ಮೈಸೂರು: ನಂಜನಗೂಡಿನ ಹುಚ್ಚಗಣಿ ಮಹ ದೇವಮ್ಮ ದೇಗುಲ ಪುನರ್ ನಿರ್ಮಾಣ ಮಾಡಲು ಭಕ್ತರೊಬ್ಬರು 5 ಗುಂಟೆ ಜಾಗ ನೀಡಿದ್ದಾರೆ. ಇದರ ಜತೆ ದಾನಿಗಳ ನೆರವಿನಿಂದ ಅರ್ಧ ಎಕರೆಯಲ್ಲಿ ಭವ್ಯವಾಗಿ ದೇಗುಲ ನಿರ್ಮಿಸಲಾಗುವುದು ಎಂದು ಸಂಸದ ಪ್ರತಾಪಸಿಂಹ ಹೇಳಿದರು. ದೇಗುಲಗಳ ಉಳಿವಿಗೆ ಆರಂಭಿಸಿದ್ದ ಹೋರಾಟಕ್ಕೆ ಜಯ ಸಿಕ್ಕಿದ್ದು, ಕೋರಿಕೆಯನ್ನು ಮನ್ನಿಸಿದ್ದಕ್ಕೆ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಶಂಕು ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬರಲು ಒಪ್ಪಿದ್ದಾರೆ ಎಂದರು. ನ್ಯಾಯಾಲಯದ ತೀರ್ಪು ಸರಿಯಾಗಿ ಅರ್ಥೈಸಿಕೊಳ್ಳದೆ ದೇಗುಲ ನೆಲಸಮಕ್ಕೆ ಆದೇಶಿಸಿದ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಮೇಲೆ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು. ನಾಲ್ಕು ಸಾವಿರ ದೇಗುಲಕ್ಕೆ ತಪ್ಪಿದ ಕಂಟಕ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕದಿಂದಾಗಿ ರಾಜ್ಯದ ನಾಲ್ಕು ಸಾವಿರ ದೇಗುಲಗಳಿಗೆ ಉಂಟಾಗಿದ್ದ ಕಂಟಕ ತಪ್ಪಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿ ಹತ್ತು ದಿನಗಳಲ್ಲಿ ದೇಗುಲ ಸಂರಕ್ಷಣೆಗೆ ತಿದ್ದುಪಡಿ ತಂದು ಕಾಯಿದೆ ಜಾರಿಗೊಳಿಸಿದ್ದು ಸರಕಾರದ ದಿಟ್ಟತನವಾಗಿದೆ. ಜತೆಗೆ ಭಕ್ತರ ಭಾವನೆ ಅರ್ಥ ಮಾಡಿಕೊಂಡಿದ್ದ ಸಿಎಂ ಅದಕ್ಕೆ ತಕ್ಕಂತೆ ತ್ವರಿತಗತಿಯಲ್ಲಿ ಕೈಗೊಂಡ ಕ್ರಮದಿಂದಾಗಿ ದೇಗುಲ ಉಳಿದಿವೆ ಎಂದು ಹೇಳಿದರು. ನಗರ ಪಾಲಿಕೆ ಸದಸ್ಯರಾದ ಶಿವಕುಮಾರ, ಸೌಮ್ಯ ಉಮೇಶ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, 101 ಗಣಪತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರುದ್ರಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ ಶಿವಕುಮಾರ್, ನಗರಪಾಲಿಕೆ ನಾಮ ನಿರ್ದೇಶಿತ ಸದಸ್ಯ ಕೆ.ಜೆ.ರಮೇಶ್ ಮತ್ತಿತರರು ಇದ್ದರು. ಉದ್ಯಾನಕ್ಕೆ ಡಾ.ವಿಷ್ಣು ಹೆಸರಿಡಲು ಪಾಲಿಕೆಗೆ ಪತ್ರಅರಮನೆ ಎದುರಿನ ಉದ್ಯಾನಕ್ಕೆ ನಟ ಡಾ.ವಿಷ್ಣುವರ್ಧನ್ ಹೆಸರಿಡುವ ಜತೆಗೆ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ಸಂಸದ ಪ್ರತಾಪ್ಸಿಂಹ ಹೇಳಿದರು. ವರ ನಟ ಡಾ.ರಾಜ್ಕುಮಾರ್ ಹಾಗೂ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರು ಕನ್ನಡಿಗರ ಎರಡು ಕಣ್ಣುಗಳಿದ್ದಂತೆ. ಹಲವು ವರ್ಷಗಳಿಂದ ಇವರ ಪ್ರತಿಮೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿರುವುದರಿಂದ ಶೀಘ್ರವೇ ಅದನ್ನು ಈಡೇರಿಸಲಾಗುವುದು. ಹಾಗಾಗಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಭಾಗಿಯಾಗಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು. ಮತಾಂತರದ ವಿರುದ್ಧ ಯುವತಿಯರು ಹೋರಾಡಲಿದೇಶ, ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಮತಾಂತರದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಾನು ಈ ವಿಚಾರವನ್ನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮ್ಮ ತಾಯಿಯೇ ಮತಾಂತರಗೊಂಡಿರುವ ಬಗ್ಗೆ ನೋವನ್ನು ಹೇಳಿಕೊಂಡಿದ್ದಾರೆ. ಮತಾಂತರದ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವುದರಿಂದ ಸರಕಾರ ಕಾಯಿದೆ ತರಲು ಮುಂದಾಗಿದೆ. ನೀವು ಮತಾಂತರದಲ್ಲಿ ತೊಡಗಿಲ್ಲ ಎನ್ನುವುದಾದರೆ ಕಾಯಿದೆ ತರುವುದು ಬೇಡ ಎಂದು ಭಯ ಪಡುವುದಾದರೂ ಏಕೆ? ಎಂದು ಬಿಷಪ್ ಹಾಗೂ ಪಾದ್ರಿಗಳನ್ನು ಪ್ರಶ್ನಿಸಿದ ಅವರು, ಕೇರಿ, ಕಾಲನಿಗಳಲ್ಲಿ ಉಡುಗೊರೆ ಮತ್ತಿತರ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂದು ಎಂದು ಪ್ರತಾಪ್ಸಿಂಹ ಆರೋಪಿಸಿದರು.
from India & World News in Kannada | VK Polls https://ift.tt/3m0cOpZ