ಮೈಸೂರಿನ ಪೊಲೀಸರು ಮತ್ತಷ್ಟು ಜನಸ್ನೇಹಿ; ಠಾಣೆ ಬದಲಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಬ್ಬಂದಿ ಸಭೆ!

ಹರೀಶ ಎಲ್‌. ತಲಕಾಡು ಮೈಸೂರು: ಇನ್ನು ಮುಂದೆ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆ ಸಾರ್ವಜನಿಕ ಸ್ಥಳದಲ್ಲಿಯೇ ನಡೆಯಲಿದೆ. ಸಾರ್ವಜನಿಕರ ಸಮ್ಮುಖದಲ್ಲಿಯೇ ಸಭೆ ನಡೆಸಿ ದೈನಂದಿನ ಆಗು-ಹೋಗುಗಳ ಚರ್ಚೆ ನಡೆಸಲಿದ್ದಾರೆ. ಜತೆಗೆ ಸಾರ್ವಜನಿಕರ ಸಮಸ್ಯೆಯನ್ನು ಕೂಡ ಆಲಿಸಲಿದ್ದಾರೆ. ಈ ಮೂಲಕ ಪೊಲೀಸ್‌ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು ನಗರ ಪೊಲೀಸ್‌ ಆಯುಕ್ತರು, ಈ ವಿನೂತನ ಕ್ರಮ ಕೈಗೊಡಿದ್ದಾರೆ. ನಾಲ್ಕುಗೋಡೆ ಮಧ್ಯೆ ಠಾಣೆಯೊಳಗೆ ನಡೆಯುತ್ತಿದ್ದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯ ಸಭೆ, ಕರ್ತವ್ಯ ನಿಯೋಜನಾ ಕಾರ್ಯ ಇನ್ನು ಮುಂದೆ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿದೆ. ಇದರಿಂದ ಪೊಲೀಸರ ಇರುವಿಕೆ ಬಗ್ಗೆ ಜನ ಸಾಮಾನ್ಯರಿಗೆ ತಿಳಿಯಲಿದೆ ಎನ್ನುತ್ತಾರೆ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ. ಪೊಲೀಸರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಬಹಿರಂಗವಾಗಿ ಸಭೆಗಳನ್ನು ನಡೆಸುವುದು, ಗಸ್ತಿಗೆ ನಿರ್ದೇಶನ ನೀಡುವ ಸಭೆಗಳನ್ನು ನಡೆಸುವ ಮೊದಲಾದ ಕಾರ್ಯಗಳಿಂದ ಅಪರಾಧ ಕೃತ್ಯಗಳು ನಿಯಂತ್ರಣಕ್ಕೆ ಬರುತ್ತವೆ. ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡುತ್ತದೆ ಎಂಬ ಉದ್ದೇಶದಿಂದ ಈ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎನ್ನುತ್ತಾರೆ ನಗರ ಪೊಲೀಸ್‌ ಆಯುಕ್ತರು. ಈ ಆದೇಶದ ಹಿನ್ನೆಲೆಯಲ್ಲಿ ಮೊದಲ ದಿನ ಜಯಲಕ್ಷ್ಮೀಪುರಂ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪೂಣಚ್ಚ ಅವರು ಪಡುವಾರಹಳ್ಳಿ ವೃತ್ತದ ಬಳಿ, ಎನ್‌.ಆರ್‌.ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಅಜರುದ್ದೀನ್‌ ಫೌಂಟೇನ್‌ ವೃತ್ತದ ಬಳಿ, ಕೆ.ಆರ್‌.ಠಾಣೆಯ ಇನ್ಸ್‌ಪೆಕ್ಟರ್‌ ಮಹದೇವಸ್ವಾಮಿ ಅಗ್ರಹಾರದ ವೃತ್ತದ ಬಳಿ, ಉದಯಗಿರಿ ಠಾಣೆಯ ಇನ್ಸ್‌ಪೆಕ್ಟರ್‌ ರಾಜು ಕ್ಯಾತಮಾರನಹಳ್ಳಿ ಬಳಿ, ಹೀಗೆ ಎಲ್ಲಾ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ತಮ್ಮ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಯ ಸಭೆ ನಡೆಸಿ, ಕರ್ತವ್ಯ ನಿಯೋಜನೆ ಮಾಡಿದರು. ನಿತ್ಯ ಸಭೆಈ ಸಭೆ ನಿತ್ಯ ಬೆಳಗ್ಗೆ 8.30 ಮತ್ತು ಸಂಜೆ 5.30ರ ಸಮಯದಲ್ಲಿ ಠಾಣೆ ವ್ಯಾಪ್ತಿಯ ನಾನಾ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿದೆ. ದಿಢೀರ್‌ ಭೇಟಿ, ಪರಿಶೀಲನೆ ಇದರೊಂದಿಗೆ ಪೊಲೀಸರು ಎಲ್ಲೆಡೆ ದಿಢೀರ್‌ ಭೇಟಿ, ಪರಿಶೀಲನಾ ಕಾರ್ಯ ಆರಂಭಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪ್ರತಿಯೊಂದು ಹೊಟೇಲ್‌, ಲಾಡ್ಜ್‌, ಪ್ರವಾಸಿ ಮಂದಿರಗಳೊಂದಿಗೆ ವಿದೇಶ ಮತ್ತು ನೆರೆ ರಾಜ್ಯಗಳಿಂದ ಜನರು ಬಂದು ನೆಲೆಸಿರುವ ಬಾಡಿಗೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಖದೀಮರ ಮೇಲೆ ನಿಗಾ ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ಹೊಂಚು ಹಾಕುವ ಖದೀಮರ ಮೇಲೆ ನಿಗಾ ಇರಿಸುತ್ತಿದ್ದಾರೆ. ಠಾಣಾ ವ್ಯಾಪ್ತಿಯ ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಠಾಣೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಪೊಲೀಸ್‌ ಠಾಣೆಯಲ್ಲಿ ನಡೆಯುವ ಪೊಲೀಸರ ಕಾರ್ಯ ವೈಖರಿ, ಕೆಲಸ ಸಾರ್ವಜನಿಕರಿಗೂ ತಿಳಿಯಬೇಕು. ಈ ಉದ್ದೇಶದಿಂದ ಸಾರ್ವಜನಿಕವಾಗಿ ಸಭೆ ನಡೆಸಿ ಚರ್ಚಿಸುವ ವ್ಯವಸ್ಥೆ ಆರಂಭ ಮಾಡಲಾಗಿದೆ. ಇದರಿಂದ ಠಾಣಾ ವ್ಯಾಪ್ತಿಯ ಜನರಿಗೆ ಪೊಲೀಸರ ಕರ್ತವ್ಯದ ಅರಿವು ತಿಳಿಯಲಿದೆ. ಅಪರಾಧ ಕೃತ್ಯಗಳು ಸಹ ನಿಯಂತ್ರಣಕ್ಕೆ ಬರಲಿವೆ. ಡಾ.ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ ಮೈಸೂರು ನಗರ ಪೊಲೀಸರ ಈ ಹೊಸ ಕಾರ್ಯ ಶೈಲಿ ಮತ್ತಷ್ಟು ಜನ ಸ್ನೇಹಿಯಾಗಿದೆ. ನಮ್ಮ ರಕ್ಷಣೆಗೆ ಪೊಲೀಸರಿದ್ದಾರೆ ಎಂಬ ಭಾವನೆ ಮೂಡುವಂತೆ ಆಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಇರುವಿಗೆ ಅಪರಾಧ ನಿಯಂತ್ರಣಕ್ಕೆ ಸಹ ದಾರಿಯಾಗಿದೆ. ಎಂ.ಜಿ.ಪ್ರವೀಣ್‌, ಸ್ಥಳೀಯ ನಿವಾಸಿ


from India & World News in Kannada | VK Polls https://ift.tt/3mlyFZj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...