್ದಿದ್ದ ಯುವತಿಯನ್ನು ಕೆಲವರು ಆಸ್ಪತ್ರೆಗೆ ಸಾಗಿಸುತ್ತಾರೆ. ದೆಹಲಿಯ ಆಸ್ಪತ್ರೆಯಲ್ಲಿ ನಿರ್ಭಯಾಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಬಳಿಕ ವೈದ್ಯರ ಸಲಹೆಯಂತೆ ಸಿಂಗಪುರಕ್ಕೆ ಸಾಗಿಸಲಾಗುತ್ತದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿರ್ಭಯಾ ಸಾವನ್ನಪ್ಪುತ್ತಾಳೆ. ಈ ಘಟನೆ ದೇಶಾದ್ಯಂತ ಕೆಲವೇ ಕ್ಷಣಗಳಲ್ಲಿ ಸುದ್ದಿಯಾಗುತ್ತದೆ. ಯುವತಿಯ ಮೇಲೆ ನಡೆದ ಭೀಕರ ಅತ್ಯಾಚಾರಕ್ಕೆ ದೇಶದ ಜನರ ಮನಸ್ಸು ಮಿಡಿಯುತ್ತದೆ. ಎಲ್ಲರಲ್ಲೂ ಆಕ್ರೋಶ ಸ್ಫೋಟಗೊಳ್ಳುತ್ತದೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸುತ್ತಾರೆ. ಈ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನಸೆಳೆಯುತ್ತದೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸುತ್ತಾರೆ. ನೀಚ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧನ ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತದೆ. 2013 ಫೆಬ್ರವರಿ 2 ರಂದು ಪೊಲೀಸರು ಅಕ್ಷಯ್, ವಿನಯ್ ಶರ್ಮಾ, ಪವನ್ ಗುಪ್ತಾ, ಮುಕೇಶ್ ಸಿಂಗ್, ರಾಮ್ ಸಿಂಗ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧನ ಮಾಡುತ್ತಾರೆ. ಆರೋಪಿಗಳ ವಿರುದ್ಧ ಹತ್ಯೆ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗುತ್ತವೆ. ಬಂಧಿತ ಆರೋಪಿಗಳಿಗೆ ದೇಶದ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯಾದ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂಬ ಒತ್ತಡ ಹೆಚ್ಚಾಗುತ್ತದೆ. ಈ ನಡುವೆ ಮಾರ್ಚ್ 11, 2013 ರಂದು ಆರೋಪಿಗಳಲ್ಲಿ ಒಬ್ಬನಾದ ರಾಮ್ಸಿಂಗ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಖಿನ್ನತೆಯಿಂದ ಬಳಲುತ್ತಿದ್ದ ಈತ ಜೈಲಿನಲ್ಲಿ ನೇಣಿಗೆ ಶರಣಾಗುತ್ತಾನೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಬಾಲಾಪರಾಧಿಯೂ ಇದ್ದಾನೆ. ಕಾನೂನು ಪ್ರಕಾರ ಈತನಿಗೆ ಇತರ ಆರೋಪಿಗಳಿಗೆ ನೀಡುವ ಶಿಕ್ಷೆಯನ್ನು ನೀಡಲು ಸಾಧ್ಯವಿಲ್ಲ. ಈ ಕಾರಣದಿಂದ ಮೂರು ವರ್ಷಗಳ ಕಾಲ ರಿಮಾಂಡ್ ಹೋಮ್ನಲ್ಲಿ ಶಿಕ್ಷೆಯನ್ನು ಪಡೆದು ಬಳಿಕ ಬಿಡುಗಡೆಗೊಳ್ಳುತ್ತಾನೆ. ಈ ವಿಚಾರವಾಗಿಯೂ ಸಾಕಷ್ಟು ಜನರು ಆಕ್ಷೇಪವನ್ನು ಎತ್ತಿದ್ದರು. ಬಾಲಾಪರಾಧಿ ಎಂಬ ಕಾರಣಕ್ಕಾಗಿ ಅಮಾನವೀಯ ಕೃತ್ಯ ಎಸಗಿದ ಈತನನ್ನು ಬಿಡುಗಡೆಗೊಳಿಸಲು ವಿರೋಧ ವ್ಯಕ್ತವಾಗಿತ್ತು. ಪ್ರಕರಣ ಸುದೀರ್ಘ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಕೃತ್ಯ ಸಾಬೀತಾಗಿ ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಲಾಯಿತು. ಜನವರಿ 7, 2020 ರಂದು ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ದೆಹಲಿಯ ಪಟಿಯಾಲ ನ್ಯಾಯಾಲಯದಿಂದ ಡೆತ್ ವಾರೆಂಟ್ ಜಾರಿಯಾಯಿತು. ಆದರೆ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳು ಉಂಟಾದವು. ಹೇಗಾದರೂ ಮಾಡಿ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಲ್ವರು ಆರೋಪಿಗಳು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಾ ಬಂದರು. ಇದರಿಂದಾಗಿ ಗಲ್ಲು ಶಿಕ್ಷೆ ಪದೇ ಪದೇ ಮುಂದೂಡಲ್ಪಡುತ್ತಿತ್ತು. ಇದರಿಂದ ನಿರ್ಭಯಾ ತಾಯಿ ಹತಾಶರಾಗಿದ್ದರು. ಕೋರ್ಟ್ ಆವರಣದಲ್ಲಿ ಮಗಳಿಗೆ ನ್ಯಾಯ ನೀಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಕೊನೆಯಗಳಿಗೆಯಲ್ಲಿ ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿತ್ತು. ನ್ಯಾಯಾಲಯದ ತೀರ್ಮಾನ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಫೆಬ್ರವರಿ 17 ರಂದು ವಿಚಾರಣಾ ನ್ಯಾಯಾಲಯ ಒಂದು ಆದೇಶ ನೀಡಿತು. ಇದರಂತೆ ಮಾರ್ಚ್ 3 ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನು ಗಲ್ಲು ಶಿಕ್ಷೆಗೆ ನೀಡುವಂತೆ ಡೆತ್ ವಾರೆಂಟ್ ಹೊರಡಿಸಿತು. ಆದರೆ ಮಾರ್ಚ್ 2 ರಂದು ಗಲ್ಲು ಶಿಕ್ಷೆ ಮತ್ತೆ ಮುಂದೂಡಲ್ಪಟ್ಟಿತು. ಬಳಿಕ ಮಾರ್ಚ್ 5 ರಂದು ನ್ಯಾಯಾಲಯ ಮತ್ತೊಂದು ಆದೇಶ ನೀಡಿತು. ಇದರಂತೆ ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸುವಂತೆ ವಾರೆಂಟ್ ಜಾರಿಗೊಳಿಸಲಾಯಿತು. ಕೊನೆಗೂ ಅದು ಜಾರಿಯಾಗಿದೆ. ಸುದೀರ್ಘ ಕಾನೂನು ಹೋರಾಟದಲ್ಲಿ ನಿರ್ಭಯಾಳಿಗೆ ಜಯ ದೊರಕಿತು. ಇದು ಕೇವಲ ನಿರ್ಭಯಾಳ ಜಯ ಅಷ್ಟೇ ಅಲ್ಲ. ಅತ್ಯಾಚಾರಿಗಳಿಂದ ಬದುಕನ್ನು ಕಳೆದುಕೊಂಡವರ ಜಯವಾಗಿದೆ.
from India & World News in Kannada | VK Polls https://ift.tt/2U5wiNx