ದುಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಸೋಲು ಅನುಭವಿಸಿದ ಬಳಿಕ ಬೇಸರ ಹೊರಹಾಕಿದ ತಂಡದ ನಾಯಕ , ಹಲವು ಕ್ಯಾಚ್ಗಳನ್ನು ಕೈ ಚೆಲ್ಲಿದ್ದರಿಂದ ನಮ್ಮ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಒಟ್ಟು ಐದು ಕ್ಯಾಚ್ಗಳನ್ನು ಕೈ ಚೆಲ್ಲಿತ್ತು. ಈ ಕಾರಣದಿಂದಾಗಿ ಕೆಕೆಆರ್, 165 ರನ್ಗಳಿಗೆ ಕೆ.ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇನಿಂಗ್ಸ್ನ ಎರಡನೇ ಎಸೆತದಲ್ಲಿಯೇ ಐಯಾನ್ ಮಾರ್ಗನ್, ಮಯಾಂಕ್ ಅಗರ್ವಾಲ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ್ದರು. 10ನೇ ಓವರ್ನಲ್ಲಿ ನಿಕೋಲಸ್ ಪೂರನ್ ಅವರ ಕ್ಯಾಚ್ ಅನ್ನು ರಾಹುಲ್ ತ್ರಿಪಾಠಿ ಬಿಟ್ಟಿದ್ದರು ಹಾಗೂ ಡೀಪ್ನಲ್ಲಿ ವೆಂಕಟೇಶ್ ಅಯ್ಯರ್ ಕೂಡ ಒಂದು ಕ್ಯಾಚ್ ಅನ್ನು ಕೈ ಚೆಲ್ಲಿದ್ದರು. ನಂತರ, ರಾಹುಲ್ ತ್ರಿಪಾಠಿ ಅವರ ಅದ್ಭುತವಾದ ಕ್ಯಾಚ್ ಅನ್ನು ಟಿವಿ ಅಂಪೈರ್ ನಾಟೌಟ್ ನೀಡಿದ್ದರು. ನಂತರ ಫೈನಲ್ ಓವರ್ನಲ್ಲಿ ಶಾರೂಖ್ ಖಾನ್ ಅವರ ಕ್ಯಾಚ್ ಅನ್ನು ರಾಹುಲ್ ತ್ರಿಪಾಠಿ ಕೂದಲೆಳೆಯ ಅಂತರದಲ್ಲಿ ಬಿಟ್ಟಿದ್ದರು ಹಾಗೂ ಚೆಂಡು ಬೌಂಡರಿ ಗೆರೆ ದಾಟಿತ್ತು. ಅಷ್ಟೇ ಅಲ್ಲದೆ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಶಾರ್ಟ್ ಫೈನ್ ಲೆಗ್ನಲ್ಲಿ ಕೆ.ಎಲ್ ರಾಹುಲ್ಗೆ ಜೀವದಾನ ನೀಡಿದ್ದರು. ಈ ಎಲ್ಲಾ ಕ್ಯಾಚ್ಗಳನ್ನು ಬಿಟ್ಟಿದ್ದರಿಂದ ಕೆಕೆಆರ್ ಪಂದ್ಯದಲ್ಲಿ ಸೋಲಬೇಕಾಯಿತು. ಪಂದ್ಯದ ಬಳಿಕ ಮಾತನಾಡಿದ ಐಯಾನ್ ಮಾರ್ಗನ್ ನಾವು ಕ್ಯಾಚ್ಗಳನ್ನು ಕೈಚೆಲ್ಲಿದ್ದರಿಂದ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ. "ಆರಂಭದಲ್ಲಿ ಉತ್ತಮ ಫೀಲ್ಡಿಂಗ್ ನಮ್ಮದಾಗಿತ್ತು. ಆದರೆ, ಕೆಲ ಕ್ಯಾಚ್ಗಳನ್ನು ಕೈ ಚೆಲ್ಲಿದ್ದೇವೆ. ಆರಂಭದಲ್ಲಿ ನಾನು ಹಾಗೂ ನಂತರ ಹಲವರು ಕ್ಯಾಚ್ಗಳನ್ನು ಬಿಟ್ಟಿದ್ದಾರೆ. ಇದು ನಮ್ಮ ಪಾಲಿಗೆ ದುಬಾರಿಯಾಯಿತು," ಎಂದು ಬೇಸರ ಹೊರಹಾಕಿದರು. "ಅಂತ್ಯದಲ್ಲಿ ನಾವು ಪಂದ್ಯವನ್ನು ಇನ್ನಷ್ಟು ಟೈಟ್ ಮಾಡಿದ್ದರೆ, ಕೆಲ ವಿಕೆಟ್ಗಳನ್ನು ಪಡೆದುಕೊಳ್ಳುತ್ತಿದ್ದೆವು ಹಾಗೂ ಇದು ನಮ್ಮ ಗೆಲುವಿಗೆ ಸಹಾಯವಾಗುತ್ತಿತ್ತು. ಇದರ ಹೊರತಾಗಿಯೂ ನಾವು ಕಠಿಣ ಹೋರಾಟ ನಡೆಸಿದ್ದೇವೆ ಹಾಗೂ ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು.ಅಷ್ಟೇ ಅಲ್ಲದೆ, ನಮ್ಮ ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಕೂಡ ಉತ್ತಮ ಹೋರಾಟ ನಡೆಸಿದೆ. ಆದರೆ, ನಾವು ಕ್ಯಾಚ್ಗಳನ್ನು ಕೈಚೆಲ್ಲಿದ್ದು ನಮ್ಮ ಪಾಲಿಗೆ ದುಬಾರಿಯಾಯಿತು," ಎಂದು ಹೇಳಿದರು. ರಾಹುಲ್ ತ್ರಿಪಾಠಿ ಪಡೆದಿದ್ದ ಕೆಎಲ್ ರಾಹುಲ್ ಅವರ ಕಠಿಣ ಕ್ಯಾಚ್ ಅನ್ನು ಮೂರನೇ ಅಂಪೈರ್ ನಾಟೌಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಗನ್, "ನೈಜ ಸಮಯದಲ್ಲಿ ಇದು ಔಟ್ ಎಂದು ನನಗೆ ಅನಿಸುತ್ತಿತ್ತು. ನಿಸ್ಸಂಶಯವಾಗಿ ಸಂಗತಿಗಳನ್ನು ನಿಧಾನಗೊಳಿಸಿದಾಗ ಮತ್ತು ಅದನ್ನು ವಿಶ್ಲೇಷಿಸಿದಾಗ ಮೂರನೇ ಅಂಪೈರ್ ಬೇರೆ ರೀತಿಯಲ್ಲಿ ಯೋಚಿಸಿದ್ದರು ಹಾಗೂ ಅವರ ನಿರ್ಧಾರವನ್ನೇ ಅಂತಿಮಗೊಳಿಸಲಾಗಿದೆ. ಆದರೆ, ಈ ವಿಕೆಟ್ ನಮಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು," ಎಂದು ತಿಳಿಸಿದರು. ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ಸೋಲು ಅನುಭವಿಸಿದ ಹೊರತಾಗಿಯೂ ಪ್ಲೇ ಆಫ್ಸ್ ಆಸೆಯನ್ನು ಜೀವಂತವಾಗಿದೆ. ಆದರೆ, ಇನ್ನುಳಿದ ಎಲ್ಲಾ ಎರಡೂ ಪಂದ್ಯಗಳಲ್ಲಿ ಜಯ ಗಳಿಸಬೇಕಷ್ಟೆ. "ಯುಎಇ ಚರಣದಲ್ಲಿ ನಾವು ಶ್ರೇಷ್ಠ ಪ್ರದರ್ಶನವನ್ನು ತೋರಿದ್ದೇವೆ ಹಾಗೂ ಶುಕ್ರವಾರ ರಾತ್ರಿಯ ಪಂದ್ಯದಿಂದಲೂ ನಾವು ಪಾಸಿಟಿವ್ ಅನ್ನು ಪಡೆಯುವ ಅಗತ್ಯವಿದೆ. ನಮಗೆ ಇನ್ನೂ ಎರಡು ಪಂದ್ಯಗಳಿದ್ದು, ಕಠಿಣ ಹೋರಾಟ ನಡೆಸುತ್ತೇವೆ ಹಾಗೂ ಪ್ಲೇ ಆಫ್ಸ್ಗೆ ಅರ್ಹತೆ ಪಡೆದುಕೊಳ್ಳುತ್ತೇವೆ," ಎಂದು ಐಯಾನ್ ಮಾರ್ಗನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3iqxhn6