ತನ್ನ ಶಿಷ್ಯ ಕೊಹ್ಲಿ ನಾಯಕತ್ವಕ್ಕೆ ಬೆಂಕಿ ಇಟ್ಟಿದ್ದೇ ರವಿಶಾಸ್ತ್ರಿ? ಅಸಲಿ ಕಾರಣ ಇಲ್ಲಿದೆ...

ಹೊಸದಿಲ್ಲಿ: ಭಾರತ ಓಡಿಐ ಹಾಗೂ ಟಿ20 ತಂಡದ ನಾಯಕತ್ವವನ್ನು ತ್ಯಜಿಸುವಂತೆ ವಿರಾಟ್‌ ಕೊಹ್ಲಿಗೆ ಹೆಡ್‌ ಕೋಚ್‌ ಕಳೆದ ಆರು ತಿಂಗಳ ಹಿಂದೆಯೇ ಸಲಹೆ ನೀಡಿದ್ದರು ಎಂಬ ಅಂಶ ಇದೀಗ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಶಾಸ್ತ್ರಿ ಅವರ ಮಾತನ್ನು ಕೊಹ್ಲಿ ಕೇಳಿರಲಿಲ್ಲ ಎಂಬ ಅಂಶ ಕೂಡ ಇದೀಗ ಬೆಳಕಿಗೆ ಬಂದಿದೆ. ನಾಯಕತ್ವದ ಒತ್ತಡದಿಂದ ಹೊರಬಂದು ಬ್ಯಾಟಿಂಗ್‌ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕೆಂಬುದು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರವಿಶಾಸ್ತ್ರಿ ಅವರ ಮುಖ್ಯ ಉದ್ದೇಶ. ಅದರಂತೆ ತಡವಾಗಿ ಈ ಬಗ್ಗೆ ಮನವರಿಕೆ ಮಾಡಿಕೊಂಡಿರುವ ವಿರಾಟ್‌ ಕೊಹ್ಲಿ, 2021ರ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಭಾರತ ಚುಟುಕು ತಂಡದ ನಾಯಕತ್ವದಿಂದ ಕೆಳಗೆ ಇಳಿಯುವ ಬಗ್ಗೆ ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಿಂದ ಕೆಳಗೆ ಇಳಿದ ಬಳಿಕ ವಿರಾಟ್‌ ಕೊಹ್ಲಿ 2017ರಿಂದ ಟೀಮ್‌ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ ವಿರುದ್ಧ 2016ರ ಐಸಿಸಿ ಟಿ20 ವಿಶ್ವಕಪ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು ಹಾಗೂ ಸೋಲು ಅನುಭವಿಸಿದ್ದರು. ಕಳೆದ ಡಿಸೆಂಬರ್‌-ಜನವರಿ ಅವಧಿಯಲ್ಲಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ಟೆಸ್ಟ್‌ ತಂಡ 2-1 ಅಂತರದಲ್ಲಿ ಆಸ್ಟ್ರೇಲಿಯಾದಲ್ಲಿ ಸತತ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಗೆದ್ದಿತ್ತು. ಈ ವೇಳೆ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಹಲವು ಕ್ರಿಕೆಟ್‌ ಪಂಡಿತರು ಚರ್ಚೆ ನಡೆಸಿದ್ದರು. ಭಾರತ ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವದಿಂದ ಕೆಳಗೆ ಇಳಿಯುವಂತೆ ಕಳೆದ ಆರು ತಿಂಗಳ ಹಿಂದೆಯೇ ರವಿ ಶಾಸ್ತ್ರಿ ಅವರು ವಿರಾಟ್‌ ಕೊಹ್ಲಿಗೆ ತಿಳಿಸಿದ್ದರು . ಇದರ ಹೊರತಾಗಿಯೂ ಕೊಹ್ಲಿ ಭಾರತ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದು ಇದೀಗ ವರದಿಯಾಗಿದೆ. "ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಅಷ್ಟೇ ಅಲ್ಲದೆ, 2023ರ ಏಕದಿನ ವಿಶ್ವಕಪ್‌ಗೂ ಮುನ್ನ ಯೋಜನೆಗೆ ತಕ್ಕಂತೆ ತಂಡದ ಪ್ರದರ್ಶನ ಮೂಡಿ ಬಂದಿಲ್ಲವಾದರೆ ಕೊಹ್ಲಿಯ ಓಡಿಐ ನಾಯಕತ್ವಕ್ಕೂ ಕುತ್ತು ಬರಲಿದೆ," ಎಂದು ಅಧಿಕಾರಿಯೊಬ್ಬರು ಮುನ್ಸೂಚನೆ ನೀಡಿದ್ದಾರೆ. "ಕಳೆದ ಆರು ತಿಂಗಳ ಹಿಂದೆ ವಿರಾಟ್‌ ಕೊಹ್ಲಿಗೆ ಹೆಡ್‌ ಕೋಚ್‌ ರವಿಶಾಸ್ತ್ರಿ ಈ ಬಗ್ಗೆ ಹೇಳಿದ್ದರು. ಆದರೆ, ಕೊಹ್ಲಿ, ಶಾಸ್ತ್ರಿ ಮಾತನ್ನು ಕೇಳಿರಲಿಲ್ಲ. ಆದರೆ, ಈ ಕಾರಣದಿಂದಲೇ ವಿರಾಟ್‌ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ. ವಿರಾಟ್‌ ಕೊಹ್ಲಿಯನ್ನು ಬ್ಯಾಟ್ಸ್‌ಮನ್‌ ಆಗಿ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂಬ ಬಗ್ಗೆಯೂ ಬಿಸಿಸಿಐ ಚರ್ಚೆ ನಡೆಸಿದೆ," ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ವಿರಾಟ್‌ ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದು ಕೂಡ ಟಿ20 ತಂಡದ ನಾಯಕತ್ವದಿಂದ ಕೆಳಗೆ ಇಳಿಯಲು ಕಾರಣ ಎಂದೇ ಹಳಬಹುದು. ಅಲ್ಲದೆ, 2021ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನೂ ತ್ಯಜಿಸುವುದಾಗಿ ವಿರಾಟ್‌ ಕಳೆದ ವಾರ ಘೋಷಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3u2DoCw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...