ಸರ್ಕಾರಿ ನಿವಾಸ ಬಿಟ್ಟು ಕೊಡದ ಮಾಜಿಗಳು! ವಸತಿ ಗೃಹ ಗಿಟ್ಟಿಸಿಕೊಳ್ಳಲು ಬೊಮ್ಮಾಯಿ ಬೆನ್ನ ಹಿಂದೆ ಬಿದ್ದ ನೂತನ ಸಚಿವರು

ಬೆಂಗಳೂರು: ಹಲವು ಮಾಜಿ ಸಚಿವರು ತಮಗೆ ಸಚಿವರಾಗಿದ್ದಾಗ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೊರೆಯಲು ಹಿಂದೇಟು ಹಾಕುತ್ತಿರುವುದರಿಂದ ನೂತನ ಸಚಿವರು ಸರ್ಕಾರಿ ನಿವಾಸಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿಯ ಬೆನ್ನ ಹಿಂದೆ ಬಿಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳು, ವರಿಷ್ಠರಿಗೆ ದಂಬಾಲು ಬಿದ್ದಿದ್ದ ಇವರೆಲ್ಲಾ ಇದೀಗ ವಸತಿ ಗೃಹಕ್ಕಾಗಿ ಪರದಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ. ನೂತನ ಸಚಿವರಿಗೆ ವಸತಿ ಗೃಹ ಹಂಚಿಕೆ ಮಾಡುವುದು ಸ್ವತಃ ಮುಖ್ಯಮಂತ್ರಿಗಳಿಗೂ ಕಗ್ಗಂಟಾಗಿ ಪರಿಣಮಿಸಿದೆ. ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್ ಅವರಿಗೆ ಹಂಚಿಕೆಯಾಗಿರುವ ಕುಮಾರಕೃಪ ಪೂರ್ವದ ಗೃಹ ಸಂಖ್ಯೆ 3ರ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ಆ ನಿವಾಸವನ್ನು ಸಚಿವರಾದ ಕೆ.ಸಿ. ನಾರಾಯಣಗೌಡ, ಬಿ. ಶ್ರೀರಾಮುಲು ಮತ್ತು ಆನಂದ್‌ ಸಿಂಗ್‌ ತಮಗೆ ಹಂಚಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಕಡೆಯಲ್ಲಿ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಅದೇ ಮನೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಕೂಡಾ ಅದೇ ಮನೆಯನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗೆ ದುಂಬಾಲು ಬಿದ್ದಿದ್ದಾರೆ. ಸಚಿವ ನಾರಾಯಣ ಗೌಡ ಮತ್ತು ಆನಂದ್ ಸಿಂಗ್‌ ಅವರಿಗೆ ಸರ್ಕಾರದಿಂದ ಈವರೆಗೆ ವಸತಿಗೃಹ ಹಂಚಿಕೆ ಆಗಿಲ್ಲ. ಬಿ. ಶ್ರೀರಾಮುಲು ಅವರು ಸಪ್ತ ಸಚಿವರ ನಿವಾಸದಲ್ಲಿರುವ ಸರ್ಕಾರಿ ವಸತಿಗೃಹ ನಂ 6ರಲ್ಲಿ ಇದ್ದಾರೆ. ಕುತೂಹಲಕಾರಿ ಸಂಗತಿ ಏನಂದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಯೋಗೇಶ್ವರ ಸದ್ಯ ಆ ಮನೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಇನ್ನೂ ನಾಲ್ಕೈದು ತಿಂಗಳು ಅದೇ ಸರ್ಕಾರಿ ನಿವಾಸದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಇದನ್ನು ಪುರಸ್ಕರಿಸಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇನ್ನು ಸಿಪಿ ಯೋಗೇಶ್ವರ್ ಮನೆ ಹಂಚಿಕೆ ಸಾಧ್ಯವಾಗದಿದ್ದರೆ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ್‌ ಅವರಿದ್ದ ಕ್ರೆಸೆಂಟ್‌ ರಸ್ತೆಯ ಸರ್ಕಾರಿ ವಸತಿಗೃಹ ನಂ–3 ಅನ್ನು ಹಂಚಿಕೆ ಮಾಡುವಂತೆ ಶ್ರೀರಾಮುಲು ಮನವಿ ಸಲ್ಲಿಸಿದ್ದರು. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂಯಾಗಿದ್ದ ಸಚಿವ ಅಶ್ವತ್ಥನಾರಾಯಣ ಅವರಿದ್ದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ರೇಸ್‌ ವ್ಯೂ ಕಾಟೇಜ್‌ ನಂ–1 ಅನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಮತ್ತೊಂದು ಮನೆಯ ಹುಡುಕಾಟದಲ್ಲಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೂ ಕ್ರಸೆಂಟ್ ರಸ್ತೆಯಲ್ಲಿರುವ ವಸತಿಗೃಹಕ್ಕೆ ಅರ್ಜಿ ಹಾಕಿದ್ದರು. ಆದರೆ, ಶೆಟ್ಟರ್ ಆಪ್ತರಾಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪರಿಗೆ ಆ ಮನೆಯನ್ನು ಹಂಚಿಕೆ ಮಾಡಲಾಗಿದೆ. ಆದರೆ, ಮಾಜಿ ಸಚಿವ ಶೆಟ್ಟರ್‌ ಇನ್ನಷ್ಟೆ ಆ ಮನೆಯನ್ನು ತೆರವುಗೊಳಿಸಬೇಕಾಗಿದೆ. ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರಿದ್ದ ಜಯಮಹಲ್‌ ಬಡಾವಣೆಯಲ್ಲಿರುವ ಸರ್ಕಾರಿ ವಸತಿಗೃಹ ಸಂಖ್ಯೆ ಬಿ–2ಎ ಮನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಕೇಳಿದ್ದಾರೆ. ಹೀಗಾಗಿ, ನಾಗೇಶ್‌ ಅವರಿಗೆ ಆ ಮನೆ ಹಂಚಿಕೆಯಾಗುವ ಸಾಧ್ಯತೆ ಇದೆ. ಆದರೆ, ಸವದಿ ಮನೆಯನ್ನು ಇನ್ನೂ ಖಾಲಿ ಮಾಡಿಲ್ಲ. ಪರಿಣಾಮ ಸಚಿವ ನಾಗೇಶ್ ಅವರು ನಿವಾಸಕ್ಕಾಗಿ ಕಾಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದಾಗ ಮುರುಗೇಶ್‌ ನಿರಾಣಿ ನೆಲೆಸಿರುವ ಸ್ಯಾಂಕಿ ರಸ್ತೆಯಲ್ಲಿರುವ ನಂ 31ನ್ನು ಕೋರಿದ್ದಾರೆ. ಹಾಲಿ ಕೈಗಾರಿಕಾ ಸಚಿವರಾಗಿರುವ ಮುರುಗೇಶ್‌ ನಿರಾಣಿ ಈ ಮನೆಯಲ್ಲೇ ಇದ್ದಾರೆ. ಹೀಗಾಗಿ, ಸುನೀಲ್ ಅವರಿಗೆ ಈ ಮನೆ ಸಿಗುವುದು ಅನುಮಾನ ಎನ್ನಲಾಗಿದೆ. ಬಿಎಸ್‌ವೈ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಪಿ. ರೇಣಕಾಚಾರ್ಯ ಹಾಗೂ ಎಸ್‌.ಆರ್‌. ವಿಶ್ವನಾಥ್‌ ‘ಸಪ್ತ ಸಚಿವರ ನಿವಾಸ’ದಲ್ಲಿ ನಂ– 7 ಮತ್ತು ನಂ– 2 ರಲ್ಲಿ ಇದ್ದಾರೆ. ರಾಜಕೀಯ ಕಾರ್ಯದರ್ಶಿ ಹುದ್ದೆ ಕಳೆದುಕೊಂಡರೂ ನಿವಾಸವನ್ನು ಖಾಲಿ ಮಾಡಿಲ್ಲ. ಇದೆಲ್ಲದರ ಪರಿಣಾಮ ಮಾಜಿಗಳ ಸರ್ಕಾರಿ ನಿವಾಸದ ಮೇಲಿನ ಮೋಹದಿಂದಾಗಿ ಹೊಸಬರು ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನಮಗೆ ಸರ್ಕಾರಿ ನಿವಾಸ ನೀಡಿ ಎಂದು ಸಚಿವರು ಮುಖ್ಯಮಂತ್ರಿಗಳಿಗೆ ದಂಬಾಲು ಬಿದಿದ್ದಾರೆ.


from India & World News in Kannada | VK Polls https://ift.tt/3AIWoZs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...