ಆರ್‌ಸಿಬಿ ತಂಡಕ್ಕೆ ಭವಿಷ್ಯದ ನಾಯಕನ ಆಯ್ಕೆ ಮಾಡಿದ ಡೇಲ್ ಸ್ಟೇನ್!

ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್‌ ಕೊಹ್ಲಿ ಬಿಡುವುದಾಗಿ ಈಗಾಗಗಲೇ ಘೋಷಣೆ ಮಾಡಿದ್ದಾರೆ. ಬ್ಯಾಟ್ಸ್‌ಮನ್‌ ಆಗಿ ಆರ್‌ಸಿಬಿ ತಂಡದ ಪರ ಹಲವು ವಿಶೇಷ ದಾಖಲೆಗಳನ್ನು ನಿರ್ಮಿಸಿರುವ ವಿರಾಟ್‌ ಕೊಹ್ಲಿ ಅವರಿಗೆ ನಾಯಕನಾಗಿ ಒಮ್ಮೆಯೂ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಿಲ್ಲ. 2013ರಲ್ಲಿ ನಾಯಕತ್ವ ವಹಿಸಿಕೊಂಡ ವಿರಾಟ್‌, 2016ರ ಆವೃತ್ತಿಯಲ್ಲಿ 950ಕ್ಕೂ ಹೆಚ್ಚು ರನ್‌ ಬಾರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ, ಟ್ರೋಫಿ ಗೆಲುವು ಮಾತ್ರ ಸಾಧ್ಯವಾಗಲೇ ಇಲ್ಲ. ಇದೀಗ ಟೂರ್ನಿಯ ಎರಡನೇ ಚರಣದಲ್ಲಿ ಆರ್‌ಸಿಬಿ ತಂಡದ ಮೊದಲ ಪಂದ್ಯಕ್ಕೂ ಮುನ್ನ ವಿರಾಟ್ ನಾಯಕತ್ವ ಬಿಡುವ ನಿರ್ಧಾರ ಪ್ರಕಟ ಮಾಡಿದ್ದರು. ಇದರ ಬೆನ್ನಲ್ಲೇ ಚಾಲೆಂಜರ್ಸ್‌ ತಂಡದ ಮುಂದಿನ ನಾಯಕ ಯಾರಾಗಬೇಕು? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಮಾತನಾಡಿರುವ ದಕ್ಷಿಣ ಆಫ್ರಿಕಾದ ದಿಗ್ಗಜ ಹಾಗೂ ಮಾಜಿ ವೇಗಿ ಡೇಲ್‌ ಸ್ಟೇನ್‌, ಆರ್‌ಸಿಬಿ ತಂಡದ ನಾಯಕತ್ವ ಕೆಎಲ್‌ ರಾಹುಲ್‌ ತೆಗೆದುಕೊಳ್ಳಬೇಕು ಎಂದಿದ್ದಾರೆ. ಕೆಎಲ್‌ ರಾಹುಲ್ ಸೂಕ್ತ ಎಂದ ಸ್ಟೇನ್ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಭಾನುವಾರ (ಸೆ.26) ಮುಖಾಮುಖಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸ್ಟೇನ್‌ ಚಾಲೆಂಜರ್ಸ್‌ ತಂಡಕ್ಕೆ ಸೂಕ್ತ ಭವಿಷ್ಯದ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಸದ್ಯ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿ ಗಮನ ಸೆಳೆಯುತ್ತಿರುವ ಕೆಎಲ್‌ ರಾಹುಲ್‌, ಮೂರು ಬಾರಿ ರನ್ನರ್ಸ್‌ಅಪ್‌ ಸ್ಥಾನ ಪಡೆದಿರುವ ಚಾಲೆಂಜರ್ಸ್‌ನ ನಾಯಕನಾಗಬೇಕು ಎಂದಿದ್ದಾರೆ. "ಆರ್‌ಸಿಬಿ ತಂಡ ದೀರ್ಘ ಕಾಲದ ನಾಯಕನ ಹುಡುಕಾಟದಲ್ಲಿ ಇದೆ ಎಂದಾದರೆ ತಮ್ಮ ತಂಡದಿಂದ ಆಚೆಗೂ ಕಣ್ಣಾಕುವ ಅಗತ್ಯವಿದೆ. ಆರ್‌ಸಿಬಿ ತಂಡದ ಮಾಜಿ ಆಟಗಾರ ಕೆಎಲ್‌ ರಾಹುಲ್‌ ನನ್ನ ಆಯ್ಕೆ ಆಗಲಿದೆ. ಮುಂದಿನ ವರ್ಷ ರಾಹುಲ್‌ ಆರ್‌ಸಿಬಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡುತ್ತಾರೆ ಎಂಬ ಭಾವನೆ ನನ್ನಲ್ಲಿದೆ," ಎಂದು ಸ್ಟೇನ್ ಹೇಳಿದ್ದಾರೆ. ಮುಂದಿn ವರ್ಷ ಬೃಹತ್ ಮಟ್ಟದ ಹರಾಜು ನಡೆಯಲಿದೆ ಐಪಿಎಲ್ 2022 ಟೂರ್ನಿಗೆ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎರಡು ಹೊಸ ತಂಡಗಳು ಕೂಡ ಸ್ಪರ್ಧೆಗೆ ಇಳಿಯಲಿವೆ. ಹೀಗಾಗಿ ಹಲವು ತಂಡಗಳ ರೂಪುರೇಶೆ ಬದಲಾಗಲಿದ್ದು, ಈ ಸಂದರ್ಭದಲ್ಲಿ ಯಾರೆಲ್ಲಾ ಯಾವ ತಂಡಗಳನ್ನು ಸೇರುತ್ತಾರೆ ಎಂಬ ಭಾರಿ ಕುತೂಹಲ ಕೆರಳಿದೆ. ಹರಾಜಿಗೆ ಕೆಎಲ್‌ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್‌ ಬಿಟ್ಟುಕೊಟ್ಟಿದ್ದೇ ಆದರೆ, ಅವರನ್ನು ಖರೀದಿಸಲು ಆರ್‌ಸಿಬಿ ಮುಗಿಬೀಳುವುದು ನಿಶ್ಚಿತ. 2018ರಲ್ಲಿ ಕೆಎಲ್ ರಾಹುಲ್‌ ಪಂಜಾಬ್‌ ತಂಡ ಸೇರಿದ್ದರು. ಆರ್‌ಸಿಬಿ ರೈಟ್‌ ಟು ಮ್ಯಾಚ್‌ ಬಳಕೆ ಮಾಡಲು ನಿರಾಕರಿಸಿದ್ದ ಕಾರಣ ಬರೋಬ್ಬರಿ 11 ಕೋಟಿ ರೂ.ಗಳ ಮೊತ್ತಕ್ಕೆ ಪಂಜಾಬ್‌ ತಂಡ ಕನ್ನಡಿಗನ ಖರೀದಿ ಮಾಡಿತ್ತು. ಈ ನಡುವೆ ಅನುಭವಿ ಬ್ಯಾಟ್ಸ್‌ಮನ್‌ ದಕ್ಷಿಣ ಆಫ್ರಿಕಾದ ಎಬಿ ಡಿ'ವಿಲಿಯರ್ಸ್‌ ಕೂಡ ಆರ್‌ಸಿಬಿ ತಂಡದ ನಾಯಕತ್ವದ ರೇಸ್‌ನಲ್ಲಿ ಮುಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಎಬಿಡಿ, ಕೇವಲ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ ಮಾತ್ರವೇ ತಮ್ಮ ಸೇವೆ ಮುಂದುವರಿಸಿದ್ದಾರೆ. "ಎಬಿ ಡಿ'ವಿಲಿಯರ್ಸ್‌ ಅವರನ್ನು ನಾಯಕನನ್ನಾಗಿ ನೇಮಕ ಮಾಡುವುದು ಅಷ್ಟು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಎಬಿಡಿ ಅದ್ಭುತ ಆಟಗಾರ ಎಂಬುದರಲ್ಲಿ ಅನುಮಾನವೇ ಬೇಡ. ಆದರೆ, ಅವರು ತಮ್ಮ ವೃತ್ತಿಬದುಕಿನ ಅಂತ್ಯದ ಕಡೇ ಘಟ್ಟದಲ್ಲಿದ್ದಾರೆ. ಆತ ಅದ್ಭುತ ನಾಯಕ ಕೂಡ. ಆದರೂ ಭವಿಷ್ಯದಲ್ಲಿ ದೀರ್ಘಕಾಲದವರೆಗೆ ಸೇವೆ ಸಲ್ಲಿಸುವ ನಾಯಕನನ್ನು ಆರ್‌ಸಿಬಿ ಆಯ್ಕೆ ಮಾಡಿಕೊಳ್ಳಬೇಕಿದೆ," ಎಂದು ಸ್ಟೇನ್ ಅಭಿಪ್ರಾಯ ಪಟ್ಟಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kEfQky

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...