ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2021ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 34ನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ತಮ್ಮ ಬೌಲಿಂಗ್ ವಿಭಾಗವನ್ನು ಟೀಕಿಸಿದ್ದಾರೆ. ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ವಿರಾಟ್ ಕೊಹ್ಲಿ (53) ಹಾಗೂ ದೇವದತ್ ಪಡಿಕ್ಕಲ್(70) ಅವರ ಅರ್ಧಶತಕಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ತನ್ನ ಪಾಲಿನ 20 ಓವರ್ಗಳಿಗೆ 156 ರನ್ಗಳಿಗೆ ಸೀಮಿತವಾಯಿತು. ಬಳಿಕ ಗುರಿ ಹಿಂಬಾಲಿಸಿದ್ದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಉತ್ತಮ ಪ್ರದರ್ಶನದ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ಗಳ ಗೆಲುವು ದಕ್ಕಿಸಿಕೊಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಸಿಎಸ್ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿತು. ಇನ್ನು ಆರ್ಸಿಬಿ 3ನೇ ಸ್ಥಾನದಲ್ಲಿಯೇ ಉಳಿಯಿತು. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಪವರ್ಪ್ಲೇನಲ್ಲಿ ನಮ್ಮ ಬೌಲರ್ಗಳಿಗೆ ಎಕ್ಸ್-ಫ್ಯಾಕ್ಟರ್ ಕೊರತೆಯಿದೆ ಹಾಗೂ ಚೆಂಡಿನೊಂದಿಗೆ ಸಾಕಾಗುವಷ್ಟು ಧೈರ್ಯದ ಸಮಸ್ಯೆ ಕೂಡ ಇದೆ ಎಂದರು. ಇದರ ಜೊತೆಗೆ ನಾವು 175 ರನ್ ಗಳಿಸಬೇಕಾಗಿತ್ತು ಎಂದು ಹೇಳಿಕೊಂಡಿದ್ದಾರೆ. "ಇಲ್ಲಿನ ವಿಕೆಟ್ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು. 15 ರಿಂದ 20 ರನ್ ನಮ್ಮ ಪಾಲಿಗೆ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. 175 ರನ್ ಇಲ್ಲಿ ಗೆಲುವಿನ ಮೊತ್ತವಾಗುತ್ತಿತ್ತು. ಇದರ ಜೊತೆಗೆ ಸ್ಥಿರವಾಗಿ ನಾವು ಬೌಲ್ ಕೂಡ ಮಾಡಲಾಗಲಿಲ್ಲ ಹಾಗೂ ಸಾಕಷ್ಟು ಬೌಂಡರಿ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದೇವೆ. ಒಟ್ಟಿನಲ್ಲಿ ಚೆಂಡಿನೊಂದಿಗೆ ನಾವು ಸಾಕಷ್ಟು ಧೈರ್ಯ ತೋರಿಸುವಲ್ಲಿ ವಿಫಲರಾಗಿದ್ದೇವೆ," ಎಂದು ಬೇಸರ ವ್ಯಕ್ತಪಡಿಸಿದರು. "ಕೆಲ ಜಾಗದಲ್ಲಿ ಪಿಚ್ ಮಾಡಬಾರದೆಂಬ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು, ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ಅದರಲ್ಲೂ ಆರಂಭಿಕ 5-6 ಓವರ್ಗಳಲ್ಲಿ ನಮಗೆ ಎಕ್ಸ್-ಫ್ಯಾಕ್ಟರ್ ಮಿಸ್ ಆಗಿದೆ. ಇದರ ಹೊರತಾಗಿಯೂ ನಿರ್ಣಾಯಕ ಸನ್ನಿವೇಶಗಳಲ್ಲಿ ಉತ್ತಮ ಎಸೆತಗಳನ್ನು ಕಾರ್ಯಗತಗೊಳಿಸುವುದು ಅಗತ್ಯ. ಇಂಥಾ ಕೆಲ ಸನ್ನಿವೇಶಗಳಲ್ಲಿ ನಾವು ಎಡವುತ್ತಿದ್ದೇವೆ," ಎಂದು ಕೊಹ್ಲಿ ಹೇಳಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೆತ್ ಬೌಲಿಂಗ್ ಅದರಲ್ಲೂ ವಿಶೇಷವಾಗಿ ಯಾರ್ಕರ್ ಹಾಗೂ ಸ್ಲೋವರ್ ಬಾಲ್ಸ್ ಕಾರ್ಯಗತಗೊಳಿಸಿದ ಎದುರಾಳಿ ಬೌಲರ್ಗಳನ್ನು ವಿರಾಟ್ ಕೊಹ್ಲಿ ಇದೇ ವೇಳೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಇನಿಂಗ್ಸ್ನ ಬ್ಯಾಕೆಂಡ್ನಲ್ಲಿ ಸಿಎಸ್ಕೆ ಬೌಲರ್ಗಳು ಉತ್ತಮ ಬೌಲ್ ಮಾಡಿದ್ದಾರೆ ಹಾಗೂ ನಿಧಾನಗತಿಯ ಎಸೆತಗಳು ಹಾಗೂ ಯಾರ್ಕರ್ಗಳನ್ನು ಅತ್ಯುತ್ತಮವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆಡುವುದು ನಮ್ಮ ಪಾಲಿಗೆ ಕಷ್ಟವಾಗಿತ್ತು. ಅದರಲ್ಲೂ ಅವರು ಕೆಟ್ಟ ಎಸೆತಗಳನ್ನು ಜಾಸ್ತಿ ಹಾಕಲಿಲ್ಲ," ಎಂದು ಕೊಹ್ಲಿ ಶ್ಲಾಘಿಸಿದರು. "ಈ ಸೋಲು ಸ್ವಲ್ಪ ಜಾಸ್ತಿ ಬೇಸರ ಮೂಡಿಸಿದೆ. ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಸೋಲಿನ ಪಂದ್ಯದಲ್ಲಿ ನಾವು ತೊಡಗಿಸಿಕೊಂಡಿರಲಿಲ್ಲ. ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ನಾವು ಇನ್ನಷ್ಟು ಎದೆಗಾರಿಕೆ ತೋರಿಸಬೇಕಾಗಿದೆ ಹಾಗೂ ಗೆಲುವಿನ ಲಯಕ್ಕೆ ನಾವು ಮರಳಬೇಕಾದ ಅಗತ್ಯವಿದೆ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39AqQc6