ನೌಕರರ ವಿರುದ್ಧ ತನಿಖೆ, ಶಿಸ್ತು ಕ್ರಮಕ್ಕೆ ಗಡುವು: ಒಂಬತ್ತು ತಿಂಗಳು ಡೆಡ್‌ಲೈನ್‌, ಸರ್ಕಾರದಿಂದ ಸುತ್ತೋಲೆ!

ಬೆಂಗಳೂರು: ರಾಜ್ಯ ಸರಕಾರಿ ನೌಕರರ ವಿರುದ್ಧ ಬರುವ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ನೀಡಲು ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗುತ್ತಿದ್ದ ಅನಗತ್ಯ ವಿಳಂಬ ತಪ್ಪಿಸಲು ಕಾಲಮಿತಿ ನಿಗದಿಪಡಿಸಿ ರಾಜ್ಯ ಸರಕಾರ ಹೊರಡಿಸಿದೆ. ಅಕ್ರಮ ವ್ಯವಹಾರ, ಹಣ ಮತ್ತು ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ, ಸರಕಾರದ ಬೊಕ್ಕಸಕ್ಕೆ ನಷ್ಟ , ದುರ್ನಡತೆ, ಕರ್ತವ್ಯಲೋಪ ಸೇರಿದಂತೆ ರಾಜ್ಯ ಸರಕಾರಿ ನೌಕರರ ವಿರುದ್ಧ ಆಪಾದನೆಗಳು ಬಂದಾಗ ವಿಚಾರಣೆ ನಡೆಸಿ ವರದಿ ನೀಡಲು 3-4 ವರ್ಷಗಳಾಗುತ್ತಿದ್ದವು. ಕೆಲವು ಪ್ರಕರಣಗಳಲ್ಲಿ ವಿಚಾರಣೆ ಸಮಿತಿ ರಚನೆ ಮಾಡಲು ಎರಡು ವರ್ಷ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಇದರಿಂದ ಆಪಾದಿತ ನೌಕರನ ವಿರುದ್ಧ ಕ್ರಮ ಜರುಗಿಸಲು ಆಗುತ್ತಿರಲಿಲ್ಲ. ಈ ವಿಳಂಬ ತಡೆಯಲು ಮುಂದಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಪಾದನೆಗಳ ವಿಚಾರಣೆಗೆ ಕಾಲಮಿತಿ ನಿಗದಿಪಡಿಸಿ ಅ.4 ರಂದು ಸುತ್ತೋಲೆ ಹೊರಡಿಸಿದೆ. ಕಾಲಮಿತಿ ಮೀರಿದರೂ ಕ್ರಮಆಪಾದಿತ ಸರಕಾರಿ ನೌಕರನ ವಿರುದ್ಧ ತನಿಖೆ ನಡೆಸಿ ಒಂಬತ್ತು ತಿಂಗಳೊಳಗೆ ಶಿಸ್ತು ಕ್ರಮ ಜರುಗಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಸರಕಾರದ ಕಾರ್ಯದರ್ಶಿಗಳು ಹಾಗೂ ಇಲಾಖೆ ಮುಖ್ಯಸ್ಥರು ಈ ಸೂಚನೆಯನ್ನು ತಪ್ಪದೆ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಈ ಸೂಚನೆ ಉಲ್ಲಂಘಿಸುವ ಅಧಿಕಾರಿಗಳೇ ಕರ್ತವ್ಯಲೋಪ ಆರೋಪದ ಮೇಲೆ ಶಿಸ್ತಿನ ಕ್ರಮಕ್ಕೆ ಒಳಪಡಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಪ್ರಯೋಜನವೇನು? ಸರಕಾರಿ ನೌಕರರ ಸೇವಾ ಅವಧಿಯಲ್ಲಿ ಆಪಾದನೆಗಳು ಬಂದಾಗ ತನಿಖೆ ನಡೆಸಿ ವರದಿ ನೀಡಲು ಇದ್ದ ಕಾಲಮಿತಿ ಪಾಲನೆಯಾಗುತ್ತಿರಲಿಲ್ಲ. ವಿನಾಕಾರಣ ಆಪಾದನೆಗೊಳಗಾಗಿದ್ದ ನೌಕರ ಸಂಕಟಕ್ಕೆ ಸಿಲುಕುತ್ತಿದ್ದರು. ಅವರಿಗೆ ಸಿಗಬೇಕಾದ ಬಡ್ತಿ ಹಾಗೂ ಇತರೆ ಸವಲತ್ತುಗಳು ತಪ್ಪುತ್ತಿದ್ದವು. ಈಗ 9 ತಿಂಗಳ ಕಾಲಮಿತಿ ನಿಗದಿಪಡಿಸಿರುವುದರಿಂದ ಪ್ರಕರಣ ಇತ್ಯರ್ಥಗೊಳ್ಳಲಿದೆ. ಹಾಗೆಯೇ ಅಕ್ರಮದಲ್ಲಿ ಭಾಗಿಯಾದ ನೌಕರನ ವಿರುದ್ಧ ತನಿಖಾ ವರದಿ ಅನ್ವಯ ಶೀಘ್ರ ಶಿಸ್ತು ಕ್ರಮ ಜರುಗಿಸಲು ಅನುವಾಗಲಿದೆ. ತಪ್ಪು ಸಾಬೀತಾದರೆ ಶಿಕ್ಷೆಗೊಳಪಡಿಸಲು ಅವಕಾಶ ದೊರೆಯಲಿದೆ. 15 ದಿನಗಳಲ್ಲಿ ಉತ್ತರಿಸಬೇಕು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ,ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಅನ್ವಯ ಸರಕಾರಿ ನೌಕರನ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಹಾಗೆಯೇ ಆಪಾದಿತ ನೌಕರನು ನೋಟಿಸ್‌ ನೀಡಿದ 15 ದಿನಗಳಲ್ಲಿ ಸಮಜಾಯಿಷಿ ನೀಡದಿದ್ದರೆ, ಯಾವುದೇ ಸಮಜಾಯಿಷಿ ಇಲ್ಲವೆಂದು ತಿಳಿದು ಶಿಸ್ತು ಪ್ರಾಧಿಕಾರವು ಮುಂದಿನ ಕ್ರಮ ಜರುಗಿಸಬಹುದು. ಯಾವುದಕ್ಕೆ, ಎಷ್ಟು ಗಡುವು?
  • 1 ತಿಂಗಳು: ನೌಕರ ಅಕ್ರಮ, ದುರ್ನಡತೆ, ಕರ್ತವ್ಯಲೋಪ ಎಸಗಿರುವುದು ಶಿಸ್ತು ಪ್ರಾಧಿಕಾರದ ಗಮನಕ್ಕೆ ಕೂಡಲೇ ಆರೋಪಕ್ಕೆ ಸಂಬಂದಿಸಿದ ದಾಖಲೆಗಳನ್ನು ಪಡೆಯಲು, ವಿಚಾರಣೆಯನ್ನು ಅಂತಿಮಗೊಳಿಸಲು ಹಾಗೂ ದೋಷಾರೋಪ ಪಟ್ಟಿ ತಯಾರಿಸಲು.
  • 1 ತಿಂಗಳು: ದೋಷಾರೋಪ ಪಟ್ಟಿಗೆ ನೌಕರರನ ವಿವರಣೆ ಪಡೆಯಲು ಹಾಗೂ ವಿಚಾರಣಾಧಿಕಾರಿ ನೇಮಿಸಲು.
  • 4 ತಿಂಗಳು: ವಿಚಾರಣೆ ನಡೆಸಲು ಹಾಗೂ ವಿಚಾರಣೆ ವರದಿ ಮಂಡನೆಗೆ.
  • 1 ತಿಂಗಳು: ವಿಚಾರಣೆ ವರದಿ ಪರಿಶೀಲಿಸಲು ಹಾಗೂ ಅದನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಲು.
  • 1 ತಿಂಗಳು: ಕಾರಣ ಕೇಳುವ 2ನೇ ಸೂಚನಾ ಪತ್ರವನ್ನು ವಿಚಾರಣೆ ವರದಿಯ ಜೊತೆಗೆ ಆಪಾದಿತ ನೌಕರನಿಗೆ ನೀಡಲು.
  • 1 ತಿಂಗಳು: ಅಂತಿಮ ಆದೇಶ ನೀಡಲು.
  • 9 ತಿಂಗಳು: ಒಬ್ಬ ನೌಕರನ ವಿರುದ್ಧ ಬರುವ ಆಪಾದನೆಗೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಲು ಒಟ್ಟು 9 ತಿಂಗಳು ಕಾಲಾವಕಾಶ.
ಕಾಲಮಿತಿ ನಿಗದಿಪಡಿಸುವಂತೆ ನೌಕರರ ಸಂಘದಿಂದ 8 ತಿಂಗಳ ಹಿಂದೆಯೇ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಕಾಲಮಿತಿ ನಿಗದಿಪಡಿಸಿರುವುದನ್ನು ಸ್ವಾಗತಿಸುತ್ತೇವೆ. ಎಸ್‌.ಷಡಕ್ಷರಿ, ಅಧ್ಯಕ್ಷರು, ರಾಜ್ಯ ಸರಕಾರಿ ನೌಕರರ ಸಂಘ


from India & World News in Kannada | VK Polls https://ift.tt/3uRiWVJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...