ವಾಡಿಕೆಗಿಂತ ಹೆಚ್ಚಿನ ಮಳೆ: ರಾಯಚೂರಿನಲ್ಲಿ ಮುಂಗಾರು ಬೆಳೆಗಳು ಸಮೃದ್ಧ!

ಪ್ರಭಾಕರ್‌ ಹುಡೇದ್‌ ರಾಯಚೂರು: ಜಿಲ್ಲಾದ್ಯಂತ ವಾಡಿಕೆಗಿಂತಲೂ ಹೆಚ್ಚು ಸುರಿದಿದ್ದರಿಂದ 1.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, ತೊಗರಿ ಬೆಳೆ ಸಮೃದ್ಧವಾಗಿ ಬೆಳೆದ ಪರಿಣಾಮ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಸಕ್ತ ವರ್ಷ ವಾಡಿಕೆಗಿಂತಲೂ ಮಳೆ ಸುರಿದ ಪರಿಣಾಮ ಮುಂಗಾರಿನ ಬೆಳೆಗಳು ಕಂಗೊಳಿಸುತ್ತಿವೆ. ಮಾರಾಟ ಸಂದರ್ಭದಲ್ಲಿ ಬೆಳೆಗಳಿಗೆ ಉತ್ತಮ ಬೆಲೆಯಿದ್ದರೆ, ರೈತರಿಗೆ ಲಾಭ ತಂದುಕೊಡುವುದರಲ್ಲಿ ಅನುಮಾನವಿಲ್ಲ. ಮುಂಗಾರು ಹಂಗಾಮಿಗೆ ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬಿತ್ತಿದ ತೊಗರಿ, ಹತ್ತಿ ಕಂಗೊಳಿಸುತ್ತಿದೆ. ಬೆಳೆಗಳಿಗೆ ಯಾವಾಗ ಅಗತ್ಯವೋ ಆಗ ಮಿತವಾದ ಮತ್ತು ಸಮೃದ್ಧ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆಯುತ್ತಿವೆ. ಮಳೆಯಾಶ್ರಿತ ಪ್ರದೇಶದ ಹತ್ತಿ ಮತ್ತು ತೊಗರಿ ಬೆಳೆ ರಾರಾಜಿಸುತ್ತಿದೆ. ನೀರಾವರಿ ಆಶ್ರಿತ ಬೆಳೆಗಳು ಉಲುಸಾಗಿ ಬೆಳೆದಿವೆ. ಕುಂಟೆ ಹೊಡೆಯಲು, ಕಳೆ ತೆಗೆಯಲು, ರಸಗೊಬ್ಬರ ನೀಡಲು ಕೀಟನಾಶಕ ಸಿಂಪರಣೆ ಮಾಡಲು ಮಳೆರಾಯ ಸಮಯಾವಕಾಶ ನೀಡಿ ಪುನಃ ಹಿತಮಿತವಾಗಿ ಸುರಿಯುತ್ತಿರುವುದು ಬೆಳೆಗಳು ಮನುಷ್ಯನೆತ್ತರಕ್ಕೆ ಬೆಳೆಯಲು ಸಾಧ್ಯವಾಗಿವೆ. ವಾಡಿಕೆಗಿಂತ ಹೆಚ್ಚು ಮಳೆಪ್ರಸ್ತುತ ಮುಂಗಾರಿನ ಜೂನ್‌ ತಿಂಗಳಿಂದ ಸೆಪ್ಟಂಬರ್‌ 16ರವರೆಗೆ ಜಿಲ್ಲೆಯಲ್ಲಿ 355 ಮಿ.ಮೀ ಮಳೆ ನಿರೀಕ್ಷಿಸಿತ್ತು. ಆದರೆ 362 ಮಿ.ಮೀ ಮಳೆ ಸುರಿದು ಮಳೆ ಕೊರತೆ ದೂರ ಮಾಡಿದೆ. ಜೂನ್‌ ನಿಂದ ಸೆಪ್ಟಂಬರ್‌ 16ರವರೆಗೆ ದೇವದುರ್ಗದಲ್ಲಿ 335 ಮಿ.ಮೀ, ಲಿಂಗಸ್ಗೂರಿನಲ್ಲಿ 358 ಮಿ.ಮೀ, ಮಾನ್ವಿಯಲ್ಲಿ 393 ಮಿ.ಮೀ, ರಾಯಚೂರಿನಲ್ಲಿ 370 ಮಿ.ಮೀ, ಸಿಂಧನೂರು 365 ಮಿ.ಮೀ, ಮಸ್ಕಿಯಲ್ಲಿ 390 ಮಿ.ಮೀ, 327 ಮಿ.ಮೀ ಮಳೆ ಸುರಿದಿದೆ. ದೇವದುರ್ಗ, ರಾಯಚೂರಿನಲ್ಲಿ ವಾಡಿಕೆಗಿಂತ ಶೇ.15ರಷ್ಟು ಮಳೆ ಕಡಿಮೆ ಬಿದ್ದಿರುವುದು ಹೊರತುಪಡಿಸಿ ಬೇರೆಲ್ಲ ಕಡೆ ಸಮೃದ್ಧ ಮಳೆ ಬಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಇಳುವರಿ ಹೆಚ್ಚಳ ನಿರೀಕ್ಷೆ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಸಂಪದ್ಭರಿತವಾಗಿದ್ದು, ಇಳುವರಿ ಹೆಚ್ಚಳವಾಗುವ ಸಾಧ್ಯತೆಯಿದೆ. ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಉಂಟಾಗದಿದ್ದರೆ ಮುಂಗಾರು ಬೆಳೆಗಳು ನಾಶವಾಗದಂತೆ ಪಾರಾಗಲಿವೆ. ಇಳುವರಿ ಹೆಚ್ಚಳದ ಜತೆಗೆ ಉತ್ಪನ್ನ ಮಾರುಕಟ್ಟೆಗೆ ತಂದ ಸಂದರ್ಭದಲ್ಲಿ ಹತ್ತಿ ಮತ್ತು ತೊಗರಿಗೆ ಆಕರ್ಷಕ ಬೆಲೆಯಿದ್ದರೆ ರೈತರು ನಷ್ಟ ಭೀತಿಯಿಂದ ದೂರ ಉಳಿಯಲಿದ್ದಾರೆ. ಉತ್ತಮ ಬೆಳೆಗಳಿಂದ ರೈತರು ಉಲ್ಲಾಸ ವ್ಯಕ್ತಪಡಿಸಿದ್ದಾರೆ. ಸಂಭ್ರಮದಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಕೂಲಿ ಕಾರ್ಮಿಕರಿಗೂ ಭರ್ಜರಿ ಕೆಲಸ ದೊರಕಿದೆ. ಖರ್ಚು ದುಬಾರಿ ಎಂಬುದನ್ನು ಹೊರತುಪಡಿಸಿ, ಈ ಬಾರಿ ಬೆಳೆಗಳು ರೈತರ ಕೈಹಿಡಿಯುವ ಲಕ್ಷಣಗಳು ಗೋಚರಿಸಿವೆ. 1.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ರಾಯಚೂರು ಜಿಲ್ಲಾದ್ಯಂತ ಪ್ರಸ್ತುತ ಸಾಲಿಗೆ 99, 226 ಹೆಕ್ಟೇರ್‌ ಪ್ರದೇಶದಲ್ಲಿನ ಹತ್ತಿ ಹಾಗೂ 80976 ಹೆಕ್ಟೇರ್‌ ಪ್ರದೇಶದಲ್ಲಿನ ತೊಗರಿ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ ಅತಿವೃಷ್ಟಿ ಉಂಟಾಗಿ ನೀರಾವರಿ ಆಶ್ರಿತ ಪ್ರದೇಶದಲ್ಲಿನ ಹತ್ತಿ ಬೆಳೆ ನಾಶವಾಗಿತ್ತು. ಮಳೆಯಾಶ್ರಿತ ಪ್ರದೇಶದಲ್ಲಿನ ತೊಗರಿ ಬೆಳೆ ಕೂಡ ಮಳೆ ಅಭಾವ ಮತ್ತು ಅತಿವೃಷ್ಟಿಗೆ ಒಳಗಾಗಿ ಪೆಟ್ಟು ತಿಂದಿತ್ತು. ಅದರ ಪರಿಣಾಮ ಇಳುವರಿ ಕುಸಿತಗೊಂಡು ರೈತರು ನಷ್ಟ ಅನುಭವಿಸಬೇಕಾಯಿತು. ಆದರೆ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆ ಸುರಿದು ಬೆಳೆಗಳು ಸಮೃದ್ಧವಾಗಿವೆ. ಮೂರ್ನಾಲ್ಕು ವರ್ಷದಲ್ಲೇ ಈ ಬಾರಿ ಉತ್ತಮ ಬೆಳೆ ಬಂದಿದೆ. ಈ ಬಾರಿ ಬೆಳೆಗಳಿಗೆ ಮಳೆ ಬೇಕು ಅಂದಾಗಲೆಲ್ಲ ಮಳೆ ಬಿದ್ದಿದೆ. ಕಳೆ ನಿರ್ವಹಣೆ, ಔಷಧ ಸಿಂಪಡಣೆಗೆ, ರಸಗೊಬ್ಬರ ಕೊಡಲು ಸಮಯಾವಕಾಶ ನೀಡಿ ಕಾಲಕಾಲಕ್ಕೆ ಉತ್ತಮ ಮಳೆ ಬಿದ್ದ ಪರಿಣಾಮ ಬೆಳೆಗಳು ಸಮೃದ್ಧವಾಗಿದೆ. ಪ್ರಸಕ್ತ ವರ್ಷ ಹತ್ತಿ ಮತ್ತು ತೊಗರಿಗೆ ಆಕರ್ಷಕ ದರ ನಿಗದಿಪಡಿಸಬೇಕು. ಲಕ್ಷ್ಮಣ, ರೈತ ರಾಯಚೂರು


from India & World News in Kannada | VK Polls https://ift.tt/3CDZkqS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...