ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣ, ರದ್ದು ಮತ್ತು (ಯುನಿಫಾರ್ ಸಿವಿಲ್ ಕೋಡ್-ಯುಸಿಸಿ) ಜಾರಿ ಬಹುಕಾಲದಿಂದ ಬಿಜೆಪಿಯ ರಾಜಕೀಯ ಕಾರ್ಯಸೂಚಿಯಲ್ಲಿದೆ. ಇದೀಗ 370 ವಿಧಿಯನ್ನು ರದ್ದುಪಡಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಂಡಿದೆ. ಅಲ್ಲದೆ ರಾಜ್ಯದ ಪುನಾರಚನೆ ವಿಧೇಯಕವನ್ನೂ ರಾಜ್ಯಸಭೆ ಸೋಮವಾರ ಅನುಮೋದಿಸಿದೆ. ಹೀಗಾಗಿ ರಾಮ ಮಂದಿ ನಿರ್ಮಾಣ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳುವ ದಿನವೂ ಬಹಳ ದೂರವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮೊದಲಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಈ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಕಳೆದ ವಾರವಷ್ಟೇ ತ್ರಿವಳಿ ತಲಾಖ್ ನಿಷೇಧ ವಿಧೇಯಕವನ್ನು ಸಂಸತ್ ಅಂಗೀಕರಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆ ಹಾಗೂ ಸೈದ್ಧಾಂತಿಕ ಅಡೆತಡೆಗಳ ನಡುವೆಯೂ ಬಿಜೆಪಿ ಸರಕಾರ ಇದರಲ್ಲಿ ಯಶಸ್ವಿಯಾಗಿದೆ. ಇದೀಗ 370ನೇ ವಿಧಿ ರದ್ದುಗೊಳಿಸುವ ದಿಟ್ಟ ಹೆಜ್ಜೆಯಲ್ಲೂ ಸರಕಾರ ಯಶಸ್ವಿಯಾಗಿದೆ. ಹೀಗಾಗಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಕಠಿಣವಾದರೂ ಅಸಾಧ್ಯವೇನಲ್ಲ ಎಂಬ ಭರವಸೆ ಈಗ ಮೂಡಿದೆ. ಏಕರೂಪ ನಾಗರಿಕ ಸಂಹಿತೆಗೆ ಪೂರ್ವಭಾವಿಯಾಗಿ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಮರುಪರಿಶೀಲನೆಗೆ ಎತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅಯೋಧ್ಯೆ ವಿವಾದ ಈಗ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಇಂದಿನಿಂದ ಪ್ರತಿದಿನ ವಿಚಾರಣೆ ನಡೆಲಿದೆ. ಸೂಕ್ಷ್ಮ ರಾಜಕೀಯ ಮತ್ತು ಧಾರ್ಮಿಕ ಪರಿಣಾಮಗಳ ಹೊರತಾಗಿಯೂ ವಿವಾದ ಈಗ ಬಹುತೇಕ ಇತ್ಯರ್ಥಗೊಳ್ಳುವ ಅಂತಿಮ ಹಂತಕ್ಕೆ ತಲುಪಿದೆ. 370ನೇ ವಿಧಿ ಕೊನೆಗೊಂಡಿದೆ ಎಂಬ ರಾಷ್ಟ್ರಪತಿಗಳ ಆದೇಶವನ್ನು ರಾಜ್ಯಸಭೆ ಅನುಮೋದಿಸುವುದರೊಂದಿಗೆ ಬಿಜೆಪಿ ತನ್ನ ರಾಷ್ಟ್ರೀಯತಾವಾದ ಮತ್ತು ಹಿಂದುತ್ವ ಕಾರ್ಯಸೂಚಿಯನ್ನು ಬಲಪಡಿಸಿಕೊಂಡು ಜನತೆಯ ಮೆಚ್ಚುಗೆ ಗಳಿಸುತ್ತಿದೆ. ನೆಹರೂ ಯುಗದ ಜಾತ್ಯತೀತವಾದಕ್ಕೆ ಪರ್ಯಾಯವಾಗಿ ರಾಷ್ಟ್ರೀಯತಾವಾದ ಮತ್ತು ಹಿಂದುತ್ವವನ್ನು ಮುನ್ನೆಲೆಗೆ ತರುವ ಬಿಜೆಪಿಯ ರಾಜಕೀಯ ಸಿದ್ಧಾಂತಕ್ಕೆ ಮಾನ್ಯತೆ ಹಾಗೂ ಬೆಂಬಲ ದೊರೆತಿದೆ. ಜಮ್ಮು ಮತ್ತು ಕಾಶ್ಮೀರದ ಮುಂದಿನ ಹಾದಿ ಅತ್ಯಂತ ಸವಾಲಿನದ್ದು ಎಂಬ ಅರಿವು ಮೋದಿ ಸರಕಾರಕ್ಕಿದೆ. 35ಎ ಮತ್ತು 370ನೇ ವಿಧಿಗಳಿಂದ ಪೋಷಣೆ ಪಡೆದು ಹೆಮ್ಮರವಾಗಿ ಬೆಳೆದು ನಿಂತ ಪ್ರತ್ಯೇಕತಾವಾದವನ್ನು ಬೇರು ಸಮೇತ ಕಿತ್ತೊಗೆಯಲು ಅಡ್ಡಿಯಾಗಿದ್ದ ರಾಜಕೀಯ ಅಡೆತಡೆಗಳನ್ನು ಮೋದಿ ಸರಕಾರ ಇದೀಗ ನಿವಾರಿಸಿಕೊಂಡಿದೆ. 370ನೇ ವಿಧಿಯ ರದ್ದತಿಗೆ ಇದೀಗ ಕಾಲ ಪಕ್ವವಾಗಿದೆ ಎಂಬುದನ್ನು ಅರಿತ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯ ಮೂಲಕ ಅದನ್ನು ಸಾಕಾರಗೊಳಿಸಿದೆ. ಗೃಹಸಚಿವ ಅಮಿತ್ ಶಾ ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಸಿದ್ಧತೆ ಆರಂಭಿಸಿ, ಹಲವು ಪಕ್ಷಗಳ ಜತೆ ಸಮಾಲೋಚನೆ ನಡೆಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಡಿ, ಟಿಆರ್ಎಸ್, ವೈಎಸ್ಸಾರ್ಸಿಪಿ ಮತ್ತು ಟಿಡಿಪಿ ಪಕ್ಷಗಳು ಜಮ್ಮು-ಕಾಶ್ಮೀರ ಪುನಾರಚನೆ ವಿಧೇಯಕ ಬೆಂಬಲಿಸಿ ಮತ ಚಲಾಯಿಸಿದವು. ಇದರೊಂದಿಗೆ ಅಮಿತ್ ಶಾ ಅವರು ತಿಂಗಳ ಹಿಂದೆಯೇ ಆರಂಭಿಸಿದ್ದ ಮಹತ್ಕಾರ್ಯವೊಂದು ಯಶಸ್ವಿಯಾಗಿದೆ. '370ನೇ ವಿಧಿ ರದ್ದುಪಡಿಸುವ ಸರಕಾರದ ನಿರ್ಧಾರವು ರಾಷ್ಟ್ರೀಯ ಏಕತೆಯ ನಿಟ್ಟಿನಲ್ಲಿ ಒಂದು ಅವಿಸ್ಮರಣೀಯ ಕ್ರಮ. ತಾತ್ಕಾಲಿಕವೆಂದು ಜಾರಿಗೆ ತರಲಾಗಿದ್ದ 370ನೇ ವಿಧಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಅದು ರದ್ದಾಗಲೇಬೇಕು' ಎಂದು ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/2YJsqkf