ಬೆಂಗಳೂರಿನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; 2 ವರ್ಷದಿಂದ ವಾಲಿದ್ದ ಕಟ್ಟಡ ಉರುಳಿಸದ ಬಿಬಿಎಂಪಿ!

ಬೆಂಗಳೂರು: ನಗರದಲ್ಲಿ ಬೆಂಕಿ ಮತ್ತು ಪಟಾಕಿ ದುರಂತಗಳ ಕಹಿ ಮಾಸುವ ಮುನ್ನವೇ ವಿಲ್ಸನ್‌ ಗಾರ್ಡನ್‌ನ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕಟ್ಟಡದಲ್ಲಿ ನೆಲೆಸಿದ್ದ ಕುಟುಂಬಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಉರುಳಿ ಬಿದ್ದ ಕಟ್ಟಡದಲ್ಲಿ ನೆಲೆಸಿದ್ದವರನ್ನು ಸ್ಥಳಾಂತರಿಸಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಕಟ್ಟಡ ಉರುಳಿ ಬಿದ್ದಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದಾಗಿ ಭಾರಿ ಜೀವ ಹಾನಿ ತಪ್ಪಿದೆ. ಕಟ್ಟಡ ಕುಸಿದಿದ್ದರಿಂದ ಅಕ್ಕಪಕ್ಕದ ಮೂರು ಮನೆಗಳಿಗೆ ಹಾನಿಯಾಗಿದೆ. 7ನೇ ಮುಖ್ಯರಸ್ತೆ, 14ನೇ ಕ್ರಾಸ್‌ನಲ್ಲಿಸುರೇಶ್‌ ಎಂಬುವವರು ನಿರ್ಮಿಸಿದ್ದ ಈ ಕಟ್ಟಡ ಎರಡು ವರ್ಷಗಳ ಹಿಂದೆಯೇ ಶಿಥಿಲಗೊಂಡು ಒಂದು ಕಡೆ ವಾಲಿಕೊಂಡಿತ್ತು. ಇದನ್ನು ಗಮನಿಸಿದ್ದ ಅಕ್ಕಪಕ್ಕದ ನಿವಾಸಿಗಳು, ಕುಸಿಯುವ ಮೊದಲೇ ಕಟ್ಟಡವನ್ನು ತೆರವುಗೊಳಿಸುವಂತೆ ಮಾಲೀಕನಿಗೆ ಒತ್ತಾಯಿಸಿದ್ದರು. ಇದನ್ನು ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಸ್ಥಳೀಯರು ಬಿಬಿಎಂಪಿಗೂ ದೂರು ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಮಾಲೀಕರು ಹಾಗೂ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದರು ಎಂದು ಸ್ಥಳೀಯರು ಆರೋಪಿಸುತ್ತಾರೆ. ಎರಡು ವರ್ಷದ ಹಿಂದೆ ಕಟ್ಟಡ ಸ್ವಲ್ಪ ರಸ್ತೆಯ ಕಡೆಗೆ ವಾಲಿತ್ತು. ಸೋಮವಾರ ಬೆಳಗ್ಗೆ ಹಿಂದಿಗಿಂತಲೂ ಕಟ್ಟಡ ಹೆಚ್ಚು ಬಾಗಿದ್ದು, ಕಟ್ಟಡದಿಂದ ಮಣ್ಣು ಉದುರುತ್ತಿತ್ತು. ಇದರಿಂದ ಕಟ್ಟಡ ಬೀಳುವ ಮುನ್ಸೂಚನೆ ಅರಿತ ಸ್ಥಳೀಯರು ಪೊಲೀಸ್‌ ಕಂಟ್ರೋಲ್‌ ರೂಂ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಆಡುಗೋಡಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಟ್ಟಡದೊಳಗಿದ್ದ ಎಂಟತ್ತು ಮಂದಿ ಕಾರ್ಮಿಕರನ್ನು ಹೊರಗೆ ಕರೆತಂದಿದ್ದಾರೆ. ಇದಾದ 10 ನಿಮಿಷಗಳಲ್ಲಿ (ಬೆಳಗ್ಗೆ 11ರಿಂದ 11.30ರ ಸಮಯದಲ್ಲಿ) ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಕಾರ್ಮಿಕರ ರಕ್ಷಣೆ ಮಾಡಿದ ಪೊಲೀಸರೊಬ್ಬರು ತಿಳಿಸಿದರು. ಒಂದಕ್ಕೆ ಅನುಮತಿ ಪಡೆದು 3 ಮಹಡಿ ಕಟ್ಟಿದರು ಸುರೇಶ್‌ ಎಂಬುವರಿಗೆ ಸೇರಿದ ಈ ಮನೆಯನ್ನು 1974ರಲ್ಲಿ 40 /20 ಅಡಿ ವಿಸ್ತೀರ್ಣದಲ್ಲಿ ಸಿಂಗಲ್‌ ಬೆಡ್‌ ರೂಂ ಮನೆಯಾಗಿ ನಿರ್ಮಿಸಲಾಗಿತ್ತು. ಒಂದು ಅಂತಸ್ತಿನ ಮನೆ ನಿರ್ಮಾಣಕ್ಕಷ್ಟೇ ಬಿಬಿಎಂಪಿಯಿಂದ ಅನುಮತಿ ಪಡೆಯಲಾಗಿತ್ತು. ಇದಾದ ಬಳಿಕ ಮನೆಯ ಮೇಲೆ ಅಕ್ರಮವಾಗಿ ಎರಡು ಮಹಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಹಳೆ ಮನೆ ಎಂದು ಬಾಡಿಗೆದಾರರು ಬಾರದಿದ್ದಾಗ ಮನೆಯ ಸಣ್ಣಪುಟ್ಟ ರಿಪೇರಿ ಮಾಡಿಸಿ ದಂಪತಿಯೊಬ್ಬರಿಗೆ ಕಳೆದ 10 ವರ್ಷಗಳ ಹಿಂದೆ ಬಾಡಿಗೆ ನೀಡಿದ್ದರು. ಆದರೆ, ಅವರು ಎರಡು ವರ್ಷಗಳ ಹಿಂದೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಬಳಿಕ ಮನೆ ಖಾಲಿಯಾಗಿರುವುದನ್ನು ನೋಡಿ ಕಾರ್ಮಿಕರು ಬಾಡಿಗೆಗೆ ಬಂದಿದ್ದರು. ಕಡಿಮೆ ಬಾಡಿಗೆಗೆ ಬಂದಿದ್ದ ಕಾರ್ಮಿಕರು ಬಿಹಾರ ಸೇರಿದಂತೆ ಉತ್ತರ ಭಾರತದ ನಾನಾ ರಾಜ್ಯಗಳ ಕಾರ್ಮಿಕರು ಲಕ್ಕಸಂದ್ರ ಪಕ್ಕದಲ್ಲೇ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ತೆರಳಲು ಹತ್ತಿರವಾಗಲಿದೆ ಹಾಗೂ ಕಡಿಮೆ ಬಾಡಿಗೆಗೆ ಮನೆ ದೊರೆಯಲಿದೆ ಎಂದು ಶಿಥಿಲಗೊಂಡಿದ್ದ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಸುಮಾರು ಆರು ತಿಂಗಳಿಂದ 35 ಕಾರ್ಮಿಕರು ಇಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಕ್ಕಪಕ್ಕದ ಮನೆಗಳಿಗೆ ಹಾನಿ ಮೂರು ಅಂತಸ್ತಿನ ಕಟ್ಟಡ ಕುಸಿತದಿಂದ ಅಕ್ಕಪಕ್ಕದಲ್ಲಿದ್ದ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕುಸಿತಗೊಂಡ ಕಟ್ಟಡದ ಹಿಂಬದಿ ಮನೆಯ ಬೆಡ್‌ರೂಂ ಗೋಡೆ, ಹಾಲ್‌ ಹಾಗೂ ಅಡುಗೆ ಮನೆ ಗೋಡೆ ಮತ್ತು ಕಿಟಕಿಗಳು ಬಿರುಕುಬಿಟ್ಟು ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದರು. ಕುಸಿತಗೊಂಡಿರುವ ಕಟ್ಟಡದ ಹಿಂಭಾಗದ ಮನೆಯಲ್ಲಿ ನಾಲ್ಕು ಮಂದಿ ವಾಸವಾಗಿದ್ದರು. ಕಟ್ಟಡ ಕುಸಿತದ ಸಮಯದಲ್ಲಿ 35 ವರ್ಷದ ತಾಯಿ ಹಾಗೂ 8 ವರ್ಷದ ಬಾಲಕಿ ಇದ್ದರು. ಒಂದೇ ಬಾರಿಗೆ ಕಟ್ಟಡ ಕುಸಿತಗೊಂಡ ಪರಿಣಾಮ ಜೀವಕ್ಕೆ ಅಪಾಯ ಉಂಟಾಗಬಹುದೆಂದು ಎಲ್ಲರೂ ಹೆದರಿದ್ದರು. ಸ್ಥಳೀಯರು ಹಾಗೂ ಪೊಲೀಸರು ಅವರ ನೆರವಿಗೆ ಧಾವಿಸಿ ರಕ್ಷಣೆ ಮಾಡಿದ್ದಾರೆ. ಘಟನೆ ಬಳಿಕ ಮಾಲೀಕ ನಾಪತ್ತೆ? ಮನೆ ಕುಸಿತಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಮಾಲೀಕ ಸುರೇಶ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಸುರೇಶ್‌ ತಾನು ಕೋರ್ಟ್‌ನಲ್ಲಿ ಇರುವುದಾಗಿ ಫೋನ್‌ ಕಟ್‌ ಮಾಡಿದ್ದಾರೆ. ಇನ್ನು ಪೊಲೀಸರು ಫೋನ್‌ ಮೂಲಕ ಸುರೇಶ್‌ ಅವರನ್ನು ಸಂಪರ್ಕಿಸಿದಾಗ ಠಾಣೆಗೆ ನೇರವಾಗಿ ಬರುವುದಾಗಿ ತಿಳಿಸಿದರು. ಆದರೆ, ಕೆಲ ಸಮಯದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸುರೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಿಬಿಎಂಪಿ ಸುಪರ್ದಿಗೆ ಕಟ್ಟಡದ ಜಾಗವನ್ನು ತನ್ನ ಸುಪರ್ದಿಗೆ ಪಡೆದಿರುವ ಬಿಬಿಎಂಪಿ, ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವುದಾಗಿ ತಿಳಿಸಿದೆ. ರಸ್ತೆಗೆ ಕುಸಿದಿರುವ ಕಟ್ಟಡದ ಮಣ್ಣು ಸೇರಿದಂತೆ ಇತರೆ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಕಟ್ಟಡ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.


from India & World News in Kannada | VK Polls https://ift.tt/3o9DveN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...