ಬೆಂಗಳೂರು: 'ನಿಮ್ಮ ಪಕ್ಷ ಏಕೆ ಹೀಗಾಗಿದೆ?' ಎಂದು ಸದಸ್ಯರ ಮೇಲೆ ಸ್ಪೀಕರ್ ಗರಂ ಆದ ಪ್ರಸಂಗ ಗುರುವಾರ ಅಧಿವೇಶನದ ವೇಳೆ ನಡೆಯಿತು. ಶೂನ್ಯವೇಳೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ , 2021-22ರ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅತ್ಯಂತ ಹಿಂದುಳಿದ ತಾಲೂಕಿಗೆ ಅವುಗಳ ಸೂಚ್ಯಂಕ ಪ್ರಕಾರ ಅನುಪಾತ ಕಳಿಸಿಕೊಟ್ಟು, ಯಾವ ರೀತಿ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎಂದಿದೆ. 979 ಕೋಟಿ ರೂ. ಗೆ ಜನಸಂಪನ್ಮೂಲ ಇಲಾಖೆಯಿಂದ ವಿವಿಧ ವಿಭಾಗಗಳಿಗೆ ಹಂಚಿಕೆಯಾಗಿದೆ. ನಂಜುಂಡಪ್ಪ ವರದಿ ಆಧಾರದಲ್ಲಿ ಆಗಿರುವ ತಾಲ್ಲೂಕುವಾರು ಇಂಡೆಕ್ಸ್ ಆಗಿದೆ. ಆದರೆ ಆಯಾ ತಾಲೂಕಿಗೆ ಕೊಟ್ಟ ಹಂಚಿಕೆಯಾದ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆ ಅಧಿಕಾರ ಕೊಟ್ಟವರು ಯಾರು? ಹಿಂದುಳಿದವಲ್ಲದ ತಾಲೂಕಿಗೆ ಅನುದಾನ ಹಂಚಿಕೆ ಕೊಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಗದ್ದಲ ಉಂಟುಮಾಡಿದರು. ಇದಕ್ಕೆ ಗರಂ ಸ್ಪೀಕರ್ ಕಾಗೇರಿ, ನಿಮಗೆ ಯಾರು ಶಿಸ್ತು ಕಲಿಸುವವರು? ನಿಮ್ಮ ಪಕ್ಷ ಯಾಕೆ ಹೀಗಾಗಿದೆ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರನ್ನು ಪ್ರಶ್ನಿಸಿದರು. ಹೀಗೆ ಅಸಭ್ಯವಾಗಿ ನಡೆದುಕೊಂಡರೆ ಹೇಗೆ? ಅನ್ನದಾನಿ ಎಲ್ಲರಿಗೂ ಕಲಿಸಿಕೊಟ್ಟಿದ್ದಾರೆ ಎಂದರು. ಅಷ್ಟೇ ಅಲ್ಲದೆ, 'ಸಿದ್ದರಾಮಯ್ಯ ಅವರೇ ಹೇಗೆ ಮಾಡುವುದು? ನೀವು ಹಿರಿಯರಿದ್ದೀರಿ' ಎಂದು ಅವರಲ್ಲೂ ಸ್ಪೀಕರ್ ಕಾಗೇರಿ ಸಲಹೆ ಕೇಳಿದರು. ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಸಿದ್ದ ಇದ್ದರೆ ಉತ್ತರ ಕೊಡಬಹುದು ಎಂದಿದೆ. ಇಲ್ಲ ಅಂದರೆ ಉತ್ತರ ತರಿಸಿಕೊಡುತ್ತೇವೆ ಎಂದಿದ್ದಾರೆ. ಹೀಗಿದ್ದರೂ ಮತ್ತೆ ಏಕೆ ಚರ್ಚೆ? ಎಂದು ನಿಯಮಾವಳಿಗಳನ್ನು ಉಲ್ಲೇಖ ಮಾಡಿದರು. ಇದೇ ಸಂದರ್ಭದಲ್ಲಿ ಆಶಿಸ್ತು ಪ್ರದರ್ಶನ ಮಾಡುವ ಸದಸ್ಯರಿಗೆ ಎಚ್ಚರಿಕೆ ನೀಡಿದ ಸ್ಪೀಕರ್ ಕಾಗೇರಿ, ಸದನದಲ್ಲಿ ಅಶಿಸ್ತಿನಿಂದ ವರ್ತಿಸುವ ಸದಸ್ಯರ ಪಟ್ಟಿ ಮಾಡಿದ್ದೇವೆ. ಅದು ನಮ್ಮಲ್ಲಿ ಇದೆ ಎಂದರು. ಶಾಸಕಾಂಗ ಪಕ್ಷದ ನಾಯಕರು ತಮ್ಮ ಶಾಸಕರಿಗೆ ಸದನದ ನಿಯಮಾವಳಿ ಬಗ್ಗೆ, ಕಲಾಪದ ಮಹತ್ವದ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಇದರ ಬದಲಾಗಿ ಹೀಗೆ ಮುಂದುವರಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸದನದ ನಿಯಮಾವಳಿ ಪುಸ್ತಕ ಓದಿ ಎಂದು ಸೂಚನೆ ಕೊಟ್ಟರು. ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಕಲಾಪ ಆರಂಭವಾದಾಗ ಆಡಳಿತ ಮತ್ತು ವಿರೋಧಪಕ್ಷಗಳ ಶಾಸಕರ ಗೈರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಅಸಮಾಧಾನ ಮೂಡಿಸಿತು. ಶಾಸಕರು, ಸಚಿವರ ಗೈರು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಶಾಸಕರೂ ಇರಲಿಲ್ಲ. ಉತ್ತರ ನೀಡಬೇಕಿದ್ದ ಕೆಲವು ಸಚಿವರೂ ಗೈರಾಗಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನಕ್ಕೆ ಕಾರಣವಾಯಿತು. ಗುರುವಾರ ಬೆಳಗ್ಗೆ 10.30 ಗೆ ಕಲಾಪ ಆರಂಭ ಆಗಲಿದೆ ಎಂದು ನಿಗದಿಯಾದರೂ, 15 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡಿತು. ಆದರೆ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಶರಣು ಸಲಗಾರ್, ರಿಜ್ವಾನ್ ಅರ್ಷದ್, ಸಿಟಿ ರವಿ, ನಾರಾಯಣ ಸ್ವಾಮಿ, ಗುಬ್ಬಿ ಶಾಸಕ ಶ್ರೀನಿವಾಸ್ ಗೈರಾಗಿದ್ದರು. ಕಲಾಪಕ್ಕೆ ಬಸವ ಕಲ್ಯಾಣ ಶಾಸಕ ಶರಣು ಸಲಗಾರ್ ಗೈರಾಗಿದ್ದಾರೆ. ಮೊದಲ ಪ್ರಶ್ನೆ ಬಂದಿದೆ. ಅವರೇ ಬಂದಿಲ್ಲ, ಏನ್ ಮಾಡೋದು ಎಂದು ಸ್ಪೀಕರ್ ಕಾಗೇರಿ ಬೇಸರ ವ್ಯಕ್ತಪಡಿಸಿದರು. ನಂತರ ಶರಣು ಸಲಗಾರ್ ತಡವಾಗಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ತಡವಾಗಿ ಸದನಕ್ಕೆ ಬರಬಾರದು ಎಂದು ಸೂಚಿಸಿದರು. ಸದನಕ್ಕೆ ತಡವಾಗಿ ಬಂದ ಕುಡುಚಿ ಶಾಸಕ ಪಿ.ರಾಜೀವ್ ಬಗ್ಗೆ ಸ್ಪೀಕರ್ ಗರಂ ಆದರು. ಸದನಕ್ಕೆ ತಡವಾಗಿ ಬಂದು ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಅವಕಾಶ ರಾಜೀವ್ ಕೋರಿದರು. ಆದರೆ ತಡವಾಗಿ ಬಂದ್ರೆ ನಾನೇನು ಮಾಡಲು ಆಗಲ್ಲ. ಎರಡು ಮೂರು ಬಾರಿ ಕರೆದೆ ಎಂದು ಸ್ಪೀಕರ್ ಹೇಳಿದರು. ಆದರೆ ನಿಯೋಗ ಮನವಿ ಕೊಡಲು ಬಂದಿತ್ತು ಎಂದು ರಾಜೀವ್ ಹೇಳಿದರು. ನಿಯೋಗ ಮುಖ್ಯವೋ ಸದನ ಮುಖ್ಯವೋ ಎಂದು ಸ್ಪೀಕರ್ ಪ್ರಶ್ನಿಸಿದರು. ಕೊನೆಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟರು.
from India & World News in Kannada | VK Polls https://ift.tt/3lPA9Lc