ಬಿಜೆಪಿಗೆ ಪ್ರಾದೇಶಿಕ ಪಕ್ಷಗಳೇ ಎದುರಾಳಿ, ದೇಶದಲ್ಲಿಈಗ ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ - ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್‌ ಸದ್ಯ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ದೇಶದಲ್ಲಿ ಆ ಪಕ್ಷಕ್ಕೆ ಭವಿಷ್ಯವಿಲ್ಲ. ಮುಂದೆ ಪ್ರಾದೇಶಿಕ ಪಕ್ಷಗಳೇ ಬಿಜೆಪಿಗೆ ಎದುರಾಳಿಗಳಾಗಲಿವೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಕಚೇರಿ 'ಜೆ.ಪಿ. ಭವನ'ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,''ಕಾಂಗ್ರೆಸ್‌ನ ಈಗಿನ ಸ್ಥಿತಿ ಗಮನಿಸಿದರೆ ಬಿಜೆಪಿಯನ್ನು ಎದುರಿಸುವ ಶಕ್ತಿ ಪಡೆಯುವುದು ಕಷ್ಟ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆಯೇ ಸ್ಪರ್ಧೆ,'' ಎಂದು ಭವಿಷ್ಯ ನುಡಿದರು. ''ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ. ಕರ್ನಾಟಕದಲ್ಲಿ ಒಂದಿಷ್ಟು ಶಕ್ತಿಯಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಿಗೆ ಏನಾಗುವುದೋ ನೋಡೋಣ. ನಮ್ಮ ಮನೆಗೆ ಬೆಂಕಿ ಹಾಕುವುದಾಗಿ ಕೆಲವರು ಹೇಳುತ್ತಿದ್ದು, ಮುಂದೆ ಅವರ ಬುಡಕ್ಕೆ ಬೆಂಕಿ ಇಟ್ಟುಕೊಳ್ಳುತ್ತಾರೋ ಏನೋ? ಒಕ್ಕಲಿಗ ಶಾಸಕರು, ಮುಖಂಡರನ್ನು ಸೆಳೆದರೆ ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲಾಗದು. ಈಗಲೂ ಜನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪರವಾಗಿದ್ದಾರೆ,'' ಎಂದು ಹೇಳಿದರು. ''ಜೆಡಿಎಸ್‌ನ ಏಳು ಮಂದಿಯನ್ನು ಕರೆದೊಯ್ದ ಪಕ್ಷದ ಸ್ಥಿತಿ ಇಂದು ಏನಾಗಿದೆ. 122 ಸ್ಥಾನದಿಂದ 78ಕ್ಕೆ ಕುಸಿಯಿತು. ಈಗಲೂ ಅದೇ ಪ್ರಯತ್ನ ಮುಂದುವರಿಸಿದರೆ ಮುಂದೆ 38- 40 ಸ್ಥಾನಕ್ಕೆ ಕುಸಿಯಬಹುದು,'' ಎಂದು ಎಚ್ಚರಿಕೆ ನೀಡಿದರು. ಶಾಕ್‌ ಇಲ್ಲ ''ಕೆಲವರು ಪಕ್ಷ ತೊರೆಯುತ್ತಿರುವುದರಿಂದ ಶಾಕ್‌ ಆಗಿಲ್ಲ. ಏಕೆಂದರೆ ಮೈಸೂರಿನ ಎಂಎಲ್‌ಸಿ ಸೇರಿದಂತೆ ಇತರರು ಪಕ್ಷ ಬಲವರ್ಧನೆಗೆ ಶ್ರಮಿಸಿದವರಲ್ಲ. ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ, ಕೆ.ಆರ್‌. ರಮೇಶ್‌ ಕುಮಾರ್‌, ಆರ್‌.ವಿ. ದೇಶಪಾಂಡೆ, ಎಚ್‌.ಸಿ. ಮಹದೇವಪ್ಪ, ಅಮರೇಗೌಡ ಬಯ್ಯಾಪುರ, ಬಿ.ಎಲ್‌. ಶಂಕರ್‌ ಎಲ್ಲಿದ್ದರು? ಹಲವು ಹಿರಿಯರು ತೊರೆದರೂ ಪಕ್ಷಕ್ಕೆ ಯಾವುದೇ ಪರಿಣಾಮ ಉಂಟಾಗಿಲ್ಲ. ಅಧಿಕಾರದ ತೆವಲಿಗೆ ಪಕ್ಷ ಬಿಟ್ಟವರೇ ಹೆಚ್ಚು,'' ಎಂದು ಹೇಳಿದರು. ''ಸಿದ್ದರಾಮಯ್ಯ, ಪಿ.ಜಿ.ಆರ್‌. ಸಿಂಧ್ಯ, ಎಂ.ಪಿ. ಪ್ರಕಾಶ್‌ ಇದ್ದಾಗಲೂ ಪಕ್ಷ ಗೆದ್ದಿದ್ದು 58 ಸ್ಥಾನ. ಸುಮಾರು ಶೇ. 19ರಷ್ಟು ಮತ ಗಳಿಕೆ ಪ್ರಮಾಣ ಈಗಲೂ ಇದೆ. ಪಕ್ಷ ನಿಂತಿರುವುದು ಕಾರ್ಯಕರ್ತರ ಮೇಲೆಯೇ ಹೊರತು ನಾಯಕರ ಮೇಲಲ್ಲ. ಕಳೆದ ಚುನಾವಣೆಯಲ್ಲಿ 38 ಸ್ಥಾನ ಗಳಿಸಿದ ನಮಗೆ 123 ಗೆಲುವುದು ಅಸಾಧ್ಯವೇನಲ್ಲ,'' ಎಂದು ತಿರುಗೇಟು ನೀಡಿದರು. ಯಾರ ಕಿಸೆ ತುಂಬಿಸಿದ್ದೀರಿ? ''ರಾಜ್ಯದ ಖಜಾನೆ ಖಾಲಿಯಾಗಿದ್ದು, ನಾನು ಸಿಎಂ ಆಗಿದ್ದಾಗ ಖಜಾನೆ ಭರ್ತಿ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ನಾವು ಅನ್ಯಾಯ ಮಾಡಿದ್ದೇವೆ ಎನ್ನುತ್ತಿದ್ದಾರೆ. ನಿಮ್ಮ ಯೋಗ್ಯತೆಗೆ ಎತ್ತಿನ ಹೊಳೆ ಯೋಜನೆಯಲ್ಲಿ ಯಾರ ಕಿಸೆ ತುಂಬಿಸಿದ್ದೀರಿ. ಯೋಜನೆಯ ಡಿಪಿಆರ್‌ ಅನ್ನು ನಿಮ್ಮ ತೆವಲಿಗೆ ಬೇಕಾದಂತೆ ಬದಲಾವಣೆ ಮಾಡುತ್ತೀರಾ?'' ಎಂದು ತರಾಟೆಗೆ ತೆಗೆದುಕೊಂಡರು. ''ರೈತರಿಗೆ ಭೂಮಿ ಪರಿಹಾರ ನೀಡಲು ಇವರ ಬಳಿ ಹಣವಿಲ್ಲ. ಆದರೆ ಗುತ್ತಿಗೆದಾರರಿಗೆ ನೀಡಲು ಹಣವಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ 3 ವರ್ಷದಲ್ಲಿ ನೀರು ಕೊಡುವುದಾಗಿ ಹೇಳಿ 7 ವರ್ಷ ಕಳೆದಿದೆ. ನೀವು ಗುತ್ತಿಗೆ ಪಡೆದಿರುವುದು ರಾಜ್ಯವನ್ನು ಅಭಿವೃದ್ಧಿಪಡಿಸುವುದಕ್ಕಲ್ಲ, ಯಾರದ್ದೋ ಜೇಬು ತುಂಬಿಸಲು ಗುತ್ತಿಗೆ ಪಡೆದಿದ್ದು," ಎಂದು ಕಿಡಿ ಕಾರಿದರು. ''ಪದೇ ಪದೇ 10 ಕೆ.ಜಿ. ಅಕ್ಕಿ ಕೊಡುವುದಾಗಿ ಅವರು ಹೇಳುತ್ತಾರೆ. ಆ ಮೂಲಕ ಎಷ್ಟು ದಿನ ಭಿಕ್ಷುಕರನ್ನು ಸೃಷ್ಟಿಸುತ್ತೀರಿ? ಅಧಿಕಾರ ನಡೆಸುವುದು ಜನರನ್ನು ಸಬಲರನ್ನಾಗಿ ಮಾಡುವುದಕ್ಕೋ ಅಥವಾ ಭಿಕ್ಷುಕರನ್ನಾಗಿ ಮಾಡುವುದಕ್ಕೋ," ಎಂದು ಹೇಳಿದರು. ಮಾಜಿ ಎಂಎಲ್‌ಸಿ ಟಿ.ಎ. ಶರವಣ, ಮುಖಂಡರಾದ ಜಫ್ರುಲ್ಲಾ ಖಾನ್‌, ಜೆಡಿಎಸ್‌ ಬೆಂಗಳೂರು ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3D4HEVx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...