
ಆರ್.ಶ್ರೀಧರ್ ರಾಮನಗರ: ಮುಂದಿನ ಬೇಸಿಗೆಯಲ್ಲಿ ಮಾತ್ರವಲ್ಲ, ಕೆಲವೇ ದಿನಗಳಲ್ಲಿ ಜನರಿಗೆ ಹನಿ ನೀರಿಗೂ ಪರದಾಟ ಉಂಟಾಗಲಿದೆ. ಇದಕ್ಕೆ ಸರಕಾರಿ ಜಾಗಗಳಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳೇ ಕಾರಣ ಎನ್ನಬಹುದು. ಇನ್ನೂ ವಿಶೇಷವೆಂದರೆ ಈ ಶುದ್ದ ಕುಡಿವ ನೀರಿನ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವವರು ಯಾರು ಎಂಬ ಯಕ್ಷ ಪ್ರಶ್ನೆಯೂ ಉದ್ಭವವಾಗಿದೆ. ಕುಡಿವ ನೀರಿನ ಘಟಕದ ಹೆಸರಿನಲ್ಲಿ ನಡೆಯುತ್ತಿದ್ದ ಬೃಹತ್ ಅವ್ಯವಹಾರ ಬೆಳಕಿಗೆ ಬಂದಿದ್ದು ಬೆಸ್ಕಾಂ ಕೈಗೊಂಡಿರುವ ಕ್ರಮದಿಂದ. ಅಕ್ರಮ ವಿದ್ಯುತ್ ಸಂಪರ್ಕ ನಗರದೆಲ್ಲೆಡೆ ನಿರ್ಮಾಣಗೊಂಡಿರುವ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪಡೆದಿರುವ ವಿದ್ಯುತ್ ಸಂಪರ್ಕವೇ ಅಕ್ರಮ. ಇನ್ನು ಇವುಗಳ ವಿದ್ಯುತ್ ಶುಲ್ಕ ಪಾವತಿಸುವ ಮಾತು ಎಲ್ಲಿಂದ ಬಂತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ, ಕುಡಿವ ನೀರಿನ ಘಟಕಗಳ ಅಕ್ರಮ ವಿದ್ಯುತ್ ಸಂಪರ್ಕವನ್ನು ಮುಲಾಜಿಲ್ಲದೇ ಕಡಿತಗೊಳಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ ಎರಡು ದಿನಗಳಿಂದ ನಾಲ್ಕೈದು ಬಡಾವಣೆಗಳಲ್ಲಿನ ಕುಡಿವ ನೀರಿನ ಘಟಕಗಳ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ. ಫುಡಾರಿಗಳ ಕರಾಮತ್ತುರಾಮನಗರ ಟೌನ್ನಲ್ಲಿರುವ 60ಕ್ಕೂ ಹೆಚ್ಚು ಕುಡಿವ ನೀರಿನ ಘಟಕಗಳ ಪೈಕಿ ಹೆಚ್ಚಿನವುಗಳನ್ನು ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಸಂಸತ್ ಸದಸ್ಯರ ಅನುದಾನದಲ್ಲಿ ನಿರ್ಮಿಸಲಾಗಿದೆ. ಉಳಿದವುಗಳನ್ನು ಸ್ಥಳೀಯ ಶಾಸಕರ ಅನುದಾನ, ಬಮೂಲ್, ಟೊಯೋಟಾ ಕಂಪನಿಗಳ ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗಿದೆ. ಸರಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಘಟಕಗಳ ನಿರ್ವಹಣೆ ಹೊಣೆಯನ್ನು ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಒಪ್ಪಿಸಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರೇ ಇವುಗಳನ್ನು ನಿರ್ವಹಿಸುತ್ತಿದ್ದಾರೆ. ಖಾಸಗಿ ಕಂಪನಿಗಳ ಸ್ಥಾಪಿಸಿಕೊಟ್ಟಿರುವ ಘಟಕಗಳನ್ನು ಆಯಾಯಾ ವಾರ್ಡ್ಗಳ ಪ್ರಭಾವಿಗಳು ಅನಧಿಕೃತವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ದುಡ್ಡು ದೋಚುತ್ತಿದ್ದಾರೆ ಈ ಘಟಕಗಳಲ್ಲಿ 20 ಲೀಟರ್ ನೀರಿಗೆ 5 ರೂ. ದರ ನಿಗದಿಪಡಿಸಲಾಗಿದೆ. ಇದರಿಂದ ಪ್ರತಿ ತಿಂಗಳೂ 20ರಿಂದ 25 ಸಾವಿರರೂ. ಆದಾಯ ಬರುತ್ತಿದ್ದು, ಅದನ್ನು ಮರಿ ಫುಡಾರಿಗಳ ಜೇಬಿಗಿಳಿಸುತ್ತಿದ್ದಾರೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೂಡ ಘಟಕಕ್ಕೂ ತನಗೂ ಏನೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಆದರೆ, ಪ್ರಭಾವಿಗಳಿಗೆ ಮಣಿದು ನೀರು ಪೂರೈಕೆ ಮಾಡುತ್ತಿದೆ. ಯಾರಿಗೂ ಗೊತ್ತಿಲ್ಲ 60 ಘಟಕಗಳಿಂದ ಬರುತ್ತಿರುವ ಆದಾಯ ಯಾರಿಗೆ ಸೇರುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತಿ ತಿಂಗಳೂ ಹಣವನ್ನು ಜೇಬಿಗಿಳಿಸಿಕೊಳ್ಳುವವರು, ಘಟಕದ ನಿರ್ವಹಣೆ ಹೊಣೆಯನ್ನು ಹೊತ್ತುಕೊಂಡಿಲ್ಲ. ನೀರಿನ ಬಿಲ್, ವಿದ್ಯುತ್ ಶುಲ್ಕ ಪಾವತಿಸಿಲ್ಲ. ಸರಕಾರಕ್ಕೆ ಹೊರೆ ಕುಡಿಯುವ ನೀರು ಹಾಗೂ ವಿದ್ಯುತ್ ಪುಕ್ಕಟೆಯಾಗಿ ಪೂರೈಕೆಯಾಗುತ್ತಿರುವುದರಿಂದ ಸರಕಾರಕ್ಕೆ ಲಕ್ಷಾಂತರ ರೂ.ನಷ್ಟವಾಗುತ್ತಿದೆ. ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳೂ ಹಿಂಜರಿಯುವಂತಾಗಿದೆ. ಗಟ್ಟಿ ನಿರ್ಧಾರಕ್ಕೆ ಬಂದ ಬೆಸ್ಕಾಂ ಲಕ್ಷಾಂತರ ರೂ. ವಿದ್ಯುತ್ ಶುಲ್ಕ ಬಾಕಿಯಿಂದ ಸಿಡಿದೆದ್ದಿರುವ ಬೆಸ್ಕಾಂ ಅಧಿಕಾರಿಗಳು ಈಗ, ಕುಡಿವ ನೀರಿನ ಘಟಕಗಳು ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದಾರೆ. ಕೆಲವು ಘಟಕಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಜನರಿಗೆ ತೊಂದರೆ ಒಟ್ಟಿನಲ್ಲಿ ಬೆಸ್ಕಾಂ ಕ್ರಮದಿಂದ ತೊಂದರೆ ಅನುಭವಿಸುವವರು ಮಾತ್ರ ಯಾವುದೇ ತಪ್ಪು ಮಾಡದ ನಗರದ ನಿವಾಸಿಗಳು. ಬೋರ್ವೆಲ್ ನೀರು ಕುಡಿಯಲು ಯೋಗ್ಯವಲ್ಲ. ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಶೇ.90ರಷ್ಟು ನಿವಾಸಿಗಳು ಕುಡಿಯಲು ಆರ್ಒ ಪ್ಲ್ಯಾಂಟ್ಗಳ ನೀರನ್ನೇ ಅವಲಂಭಿಸಿದ್ದಾರೆ. ಒಂದೊಮ್ಮೆ ವಿದ್ಯುತ್ ಸಂಪರ್ಕ ಕಡಿತಗೊಂಡು ಇವು ಬಂದ್ ಆದರೆ ತೊಂದರೆ ಅನುಭವಿಸುವವರು ಬಡಪಾಯಿ ಜನರು. ಜಿಲ್ಲಾಡಳಿತ ತುರ್ತು ಗಮನ ಹರಿಸಬೇಕುಅಕ್ರಮದ ವಿರುದ್ಧ ಬೆಸ್ಕಾಂ ಸಾರಿರುವ ಸಮರದಲ್ಲಿ ಜಿಲ್ಲಾಡಳಿತ ಕೈಜೋಡಿಸಬೇಕು. ಜೊತೆಗೆ ಈ ಎಲ್ಲಾ ಶುದ್ದ ಕುಡಿವ ನೀರಿನ ಘಟಕಗಳನ್ನೂ ಸಕ್ರಮಗೊಳಿಸಿ, ಅದನ್ನು ನಿರ್ವಹಣೆಯನ್ನು ಜವಾಬ್ದಾರಿ ಇರುವವರಿಗೆ ಒಪ್ಪಿಸಿ, ಜನರಿಗೆ ನೀರಿನ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಸರಕಾರದ ಖಜಾನೆಗೆ ಆಗುತ್ತಿರುವ ನಷ್ಟವನ್ನೂ ತಪ್ಪಿಸಬೇಕಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ವ್ಯಕ್ತಿಗಳು ನೀರಿಗೆ ಹಣ ಪಡೆಯುತ್ತಾರೆ. ಆದರೆ, ಘಟಕಕ್ಕೆ ಬಳಸಿದ ವಿದ್ಯುತ್ಗೆ ಬಿಲ್ ಕಟ್ಟಲು ತಯಾರಿಲ್ಲ. ಎಷ್ಟು ವಿದ್ಯುತ್ ಪೂರೈಕೆ ಆಗುತ್ತಿದೆ, ಎಷ್ಟು ಹಣ ಸಂಗ್ರಹವಾಗುತ್ತಿದೆ ಎಂಬುದರ ಲೆಕ್ಕ ಸಿಗುತ್ತಿಲ್ಲ. ಹೆಸರೇಳಲು ಇಚ್ಚಿಸದ ಬೆಸ್ಕಾಂ ಅಧಿಕಾರಿ
from India & World News in Kannada | VK Polls https://ift.tt/3l1kbOG