ಅಬು ಧಾಬಿ: ಇಲ್ಲಿನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 4 ರನ್ನಿಂದ ಸೋಲು ಅನುಭವಿಸಿದ ಬಳಿಕ ತಂಡದ ನಾಯಕ ಸಹ ಆಟಗಾರ ಯುಜ್ವೇಂದ್ರ ಚಹಲ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್ಗಳಿಗೆ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 136 ರನ್ಗಳಿಗೆ ಸೀಮಿತವಾಗುವ ಮೂಲಕ ಪರಾಭವಗೊಂಡಿತು. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ಆದಷ್ಟು ಬೇಗ ಪಂದ್ಯವನ್ನು ಮುಗಿಸುವುದು ನಮ್ಮ ಉದ್ದೇಶವಾಗಿತ್ತು. ಆರಂಭದಲ್ಲಿ ಕೆಲ ವಿಕೆಟ್ಗಳು ಉರುಳಿದರೂ ನಂತರ ಇನಿಂಗ್ಸ್ ಅನ್ನು ಮರು ಬೆಳೆಸುವುದು ತಂಡದ ಕೀ ಸಂಗತಿ. ಮ್ಯಾಕ್ಸ್ವೆಲ್ ರನ್ಔಟ್ ಆಗಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್," ಎಂದು ಹೇಳಿದರು. "ಡಿವಿಲಿಯರ್ಸ್ ಕ್ರೀಸ್ನಲ್ಲಿ ಇರುವವರೆಗೂ ನೀವು ಪಂದ್ಯದಿಂದ ಹೊರಗುಳಿಯುವುದಿಲ್ಲ. ಆದರೆ, ನಿರ್ಣಾಯಕ ಸಮಯದಲ್ಲಿ ಅವರಿಗೆ ಹೆಚ್ಚು ಸ್ಟ್ರೈಕ್ ಸಿಗದೆ ಇರುವುದು ಇಲ್ಲಿ ಬೇಸರದ ಸಂಗತಿ. ಆದರೆ, ಈ ಹಂತದಲ್ಲಿ ಶಹಬಾಝ್ ಅಹಮದ್ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇದು ಅಲ್ಪ ಮೊತ್ತದ ಪಂದ್ಯವಾದರೂ ಸನ್ರೈಸರ್ಸ್ ಹೈದರಾಬಾದ್ ಬೌಲರ್ಗಳು ಕೊನೆಯಲ್ಲಿ ಅತ್ಯುತ್ತಮ ಬೌಲ್ ಮಾಡಿದ್ದಾರೆ, ಹಾಗಾಗಿ ನಾವು ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಿರಲಿಲ್ಲ," ಎಂದು ತಿಳಿಸಿದ್ದಾರೆ. ಅದ್ಭುತ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಹಾಗೂ ಪ್ರಸಕ್ತ ಟೂರ್ನಿಯಲ್ಲಿಯೇ ಅತ್ಯಂತ ವೇಗದ ಎಸೆತ ಹಾಕಿದ ಉಮ್ರನ್ ಮಲಿಕ್(153 ಕಿ.ಮೀ) ಅವರನ್ನು ವಿರಾಟ್ ಕೊಹ್ಲಿ ಇದೇ ವೇಳೆ ಗುಣಗಾನ ಮಾಡಿದ್ದಾರೆ. "ಚಹಲ್ ಇತ್ತೀಚೆಗೆ ಅತ್ಯುತ್ತಮ ಬೌಲ್ ಮಾಡುತ್ತಿದ್ದಾರೆ ಹಾಗೂ ತಮ್ಮ ಬೌಲಿಂಗ್ ಮೇಲೆ ಅವರು ಸಾಕಷ್ಟ ಕೆಲಸ ಮಾಡಿದ್ದಾರೆ. ಈ ಕಾರಣದಿಂದಲೇ ಅವರ ಮೇಲೆ ನಮಗೆ ತುಂಬಾ ವಿಶ್ವಾಸವಿದೆ. ಇವರ(ಚಹಲ್) ಬೌಲಿಂಗ್ ನಮಗೆ ಯಾವಾಗಲೂ ಶುಭ ಸಂಕೇತವಾಗಿದೆ. ನಿಜಕ್ಕೂ ಚೆಂಡಿನೊಂದಿಗೆ ಯುಜ್ವೇಂದ್ರ ಚಹಲ್ ಅದ್ಭುತವಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ. "ಈ ಟೂರ್ನಿಯ ಪ್ರತಿಯೊಂದು ವರ್ಷವೂ ಒಬ್ಬ ಪ್ರತಿಭಾವಂತ ಆಟಗಾರ ಬೆಳಕಿಗೆ ಬರುತ್ತಾರೆ. ಅದರಂತೆ ಒಬ್ಬ ಹುಡುಗ 150 ಕಿ.ಮೀ ವೇಗವಾಗಿ ಬೌಲ್ ಮಾಡುವುದನ್ನು ನೋಡಲು ಖುಷಿಯಾಗುತ್ತದೆ. ಇಲ್ಲಿನ ವೈಯಕ್ತಿಕ ಪ್ರದರ್ಶನಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೆ ಮುಖ್ಯ. ವೇಗದ ಬೌಲರ್ಗಳು ಯಾವಾಗಲೂ ಟೀಮ್ ಇಂಡಿಯಾಗೆ ಶುಭ ಸಂಕೇತವಾಗಿದೆ," ಎಂದು ಯುವ ವೇಗಿ ಉಮ್ರನ್ ಮಲಿಕ್ ಬಗ್ಗೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿಯಿತು. ಆ ಮೂಲಕ ಅಗ್ರ ಸ್ಥಾನಕ್ಕೇರುವ ಅವಕಾಶವನ್ನು ಸುಲಭವಾಗಿ ಕೈಚೆಲ್ಲಿಕೊಂಡಿತು. ಶುಕ್ರವಾರ ನಡೆಯುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aurpFb