ಮುಂಬೈ ಇಂಡಿಯನ್ಸ್‌ ಗೆಲುವಿನ ಬಳಿಕ ವಿಚಿತ್ರ ಹೇಳಿಕೆ ನೀಡಿದ ನೀಶಮ್‌!

ಶಾರ್ಜಾ(ಯುಎಇ): ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೂರು ವಿಕೆಟ್ ಪಡೆದ ನಂತರ ಮಾತನಾಡಿದ ಆಲ್‌ರೌಂಡರ್ ಜೇಮ್ಸ್ ನೀಶಮ್, ಫ್ರಾಂಚೈಸಿ ಲೀಗ್‌ಗೆ ಮತ್ತೆ ಪದಾರ್ಪಣೆ ಮಾಡುತ್ತಿರುವಂತೆ ನನಗೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಮಂಗಳವಾರ ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ತಂಡ, ನೇಥನ್ ಕೌಲ್ಟರ್‌ ನೈಲ್‌(14ಕ್ಕೆ 4) ಹಾಗೂ ಜೇಮ್ಸ್ ನೀಶಮ್‌(12ಕ್ಕೆ 3) ದಾಳಿಗೆ ನಲುಗಿ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ ಕೇವಲ 90 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಸುಲಭ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಬಡ್ತಿ ಪಡೆದಿದ್ದ ಇಶಾನ್‌ ಕಿಶನ್‌ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಆರಂಭದಲ್ಲಿ ಚೇತನ್‌ ಸಾಕರಿಯಗೆ ಮೇಡಿನ್‌ ಓವರ್‌ ಕೊಟ್ಟಿದ್ದ ಇಶಾನ್‌ ನಂತರ, ರಾಜಸ್ಥಾನ್‌ ರಾಯಲ್ಸ್ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಆಡಿದ ಕೇವಲ 25 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸುವ ಮೂಲಕ ಇನ್ನೂ 70 ಎಸೆತಗಳು ಬಾಕಿ ಇರುವಾಗಲೇ ಮುಂಬೈಗೆ ಗೆಲುವು ತಂದುಕೊಟ್ಟಿದ್ದರು. "ಹೌದು, ನನಗೆ ನಿಸ್ಸಂಶಯವಾಗಿ ಈ ಟೂರ್ನಿ ವಿಚಿತ್ರವಾಗಿ ಗೋಚರಿಸುತ್ತಿದೆ ಹಾಗೂ ವಿರಾಮದ ಬಳಿಕ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡುತ್ತಿದ್ದೇನೆಂದು ನನಗೆ ಅನಿಸುತ್ತಿದೆ. ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯಲು ಇನ್ನೂ ಎರಡು ಪಂದ್ಯಗಳ ಗೆಲುವು ಅನಿವಾರ್ಯತೆ ಇದ್ದಾಗ, ಈ ರೀತಿಯ ಪ್ರದರ್ಶನ ನಿಜಕ್ಕೂ ಸಂತಸ ನೀಡುತ್ತದೆ. ನಮ್ಮ ನಾಕೌಟ್‌ ಹಾದಿ ಸುಗಮವಾಗಲಿದೆ ಎಂಬ ನಿರೀಕ್ಷೆ ನನಗಿದೆ," ಎಂದು ನೀಶಮ್‌ ಹೇಳಿರುವ ವಿಡಿಯೋವನ್ನು ಐಪಿಎಲ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪಂದ್ಯದ ಬಳಿಕ ಮಾತನಾಡಿದ ನೇಥನ್‌ ಕೌಲ್ಟರ್‌ ನೈಲ್, "ನಮ್ಮ ತಂಡದಲ್ಲಿ ರನ್‌ಗಳನ್ನು ಯಾರೇ ಗಳಿಸಿದರೂ ಅದು ಒಳ್ಳೆಯದು. ಕಳೆದ ಹಲವು ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ಇಶಾನ್‌ ಕಿಶನ್‌ ಈ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ತೋರಿರುವುದು ತಂಡದ ಪಾಲಿಗೆ ಉತ್ತಮ ಹಾಗೂ ಇಂಥಾ ವಿಕೆಟ್‌ನಲ್ಲಿ ಈ ರೀತಿಯ ಪ್ರದರ್ಶನ ತೋರಿರುವುದು ತಂಡದ ಬೆಂಚ್‌ ಆಟಗಾರರ ಗುಣಮಟ್ಟವನ್ನು ತೋರಿಸುತ್ತದೆ," ಎಂದು ಹೇಳಿದ್ದಾರೆ. "ಇಶಾನ್‌ ಕಿಶನ್‌ ಬ್ಯಾಟಿಂಗ್‌ ನೋಡಲು ತುಂಬಾ ಖುಷಿಯಾಗುತ್ತಿತ್ತು. ಇದಕ್ಕೂ ಮುನ್ನ ಪ್ರೀ ಸೀಸನ್‌ನಲ್ಲಿಯೂ ಅವರು ಅಂಗಣದ ಎಲ್ಲಾ ಕಡೆಯೂ ಚೆಂಡನ್ನು ಕಳುಹಿಸಿದ್ದರು. ಆದರೆ, ಇಂಥಾ ನಿರ್ಣಾಯಕ ಪಂದ್ಯದಲ್ಲಿ ಅವರು ಪ್ರದರ್ಶನ ತೋರಿರುವುದು ದೊಡ್ಡ ವಿಷಯ," ಎಂದು ಮುಂಬೈ ಇಂಡಿಯನ್ಸ್ ವೇಗಿ ಸಹ ಆಟಗಾರನನ್ನು ಗುಣಗಾನ ಮಾಡಿದ್ದಾರೆ. ಇಶಾನ್‌ ಕಿಶನ್‌ ಬ್ಯಾಟಿಂಗ್‌ ಶ್ಲಾಘಿಸಿದ ಗಂಭೀರ್‌ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಇಶಾನ್‌ ಕಿಶನ್‌ ಅವರನ್ನು ಕಳುಹಿಸಿದ್ದು ಮುಂಬೈ ಇಂಡಿಯನ್ಸ್ ಪಾಲಿಗೆ ನೆರವಾಯಿತು. ಅದರಂತೆ ಇಶಾನ್‌ ಕೇವಲ 25 ಎಸೆತಗಳಲ್ಲಿ 50 ರನ್‌ ಚೆಚ್ಚಿದ್ದರು. ಆ ಮೂಲಕ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್‌ ಗಂಭೀರ್, ಇಶಾನ್‌ ಕಿಶನ್‌ ಉಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅತ್ಯುತ್ತಮ ಸಂಯೋಜನೆ ಸಿಗುತ್ತಿದೆ ಎಂದು ಹೇಳಿದ್ದಾರೆ. "ಇನಿಂಗ್ಸ್ ಆರಂಭಿಸಲು ಸಿಕ್ಕ ಅವಕಾಶವನ್ನು ಇಶಾನ್‌ ಕಿಶನ್‌ ಎರಡೂ ಕೈಗಳಿಂದ ಬಾಚಿ ಅಪ್ಪಿಕೊಂಡರು. ಅಂದಹಾಗೆ ಚೇತನ್‌ ಸಾಕರಿಯ ಅವರಿಗೆ ಇಶಾನ್‌ ಕಿಶನ್‌ ಮೇಡಿನ್‌ ಓವರ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಶಾನ್‌ ಆಕ್ರಮಣಕಾರಿಯಾಗಿ ಆಡಬೇಕೆಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಅದರಂತೆ ಯುವ ಬ್ಯಾಟ್ಸ್‌ಮನ್‌ ಅದ್ಭುತ ಹೊಡೆತಗಳನ್ನು ಆಡಿದರು. ಇದು ಮುಂಬೈ ಬ್ಯಾಟ್ಸ್‌ಮನ್‌ಗೆ ಸಾಕಷ್ಟು ವಿಶ್ವಾಸವನ್ನು ತಂದುಕೊಟ್ಟಿದೆ," ಎಂದು ಗಂಭೀರ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3DfpwIx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...