ಜನರ ಜೇಬಿಗೆ ಕೈ ಹಾಕುವ ಬಿಜೆಪಿಗೆ ಬೈಎಲೆಕ್ಷನ್‌ನಲ್ಲಿ ಜನರು ತಕ್ಕ ಪಾಠ ಕಲಿಸ್ತಾರೆ; ಡಿಕೆಶಿ

ಹುಬ್ಬಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿತ್ಯ ಜನರ ಜೇಬಿಗೆ ಕನ್ನ ಹಾಕುವ ಕೆಲಸ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಆ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ತಮ್ಮ ನೋವು ಹೇಳಿಕೊಳ್ಳಲು ಉಪಚುನಾವಣೆ ಒಂದು ಅವಕಾಶವಾಗಿದೆ. ಮತದಾರರು ಸೂಕ್ತ ಅಭ್ಯರ್ಥಿಗೆ ಮತ ಹಾಕಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಉಪ ಚುನಾವಣೆಯಲ್ಲಿ ಆಡಳಿತ ಯಂತ್ರ ಬಳಸಿಕೊಳ್ಳುವ ಅವಕಾಶ ಇರುತ್ತದೆ. ಅದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಅವರು ಏನೇ ಮಾಡಿದರೂ ಮತದಾರರ ತೀರ್ಪು ಮುಖ್ಯ. ಜನ ತಮ್ಮ ಮತವನ್ನು ಒತ್ತಡ ಸೇರಿದಂತೆ ಮತ್ತಿತರ ವಿಚಾರಕ್ಕೆ ಮಾರಿಕೊಳ್ಳಬಾರದು ಎಂದ ಅವರು, ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು ಅವರ ರಾಜಕೀಯ ತಂತ್ರಗಾರಿಕೆ. ಜೆಡಿಎಸ್‌ನವರು ಕಾಂಗ್ರೆಸ್‌ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? ಬಿಜೆಪಿ ಜತೆ ಒಳ ಒಪ್ಪಂದ ಮಾಡಿದ್ದಾರೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನೀವೇ ವಿಶ್ಲೇಷಣೆ ಮಾಡಿ ಎಂದು ಮಾಧ್ಯಮದವರಿಗೆ ಹೇಳಿದರು. 'ಯಡಿಯೂರಪ್ಪ ಪ್ರಾಮಾಣಿಕರು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿಲ್ಲ' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದರು. ಆದರೆ ಏನಾಯ್ತು, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಲಿಲ್ಲವೇ? ಯತ್ನಾಳ್‌, ಬೆಲ್ಲದ್‌ ಏನು ಹೇಳಿದ್ದರು? ಮತ್ತೆ ಕೆಲವರು ಪರೀಕ್ಷೆ ಪಾಸ್‌ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಬಿಜೆಪಿ ಅವರ ಮಾತು ನಂಬಲು ಸಾಧ್ಯವಿಲ್ಲ. ನಂಬಿಕೆಗೆ ಅರ್ಹವಲ್ಲ ಎಂದರು. ಉತ್ತರ ಕರ್ನಾಟಕದ ಬೊಮ್ಮಾಯಿ ಸಿಎಂ ಆದ ಮೇಲೆ ಮಹದಾಯಿ, ಕಾವೇರಿಯ ಮೇಕೆದಾಟು, ಕೃಷ್ಣಾ ಯೋಜನೆಗೆ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಅವರು ಈ ವಿಚಾರವಾಗಿ ಒಂದು ದಿನವೂ ಉಸಿರೆತ್ತಿಲ್ಲ. 25 ಸಂಸದರನ್ನು ಕರೆದುಕೊಂಡು ಹೋಗಿ ಪ್ರಧಾನಮಂತ್ರಿಗಳ ಮುಂದೆ ಕೂರಿಸಿ, ನಮ್ಮ ಯೋಜನೆಗಳಿಗೆ ಅನುಮತಿ ನೀಡಿ ಎಂದು ಪಟ್ಟು ಹಿಡಿಯಲಿ ಎಂದು ಸವಾಲು ಎಸೆದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಹ ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ಕೋರ್ಟಿನಲ್ಲಿ ನಮ್ಮ ರಾಜ್ಯದ ಪರ ತೀರ್ಪು ಬಂದಿದ್ದರೂ ಯೋಜನೆಗೆ ತಡ ಯಾಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಇವನ್ನೆಲ್ಲ ನೋಡಿದರೆ, ರಾಜ್ಯ ಬಿಜೆಪಿ ಸರಕಾರದಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದರು.


from India & World News in Kannada | VK Polls https://ift.tt/3myt2Hj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...